ನನಗೆ ನೀನು,ನಿನಗೆ ನಾನು
ನನಗೆ ನೀನು,ನಿನಗೆ ನಾನು
" ನನಗೆ ನೀನು , ನಿನಗೆ ನಾನು " ಎನ್ನುವ ಈ ನಾಲ್ಕೇ ನಾಲ್ಕು ಪದಗಳನ್ನು ಸರಿಯಾಗಿ ನೋಡಿದರೆ , ಆಸರೆ ಎಂಬ ಪದವು ಪರಿಪೂರ್ಣತೆಯನ್ನು ಪಡೆಯುತ್ತದೆ ಅಲ್ಲವೇ. ಒಬ್ಬರ ಕಷ್ಟಕ್ಕೊ ಅಥವಾ ದುಃಖಕ್ಕೋ ಅಥವಾ ನಲಿವಿಗೋ ಪ್ರತಿಯೊಂದಕ್ಕೂ ಇನ್ನೊಬ್ಬರು ಸ್ಪಂದಿಸಿದರೆ ಅದೇ ಅಲ್ಲವೇ ಆಸರೆ ಎನ್ನುವುದು. ನೀರಲ್ಲಿ ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆಯಾಗಬಹುದು. ಅದರ ಆಸರೆಯಿಂದ ಒಂದು ಜೀವ ಉಳಿಯಬಹುದು. ಹಾಗಾದರೆ ಹುಲ್ಲುಕಡ್ಡಿಯ ಆಸರೆ ನಮಗೆ ಸಿಗುತ್ತದೆಯೆಂದರೆ ಬುದ್ದಿಯಿರುವ ನಾವುಗಳು ಸಹ ಇನ್ನೊಬ್ಬರಿಗೆ ಆಸರೆಯಾಗೋಣ.
ರೀ , ನಮಗೆ ಇಬ್ಬರಿಗೂ ವಯಸ್ಸಾಗ್ತಿದೆ. ಇಬ್ಬರಿಗೂ ತುಂಬಾ ಮೈ ಭಾರವಾಗ್ತಿದೆ. ನಿಮಗಂತೂ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರ್ತಿಲ್ಲ , ಜೊತೆಗೆ ಈ ಹಾಳಾದ ಬಿ ಪಿ ಬೇರೆ ಎರ್ತಿದೆ. ನನಗೋ ಬಿಪಿ ಎರ್ತಿದೆಯೋ , ದಿನದಿಂದ ದಿನಕ್ಕೆ ನನ್ನ ತೂಕ ಎರ್ತಿದೆಯೋ ಒಂದು ಗೊತ್ತಾಗ್ತಿಲ್ಲ. ಇದರ ನಡುವೆ ನನ್ನದಂತೂ ತಿಂಗಳಿನ ತೊಂದರೆಯನ್ನಂತೂ ಏನಂತ ಹೇಳಲಿ? ದೇವರು ನಮಗಾಗಿಯೇ ಈ ತರಹದ ಕಷ್ಟಗಳನ್ನು ಕೊಡ್ತಿದ್ದಾನೆ ಕಣ್ರೀ ಎಂದು ಸುಮಂಗಲ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಗಂಡ ರಾಮಕೃಷ್ಣನಿಗೆ ಹೇಳಿದಳು.
ಅದಕ್ಕೆ ರಾಮಕೃಷ್ಣ " ನೋಡೇ ಸುಮ್ಮಿ , ನಮ್ಮ ಹಣೆಯಲ್ಲಿ ಬರೆದದ್ದು ಎಲ್ಲವೂ ಆಗಲೇಬೇಕಲ್ಲ , ಚಿಂತಿಸಬೇಡ , ಮುಂದಿನದನ್ನು ಯಾರೂ ಬಲ್ಲವರಿಲ್ಲ , ನೋಡೋಣ. ನೀನು ಚಿಂತೆ ಮಾಡಿ ಮಾಡಿ , ಕೊರಗಿ ಸೊರಗಿ ಹೋಗಿದ್ದಿಯಾ? ಮೊದಲು ಹೇಗಿದ್ದೆ? ಎಲ್ಲದನ್ನು ಪಕ್ಕಕ್ಕಿಟ್ಟು ಈಗ ಆರಾಮಾಗಿರಬೇಕು ಅಷ್ಟೇ ಎಂದನು.
ಹೌದೂರಿ , ನಾನು ಎಷ್ಟೋ ಸಲ ಹಾಗೆ ಅಂದ್ಕೊಂಡ್ ಇರ್ಬೇಕು ಅಂತೀನಿ , ಈ ಹಾಳಾದ ಮನಸ್ಸು ಸುಮ್ನೇನೆ ಇರಲ್ಲ ಅನ್ನುತ್ತೆ , ಇವತ್ತೇನಾದರೂ ನಾವು ಹುಷಾರು ತಪ್ಪಿ ಬಿದ್ರೆ ನಮ್ಮನ್ನ ಎತ್ತಿ ಹಾಕುವವರು ಸಹ ಇಲ್ಲ , ನಮ್ಮ ಜೀವಕ್ಕೆ ಹೆಣ್ಣೋ ಅಥವಾ ಗಂಡೋ ಒಂದಾದರೂ ಮಗು ಇದ್ದಿದ್ದರೆ ನಾನು ಇಷ್ಟೊಂದು ಚಿಂತೆ ಮಾಡ್ತಾನೆ ಇರಲಿಲ್ಲ.
ಆದ್ರೆ ದೇವರು ತುಂಬಾ ಕೆಟ್ಟವನು. ಬೇಡ ಎಂದವರಿಗೆ ಒಂದರ ಮೇಲೊಂದರಂತೆ ಕೊಟ್ಟೆ ಕೊಡುವನು. ಇಲ್ಲಿ ನಾವಿಬ್ಬರು ಬಿದ್ದು ಬೇಡಿಕೊಂಡರೆ ದೇವರು , ನಮ್ಮತ್ತ ಹೊರಳಿಯೂ ನೋಡುತ್ತಿಲ್ಲ ಎಂದಳು ಸುಮಂಗಲ.
ಹೆಂಡತಿ ಎಷ್ಟೇ ಆಕ್ರೋಶವಾಗಿ ಮಾತಾಡಲಿ , ದೇವರಿಗೆ ಬೈಯಲಿ , ವಿಚಿತ್ರವಾಗಿ ವರ್ತಿಸಿದರೂ ಸಹ ರಾಮಕೃಷ್ಣ ನವರು ಮಾತ್ರ ಶಾಂತಮೂರ್ತಿಯಂತೆ ಇರುತ್ತಿದ್ದರು. ಹೆಂಡತಿಗೆ ಸಮಾಧಾನ ಮಾಡುತ್ತ , ಆಕೆಗೆ ತಾನೇ ಆಸರೆ ಎನ್ನುವ ಧೈರ್ಯದ ಬೀಜವನ್ನು ಬಿತ್ತುತ್ತ , ತಮ್ಮಲ್ಲಿ ಸಹ ಎಷ್ಟೊಂದು ನೋವು ಇದ್ದರೂ , ಯಾರಿಗೂ ಅದನ್ನು ತೋರಿಸಿಕೊಳ್ಳದೆ , ತಾವಾಯಿತು ತಮ್ಮ ಕೆಲಸವಾಯಿತು , ಫಲಾಫಲ ಆ ದೇವರಿಗೆ ಬಿಟ್ಟಿದ್ದು , ಇರುವ ತನಕ ನಾಲ್ಕಾರು ಮಂದಿಗೆ ಸಹಾಯ ಮಾಡುತ್ತ ಬದುಕೋಣ ಎನ್ನುವ ಮನಸ್ಥಿತಿ ರಾಮಕೃಷ್ಣ ಅವರದ್ದು.
ಹೀಗಾಗಿ ಮದುವೆಯಾಗಿ ಹತ್ತೊಂಬತ್ತು ವರ್ಷಗಳು ಕಳೆದರೂ , ಮಕ್ಕಳು ಆಗದಿದ್ದರೂ , ಒಂದು ದಿನವೂ ಮುದ್ದಿನ ಮಡದಿಯನ್ನು ಗದರಿಸಿ ಕೂಡ ಮಾತಾಡದ ರಾಮಕೃಷ್ಣ ಅವರು ತನ್ನ ಹೆಂಡತಿಯನ್ನೇ ಮಗು ತರ ನೋಡಿಕೊಳ್ಳುತ್ತಿದ್ದರು. ಅಪ್ಪಿ ತಪ್ಪಿ ಯಾರಾದರೂ ಆಕೆಯ ಮನಸ್ಸಿಗೆ ಸ್ವಲ್ಪವೇ ಸ್ವಲ್ಪ ನೋವು ಮಾಡಿದರೂ ಸಹ ಸಹಿಸದ ರಾಮಕೃಷ್ಣ ತನ್ನ ಉಸಿರು ಇರುವವರೆಗೂ ತನ್ನ ಹೆಂಡತಿಯನ್ನು ತನ್ನ ಮಗುವಂತೆ ನೋಡಿಕೊಳ್ಳಲು ಸಿದ್ಧನಾಗಿಬಿಟ್ಟಿದ್ದ. ಹೆಂಡತಿಯೂ ಕೂಡ ತನ್ನ ಗಂಡನ ಪ್ರತಿಯೊಂದು ಕೆಲಸದಲ್ಲೂ ಆಸರೆಯಾಗಿದ್ದಳು.
ಇಬ್ಬರೂ ಸಹ ಒಬ್ಬರಿಗೊಬ್ಬರು ಸ್ಪಂದಿಸುತ್ತ , ಪ್ರೀತಿಸುತ್ತ , ನೋವು ನಲಿವು ಎರಡರಲ್ಲೂ ಒಬ್ಬರಿಗೊಬ್ಬರು ಆಸರೆಯಾಗಿ ತಮ್ಮ ಸುಖವಾದ ಜೀವನ ಕಳೆಯುತ್ತಿದ್ದರು.
ಆಸರೆ ಎನ್ನುವುದು ಇದಕ್ಕೆ ಅಲ್ಲವೇ.?