ಮಿಸ್ಸಿಂಗ್ ಉಂಗುರ
ಮಿಸ್ಸಿಂಗ್ ಉಂಗುರ
ಅಂದು ರಂಜನಿಯ ನಿಶ್ಚಿತಾರ್ಥ. ಮಗಳು ಮೆಚ್ಚಿ ಪ್ರೀತಿಸಿರುವ ಹುಡುಗ ರಾಹುಲ್'ನೊಂದಿಗೆ ಮಗಳ
ಮದುವೆಯನ್ನು ನಿಶ್ಚಯಿಸಿ ,ಇಂದು ನಿಶ್ಚಿತಾರ್ಥ ದ
ಸಂಭ್ರಮದಲ್ಲಿದ್ದಾರೆ,ರಂಜನಿಯ ತಂದೆ ರಘುನಾಥ್.
ದೊಡ್ಡ ಉದ್ಯಮಿಯಾಗಿರುವ ಅವರು ಮಗಳ ಮದುವೆ ನಿಶ್ಚಿತಾರ್ಥ ವನ್ನು ತಮ್ಮ ಮನೆಯಲ್ಲೇ ಏರ್ಪಡಿಸಿದ್ದಾರೆ.
ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡ ಮಗು ರಂಜನಿಯನ್ನು ಕಂಡರೆ ರಘುನಾಥ್ ಗೆ ಇನ್ನಿಲ್ಲದ ಅಕ್ಕರೆ. ಅವಳು ಸ್ವಲ್ಪ ನೊಂದು ಮುಖ ಚಿಕ್ಕದು ಮಾಡಿಕೊಂಡರೂ ಅವರು ಸಹಿಸುತ್ತಿರಲಿಲ್ಲ. ಮಗಳನ್ನು ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬೆಳೆಸಿದ ಅವರ ದೊಡ್ಡಮ್ಮನೆಂದರೆ ಅವರಿಗೆ ತುಂಬಾ ಗೌರವ. ಇಂತಹ ಅಕ್ಕರೆಯ ಅರಗಿಣಿ ರಂಜನಿಗೆ ಇಂದು ನಿಶ್ಚಿತಾರ್ಥ. ಹುಡುಗನೂ ಸಹ ಹೆಸರಾಂತ ಉದ್ಯಮಿಯ ಪುತ್ರ.
ನಿಶ್ಚಿತಾರ್ಥ ದ ವೇಳೆಗೆ ಸರಿಯಾಗಿ ರಾಹುಲ್ ನ ಕುಟುಂಬದವರೆಲ್ಲರೂ ಬಂದು, ಎಲ್ಲರನ್ನೂ ಸ್ವಾಗತಿಸಿದ ನಂತರ ಶಾಸ್ತ್ರಗಳು ಪ್ರಾರಂಭವಾಗುವ ಸಮಯ.
ಒಳಗಿನಿಂದ ಬಂದ ದೊಡ್ಡಮ್ಮ, ರಘುನಾಥ್ ಅವರನ್ನು ಒಂದು ನಿಮಿಷ ಬರುವಂತೆ ಕರೆದಾಗ, ದೊಡ್ಡಮ್ಮನ ಆತಂಕದ ಮುಖವನ್ನು ಗಮನಿಸಿ, ಅವರನ್ನೇ ಹಿಂಬಾಲಿಸಿದ ರಘುನಾಥ್ ವಿಷಯ ಏನೆಂದು ವಿಚಾರಿಸಿದಾಗ, ಹುಡುಗನಿಗಾಗಿ ತಂದಿದ್ದ ನಿಶ್ಚಿತಾರ್ಥ ದ ಉಂಗುರ ಕಾಣೆಯಾಗಿರುವ ವಿಷಯ ತಿಳಿದು, ಅವರಿಗೆ ಶಾಕ್ ಆಯಿತು. ಉಂಗುರ ಇಟ್ಟಿದ್ದ ಕಡೆಯಿಂದ ಮರೆಯಾಗಿತ್ತು. ರಘುನಾಥ್ ಹಾಗೂ ಅವರ ದೊಡ್ಡಮ್ಮ ಇಬ್ಬರಿಗೂ ಮುಂದೆ ಏನು ಮಾಡುವುದು ಎಂದು ತೋಚದಂತಾಯಿತು.
ಈಗಾಗಲೇ ಹುಡುಗನ ಮನೆಯವರು ಮುಂದಿನ ಶಾಸ್ತ್ರ ಗಳಿಗೆ ಸಿದ್ಧರಾಗಿರುವ ಇಂತಹ ಸಮಯದಲ್ಲಿ ನಿಶ್ಚಿತಾರ್ಥ ದ ಉಂಗುರ ಮರೆಯಾಗಿರುವುದೆಂದರೆ ಸಾಮಾನ್ಯವಾದ ವಿಷಯವಲ್ಲ.
ಮನೆಯವರೆಲ್ಲರೂ ಉಂಗುರಕ್ಕಾಗಿ ಹುಡುಕಾಡುತ್ತಿದ್ದರು. ರಂಜನಿಗೆ ವಿಷಯ ತಿಳಿದಾಗ, ಅವಳೂ ಸಹ ಮುಖ ಚಿಕ್ಕದು ಮಾಡಿಕೊಂಡು ಒಂದು ಕಡೆ ಸಪ್ಪೆಯಾಗಿ ಕುಳಿತು ಬಿಟ್ಟಾಗ, ರಘುನಾಥರವರಿಗೆ ತುಂಬಾ ಬೇಸರವಾದರೂ ಅವಳ ಮುಂದೆ ತೋರಿಸಿಕೊಳ್ಳದೆ ಏನಾದರೂ ವ್ಯವಸ್ಥೆ ಮಾಡೋಣ ಎನ್ನುತ್ತಾ ಅವಳಿಗೆ ಧೈರ್ಯ ತುಂಬಿದರು.
ಎಲ್ಲರೂ ಗಡಿಬಿಡಿಯಿಂದ , ಗಾಬರಿಯಿಂದ ಉಂಗುರವನ್ನು ಹುಡುಕುತ್ತಿದ್ದಾಗ, ನಿಶ್ಚಿತಾರ್ಥ ದ ಎಲ್ಲಾ ವ್ಯವಸ್ಥೆ ಗಳನ್ನೂ ನೋಡಿಕೊಳ್ಳುತ್ತಿದ್ದ ರಂಜನಿಯ ಕ್ಲೋಸ್ ಫ್ರೆಂಡ್ ರಮ್ಯಾ ,ರಂಜನಿಯನ್ನು ಹೊರಗೆ ಕರೆದೊಯ್ಯಲು ಬಂದಾಗ, ನಿಶ್ಚಿತಾರ್ಥ ದ ಮಿಸ್ಸಿಂಗ್ ಉಂಗುರವನ್ನು ಹುಡುಕುತ್ತಿರುವುದನ್ನು ನೋಡಿ, ಜೋರಾಗಿ ನಗುವುದಕ್ಕೆ ಪ್ರಾರಂಭಿಸಿದಳು.
ರಮ್ಯ ನಗುತ್ತಿರುವುದನ್ನು ನೋಡಿದ ರಂಜನಿ, ಗೆಳತಿಯನ್ನು ಚೆನ್ನಾಗಿ ದಬಾಯಿಸಿ, "ಬೆಕ್ಕಿಗೆ ಚೆಲ್ಲಾಟ ಆದರೆ ಇಲಿಗೆ ಪ್ರಾಣಸಂಕಟ" ಅಂತ ಬಯ್ದು, ಅವಳು ನಗುವುದಕ್ಕೆ ಕಾರಣವನ್ನು ಕೇಳಿದಾಗ,
"ಅಯ್ಯೋ ಆ ಉಂಗುರಕ್ಕಾಗಿ ನೀವೆಲ್ಲ ಏಕೆ ಹುಡುಕುತ್ತಾ ಇದ್ದೀರಾ, ಅದನ್ನು ನಾನು ಈಗಾಗಲೇ ತಾಂಬೂಲದ ತಟ್ಟೆಯಲ್ಲಿ ಇಟ್ಟಿದ್ದೀನಿ.ಡೊಂಟ್ ವರಿ, ಎಲ್ಲಾ ಹೊರಗಡೆ ಬನ್ನಿ"ಎಂದು ರಮ್ಯಾ ಹೇಳಿದೊಡನೇ ಉಂಗುರವನ್ನು ಹುಡುಕುತ್ತಿದ್ದ ಎಲ್ಲರೂ ದೊಡ್ಡ ಉಸಿರು ಬಿಡುತ್ತಾ ನಿರಾಳರಾದರು. ಎಲ್ಲರ ಆತಂಕಗಳೂ ಕಳೆದು, ಮುಂದೆ ಸುಸೂತ್ರವಾಗಿ ನಿಶ್ಚಿತಾರ್ಥ ನಡೆಯಿತು.