ನನ್ನ ನೋವು ಯಾರಿಗೂ ಬೇಡ
ನನ್ನ ನೋವು ಯಾರಿಗೂ ಬೇಡ
ಅಪ್ಪ ಅಮ್ಮನಿಗೆ ಇಬ್ಬರೇ ಮಕ್ಕಳು. ಅದೂ ಹೆಣ್ಣು ಮಕ್ಕಳು. ತುಂಬಾ ಚಿಕ್ಕ ಹಳ್ಳಿಯಾಗಿದ್ದರಿಂದ ಓದಿಗೆ ತಲೆ ಕೆಡಿಸಿಕೊಳ್ಳಲಾರದ ರಂಗಪ್ಪ ದೊಡ್ಡ ಮಗಳ ಶೈಲಜಳನ್ನು ನಾಲ್ಕನೇ ತರಗತಿಗೆ ಶಾಲೆ ಬಿಡಿಸಿ ಮನೆ ಕೆಲಸ ಕಲಿತುಕೊಳ್ಳಲು ಹೇಳಿದನು. ಆದರೆ ಕಮಲಾ ಮಕ್ಕಳಿಗೆ ಓದಿನ ಅವಶ್ಯಕತೆ ಇದೆ, ನಮ್ಮಂತೆ ಅವರಾಗುವುದು ಬೇಡ ಎಂದು ಹೇಳಿದರೂ ಕೇಳದ ಆತ ಶೈಲಜಳ ಓದಿಗೆ ಕತ್ತರಿ ಹಾಕಿಯಾಗಿತ್ತು. ಚಿಕ್ಕವಳು ಶಾಂತಲಾ , ಅವಳು ಸಹ ನಾಲ್ಕನೇ ತರಗತಿಗೆ ಬಂದಾಗ ರಂಗಪ್ಪನ ವರಸೆ ಹಾಗೆಯೇ ಇತ್ತು. ಆದರೆ ಶೈಲಜಳ ಹಾಗೆ ಶಾಂತಲಾ ಸುಮ್ಮನಿರದೆ ಹಠ ಹಿಡಿದು ಮುಂದೆ ಒದಲೇಬೇಕೆಂದು ಹೇಳಿದಳು. ಕೊನೆಗೆ ಮಗಳ ಹಠಕ್ಕೆ ಮಣಿದ ರಂಗಪ್ಪ ಓದಲು ಒಪ್ಪಿಗೆ ಕೊಟ್ಟ. ಹಾಗಂತ ಶಾಂತಲಾಳನ್ನು ಅವರಪ್ಪ ಓಡಿಸಿದ್ದು ಬರಿ ಆರನೇ ತರಗತಿವರೆಗೆ ಮಾತ್ರ. ಮುಂದಿನ ಓದಿಗೆ ಪಕ್ಕದೂರಿಗೆ ಹೋಗಬೇಕಾದ ಅನಿವಾರ್ಯತೆ ಜೊತೆಗೆ ಬಸ್ಸಿನ ಅನಾನುಕೂಲತೆ ಹೀಗಿದ್ದಾಗ ತಂದೆ ತಾಯಿಗಳು ಮುಂದಿನ ಓದಿಗೆ ಧೈರ್ಯ ಮಾಡುತ್ತಿದ್ದುದು ಆಗ ಕಮ್ಮಿನೇ.
ಹೀಗೆ ಅಕ್ಕ ತಂಗಿಯರ ಓದು ನಿಂತು ಮನೆ ಕೆಲಸದಲ್ಲಿ ತೊಡಗಿದರು. ಅಪ್ಪ ಅಮ್ಮ ಹೊಲದ ಕೆಲಸದಲ್ಲಿ ನಿರತರಾಗಿದ್ದರು. ಹೊಲದಲ್ಲಿ ಕೆಲಸ ಮಾಡುತ್ತಾ ರಂಗಪ್ಪ ಹಸಿವಾಗಿ ಊಟ ಮಾಡಲು ಬಂದು ಕುಳಿತಿರುವಾಗ, ರಂಗಪ್ಪ ಎದೆನೋವು ಅನ್ನುತ್ತಾ ಕೆಳಗೆ ದೊಪ್ಪನೆ ಬಿದ್ದವನೆ ಉಸಿರು ಬಿಟ್ಟಿದ್ದನು. ಕಮಲಾ ಮತ್ತು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತು. ಆದರೇನು ಮಾಡುವುದು ರಂಗಪ್ಪ ಎಲ್ಲರನ್ನು ಬಿಟ್ಟು ಹೋಗಿಯಾಗಿತ್ತು. ಎಲ್ಕರೂ ಸಮಯಕ್ಕೆ ತಕ್ಕಂತೆ ಸಾಗಲೇಬೇಕಲ್ಲ.
ಹೀಗೆ ಸ್ವಲ್ಪ ದಿನದಲ್ಲೇ ಶೈಲಜಳ ಮದುವೆಯನ್ನು ರಮೇಶ್ ಜೊತೆ ಮಾಡಿ ಕಮಲಾ ತನ್ನ ಮಗಳನ್ನು ಗಂಡನ ಮನೆಗೆ ಕಳಿಸಿದಳು. ಗಂಡನ ಮನೆಯಲ್ಲಿ ಎಲ್ಲವೂ ಚೆನ್ನಾಗಿದ್ದು ಶೈಲಜಳ ಸಂಸಾರ ಚೆನ್ನಾಗಿ ಸಾಗಿತ್ತು. ರಮೇಶ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಗಂಡ ಹೆಂಡತಿ ಅಲ್ಲಿಯೇ ಮನೆ ಮಾಡಿ ವಾಸವಾಗಿದ್ದರು. ಖುಷಿ, ಸಂತೋಷ, ಮನೆ ತುಂಬಾ ತುಂಬಿತ್ತು. ಮದುವೆ ಆಗಿ ವರುಷಗಳೇನೂ ಓಡತೊಡಗಿದ್ದವು. ಆದರೆ ಮನೆಯಲ್ಲಿ ಓಡಾಡಲು ಪುಟ್ಟ ಕಂದಮ್ಮನ ಪಾದಗಳೇ ಇಲ್ಲದಾಗಿತ್ತು.
ಅಪ್ಪನನ್ನು ಕಳೆದುಕೊಂಡಿದ್ದ ಅಕ್ಕ ತಂಗಿಯರು ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರೂ ಸಹ ಪಾರ್ಶ್ವವಾಯು ಕಾಯಿಲೆ ಬಂದು ವರ್ಷೋಪ್ಪತ್ತಿನಲ್ಲಿ ತೀರಿಹೋದಳು. ಆಗ ಶೈಲಜಾ ಮತ್ತು ರಮೇಶನ ಹೆಗಲಿಗೆ ಶಾಂತಲಾಳ ಜವಾಬ್ದಾರಿ ಬಿದ್ದು ಮಕ್ಕಳಿಲ್ಲದ ಅವರು ಶಾಂತಲಾಳನ್ನೇ ಮಗಳಂತೆ ನೋಡಿಕೊಂಡು ತಾವೇ ಮುಂದೆ ನಿಂತು ಸರಕಾರಿ ನೌಕರಿ ಮಾಡುತ್ತಿದ್ದ ಬಸವರಾಜ್ ಜೊತೆ ಮದುವೆ ಮಾಡಿದರು. ಯಾವ ಕೊರತೆಯೂ ಇರದ ಹಾಗೆ, ದಾಮ್ ದೂಮ್ ಅಂತ ಮದುವೆ ಮಾಡಿಕೊಟ್ಟರು.
ಶೈಲಜಾಳಿಗೆ ಮಕ್ಕಳಿಲ್ಲ ಎನ್ನುವ ಕೊರಗು, ತನ್ನಿಂದ ಗಂಡನಿಗೆ ಒಂದು ಮಗುವನ್ನು ಕೊಡಲಾಗಲಿಲ್ಲ ಎಂದು ಪ್ರತಿದಿನವೂ ಕೊರಗುತ್ತಿದ್ದಳು.
ಮದುವೆಯಾಗಿ ಇಪ್ಪತ್ತು ವರುಷಗಳು ಕಳೆದವು. ಒಬ್ಬರಿಗೊಬ್ಬರು ತಾವೇ ಮಕ್ಕಳಾಗಿದ್ದರು. ಅರ್ಥಪೂರ್ಣ ಜೀವನ ಮಾಡುತ್ತಿದ್ದರು. ರಮೇಶ್ ಮನೆಯಲ್ಲಿ ಎರಡನೇ ಮದುವೆ ಮಾಡಲು ಬಹಳ ಪ್ರಯತ್ನಿಸಿದರು. ಆದರೆ ಶೈಲಜಳ ಒಳ್ಳೆಯತನ ಮತ್ತು ಮುಗ್ಧತೆ ರಮೇಶನನ್ನು ಸುತ್ತುವರೆದು ಬಂದಿಸಿದ್ದವು. ಮಗು ಬೇಕೆಂದಾಗಲಿ, ನಿನ್ನಿಂದ ಮಗು ಕೊಡಲಿಕ್ಕೆ ಆಗಿಲ್ಲ ಎಂದಾಗಲಿ, ಒಂದು ದಿನವೂ ರಮೇಶ್ ಬಾಯಿಂದ ಬರಲಿಲ್ಲ.
ಶೈಲಜಾ ತಂಗಿ ಶಾಂತಲಾ, ಇಬ್ಬರು ಮಕ್ಕಳ ತಾಯಿಯಾಗಿ ಗಂಡನ ಮನೆಯಲ್ಲಿ ಸುಖವಾಗಿದ್ದಳು. ಶೈಲಜಾ, ರಮೇಶ್ ಹೋಗಿ ಶಾಂತಲಾ ಮನೆಯಲ್ಲಿ ಎಂದೂ ಉಳಿಯಲಾರದವರು ಅದೇಕೋ ಈ ಬಾರಿ ನಾಲ್ಕು ದಿನ ಉಳಿದು ಖುಷಿಯಿಂದ ಇದ್ದು ಬಂದಿದ್ದರು. ಮಕ್ಕಳೊಂದಿಗೆ ಮಕ್ಕಳಾಗಿ ಸಂತೋಷದಿಂದ ಕಾಲ ಕಳೆದಿದ್ದರು.
ಒಬ್ಬರಿಗೊಬ್ಬರು ಹೊಂದಿಕೊಂಡು ಸುಂದರ ಜೀವನ ಮಾಡುತ್ತಿದ್ದ ಚೆಂದದ ಜೋಡಿಯ ಮೇಲೆ ದೇವರ ಕಣ್ಣು ಬಿದ್ದಿತ್ತೇನೋ ಗೊತ್ತಿಲ್ಲ, ಅಪ್ಪ ಅಮ್ಮನನ್ನು ಕಳೆದುಕೊಂಡು, ಇದ್ದೊಬ್ಬ ತಂಗಿಯನ್ನು ತಾವೇ ಮದುವೆ ಮಾಡಿಕೊಟ್ಟು, ಮಕ್ಕಳಿಲ್ಲದೆ ಒಬ್ಬರಿಗೊಬ್ಬರು ಆಸರೆಯಾಗಿದ್ದ ರಮೇಶ ಶೈಲಜಾ ಒಂದು ದಿನವೂ ಜಗಳಾಡಿದವರಲ್ಲ, ಸಣ್ಣ ಮನಸ್ತಾಪ ಮಾಡಿಕೊಂಡವರಲ್ಲ, ನಗುತ್ತ ಇಪ್ಪತ್ತು ವರ್ಷದ ದಾಂಪತ್ಯ ಜೀವನ ಕಳೆದವರು. ಒಂದು ಸಣ್ಣ ಜ್ವರ ಬಂದು ರಮೇಶ್ ಮೂರು ದಿನದಲ್ಲಿ ತೀರಿಕೊಂಡೇ ಬಿಟ್ಟನು. ಜ್ವರ ನೆಪವಾಯಿತೋ ,ಆಯುಷ್ಯ ತೀರಿತೋ, ಒಟ್ಟಿನಲ್ಲಿ ಶೈಲಜಾ ಗಂಡನನ್ನು ಕಳೆದುಕೊಂಡಳು.
ಅಪ್ಪ ಅಮ್ಮನನ್ನು ಕಳೆದುಕೊಂಡಾಗಲೂ ಸಹ ಒಂಟಿಭಾವನೆ ಬಂದಿರಲಿಲ್ಲ, ಆದರೆ ಈ ಬಾರಿ ದೇವರು ಅಟ್ಟಹಾಸ ಮೆರೆದಿದ್ದ. ನಿಜವಾಗಲೂ ಒಂಟಿ. ಮತ್ತೆ ಅನಾಥೆಯಾಗಿ ಶೈಲಜಾ ಮುಂದಿನ ತನ್ನ ಜೀವನವನ್ನು ಕಳೆಯಬೇಕಿತ್ತು. ಎಷ್ಟೊಂದು ನೋವು ತುಂಬಿತ್ತು ಅವಳಿಗೆ.
ಅಪ್ಪ ಹೊರಗಡೆ ಒಂದು ದಿನವೂ ಬಿಟ್ಟವರಲ್ಲ, ಹೊರಗಿನ ಪ್ರಪಂಚ ಗೊತ್ತಿಲ್ಲ, ಗಂಡ ಯಾವುದನ್ನು ಕಲಿಸಲಿಲ್ಲ, ಮಕ್ಕಳೂ ಬೇರೆ ಇಲ್ಲ, ಹೊರಗಿನ ಸಮಾಜ ಭಯಾನಕವಾಗಿ ಕಾಣುತ್ತಿದೆ, ಎಲ್ಲವೂ ಮಸುಕಾಗಿ ಕಾಣುತ್ತಿದೆ, ಯಾವುದರ ಬಗ್ಗೆಯೂ ತಿಳಿದಿಲ್ಲ, ಏನು ಮಾಡುವುದು, ಹೇಗೆ ಮಾಡುವುದು, ಯಾರಿಗೆ ಹೇಳುವುದು ಅಂತ ಶೈಲಜಾ ತುಂಬಾ ಭಯದಿಂದ ನಲುಗಿ ಹೋದಳು..
ಆಗ ಶೈಲಜಾ, ''ದೇವರೇ, ನನ್ನ ನೋವು ಯಾರಿಗೂ ಬೇಡ, ಇದನ್ನು ತಡೆದುಕೊಂಡು ಬದುಕುವುದಾದರೂ ಹೇಗೆ,? ಈ ನೋವನ್ನು ಮತ್ತ್ಯಾರಿಗೂ ಕೊಡಬೇಡ ಎಂದು ಪರಿಪರಿಯಾಗಿ ಕೇಳಿಕೊಂಡಳು.