ನಾನೊಂದು ತೀರ, ನೀನೊಂದು ತೀರ.
ನಾನೊಂದು ತೀರ, ನೀನೊಂದು ತೀರ.
ಅಂದು ನಾನು , ನಿನ್ನನ್ನು ಅದೆಷ್ಟು ಬೇಡಿಕೊಂಡೇ , ಗೋಗರೆದೆ , ನಿನಗೆ ನನ್ನ ಮಾತನ್ನು ಕೇಳಿಸಿಕೊಳ್ಳುವ ಸೌಜನ್ಯವಾಗಲಿ , ಸಂಯಮವಾಗಲಿ ಎಲ್ಲಿತ್ತು ಆಗ , ನಾನು ಏನೇ ಹೇಳಿದರೂ ನಿನಗದು ಎರಡನೇ ಅರ್ಥದಂತೆ ಭಾಸವಾಗ್ತಾ ಇತ್ತು. ನಿಜ ಹೇಳ್ತೀನಿ ಇವತ್ತಿನ ಈ ಪರಿಸ್ಥಿತಿಗೆ ನೀನೇ ಕಾರಣ. ನಾನೊಂದು ತೀರ , ನೀನೊಂದು ತೀರ ಅಂತ ಬದುಕುತ್ತಿರುವುದಕ್ಕೂ ನೀನೇ ಕಾರಣ. ಸಮಾಧಾನವಾಗಿ ನಾನು ಹೇಳಿದ್ದನ್ನು ಕೇಳಿದ್ದಿದ್ದರೆ ನಾವಿಬ್ಬರು ನಮ್ಮ ಮುದ್ದಿನ ಮಗ ವಿಹಾನ್ ಜೊತೆಗೆ ಖುಷಿಯಾಗಿ ಇರಬಹುದಿತ್ತು. ನಿನಗೆ ಆ ಸುಡುಗಾಡು ಕೆಲಸ , ಆ ಹಾಳಾದ ನಿನ್ನ ಫ್ರೆಂಡ್ ಸರ್ಕಲ್ ಮಾತ್ರ ಮುಖ್ಯ ಆಯ್ತು , ಛೀ , ಹೆಣ್ಣಾದವಳಿಗೆ ಸ್ವಲ್ಪನಾದರೂ ಸಂಸ್ಕಾರ ಇರಬೇಕು. ಹಣದ ಕೊಬ್ಬಿನಿಂದ ಎಲ್ಲವನ್ನು ಅಳೆಯುವುದಾದರೆ ಪ್ರೀತಿ , ಸಂಬಂಧಕ್ಕೆ ಬೆಲೆ ಮತ್ತೆ ಜಾಗ ಎರಡೂ ಇರುತ್ತಿರಲಿಲ್ಲ. ಅಂದಿನ ನಿನ್ನ ದುಡುಕಿನ ನಿರ್ಧಾರ ನನ್ನನ್ನು ನಿನ್ನನ್ನು ಇಬ್ಬರನ್ನು ಎರಡು ದಂಡೆಗಳಿಗೆ ನೂಕಿಬಿಟ್ಟಿತು ಅಲ್ಲವೇ ಎಂದು ವಿಶಾಲ್ , ತನ್ನ ಮುದ್ದು ಮಗ ವಿಹಾನ್ ನನ್ನು ಮಲಗಿಸುತ್ತ ತನ್ನ ಆರು ವರ್ಷದ ಹಿಂದಿನ ಹಳೆಯ ನೆನಪಿಗೆ ಜಾರಿದ. ಅರುಣಾ ತನ್ನ ಬಾಳಲ್ಲಿ ಬಂದಿದ್ದನ್ನು ನೆನಪಿಗೆ ತಂದುಕೊಂಡನು.
ಸೀದಾ ಸಾದಾ , ಸರಳ , ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ವಿಶಾಲ್ , ತಾನಾಯಿತು ,ತನ್ನ ಕೆಲಸವಾಯಿತು ಎಂದು ಇರುತ್ತಿದ್ದನು. ಹೇಳಿಕೊಳ್ಳುವಂತಹ ದೊಡ್ಡ ಮನೆ ಇರಲಿಲ್ಲ ನಿಜ , ಆದರೆ ಜೀವನ ಮಾಡಲು ಯಾವ ಕೊರತೆಯು ಇರಲಾರದಷ್ಟು ಸುಂದರವಾದ ಮನೆ ಅದಾಗಿತ್ತು. ಮನೆಯಲ್ಲಿ ಆಳು ಕಾಳು ಇರಲಿಲ್ಲ , ಆದರೆ ಎಲ್ಲ ಸೌಲಭ್ಯಗಳನ್ನು ಹೊಂದಿದ ಮನೆ ಅದಾಗಿತ್ತು. ಅಪ್ಪ ಅಮ್ಮನೊಂದಿಗೆ ಸುಂದರವಾದ ಜೀವನ ಮಾಡುತ್ತಿದ್ದ ವಿಶಾಲ್.
ಈ ವಿಶಾಲ್ ನ ಜೀವನದಲ್ಲಿ ಮದ್ಯ ಪ್ರವೇಶಿಸಿದವಳೇ ಅರುಣಾ. ದ ಗ್ರೇಟ್ , ಬಿಗ್ ಬಿಜನೆಸ್ಸ್ ಮ್ಯಾನ್ ರಾಮ್ ಮೋಹನ್ ಅವರ ಏಕೈಕ ಮಗಳೇ ಈ ಅರುಣಾ. ತನ್ನ ತಂದೆಯ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವಿಶಾಲ್ ಹಿಂದೆ ಬಿದ್ದಳು. ಆತನ ಗುಣ , ನಡತೆ , ರೂಪ , ಜ್ಞಾನ ಎಲ್ಲವನ್ನು ಇಷ್ಟ ಪಟ್ಟಳು. ಅಪ್ಪನ ವಿರೋಧವಾಗುತ್ತೆ ಎನ್ನುವ ಸತ್ಯ ಗೊತ್ತಿದ್ದರೂ ವಿಶಾಲ್ ಹಿಂದೆ ಬಿದ್ದಳು. ವಿಶಾಲ್ ತಿರಸ್ಕರಿಸಿದರೂ ಬಿಡದೆ , ಹಠಕ್ಕೆ ಬಿದ್ದು ಮದುವೆ ಆದಳು. ಮದುವೆ ನಂತರ ಕೇವಲ ಒಂದು ಒಂದೂವರೆ ವರ್ಷ ಮಾತ್ರ ಚೆನ್ನಾಗಿದ್ದಳು. ಬರುಬರುತ್ತಾ ಆ ಮನೆಯ ಸಂಪ್ರದಾಯಗಳು , ಆಚರಣೆಗಳು , ಇವಳಿಗೆ ಇರಿಟೇಟ್ ಮಾಡಲು ಶುರುವಾದವು. ಅಷ್ಟೊತ್ತಿಗಾಗಲೇ ಆಕೆ ಬಸರಿಯಾಗಿದ್ದಳು. ಅದೂ ಕೂಡ ಬೇಡವಾಗಿತ್ತು. ಆದರೆ ಮಗುವನ್ನು ತೆಗೆಸಲು ಬಾರದ ಸಮಯಕ್ಕೆ ಗರ್ಭಿಣಿ ಎಂದು ಗೊತ್ತಾಗಿದ್ದಕ್ಕೆ ಸುಮ್ಮನಿದ್ದಳು. ಅರುಣಾಳ ಅಪ್ಪ ಆಕೆಯನ್ನು ಮನೆಯಿಂದಾಚೆ ಹಾಕಿಯಾಗಿತ್ತು. ಅರುಣಾಳನ್ನು ವಿಶಾಲ್ ಮನೆಯವರು ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಪ್ರತಿದಿನವೂ ಒಂದೊಂದು ಕೊಂಕು ತೆಗೆದು ಜಗಳಕ್ಕಿಳಿಯುತ್ತಿದ್ದಳು. ಆದರೂ ವಿಶಾಲ್ ನ ಅಪ್ಪ ಅಮ್ಮ ಸಹಿಸಿಕೊಂಡಿದ್ದರು. ದಿನವೂ ಮೋಜು ಮಸ್ತಿ ಮಾಡಿದಾಕೆಗೆ ಆ ಮನೆ ಜೈಲಿನಂತಾಗಿತ್ತು. ಹೊರಗಡೆ ಹಾರಬೇಕಿತ್ತು. ಈಗ ಕೆಲಸಕ್ಕೆ ಹೋಗುವ ನೆಪ ಮಾಡಿದಳು. ಕೆಲಸವನ್ನೂ ಹುದುಕಿಕೊಂಡಳು. ಬೇಡ ಎಂದರೂ ಕೇಳದ ಆಕೆ ತನ್ನ ಸುತ್ತ ಸ್ನೇಹಿತರ ಬಲೆ ಹೆಣೆದುಕೊಂಡಳು. ಹೇಳಿದವರ ಮಾತನ್ನು ಕೇಳಲಾರದ ಮನಸ್ಥಿತಿ ಅವಳದಾಗಿತ್ತು. ವಿಶಾಲ್ , ಕೊನೆಗೆ ಅರುಣಾಳನ್ನು ಕೂರಿಸಿಕೊಂಡು , ತನಗೆ ಮಗು ಹೆತ್ತು ಕೊಟ್ಟು , ಆಮೇಲೆ ನಿನಗಿಷ್ಟ ಬಂದಂತೆ ಇರಲು ಹೇಳಿದನು. ಆಕೆಯ ಊಸಾಬರಿಗೆ ತಾವ್ಯಾರೂ ಬರುವುದಿಲ್ಲ ಎಂದು ಹೇಳಿದನು. ಆಕೆಯೂ ಒಪ್ಪಿದಳು.
ಆ ಮಾತಿನ ಪ್ರಕಾರ, ಮಗು ಹೆತ್ತು ಕೊಟ್ಟು ಹೊರಟೇ ಹೋದಳು. ಒಮ್ಮೆಯೂ ಮಗುವನ್ನು ನೋಡಲು ಸಹ ಬರಲಿಲ್ಲ. ಮುದ್ದಾದ ಗಂಡು ಮಗ , ವಿಹಾನ್ ಎಂಬ ಹೆಸರಿನಿಂದ ಅಜ್ಜ ಅಜ್ಜಿ ಹಾಗೂ ಅಪ್ಪನ ಜೊತೆಗೆ ಬೆಳೆಯತೊಡಗಿತು. ಈಗ ಮಗನಿಗೆ ಆರು ವರ್ಷ , ಇನ್ನೆರಡು ದಿನಕ್ಕೆ ಹುಟ್ಟಿದ ಹಬ್ಬ ಇದೆ. ಆದರೆ ಇವತ್ತ್ಯಾಕೋ ಅರುಣಾ ತುಂಬಾ ನೆನಪಾಗ್ತಿದ್ದಾಳೆ. ಆಕೆಗೆ ಮುದ್ದಾದ ಮಗನಿಗಿಂತ ಆ ಹಾಳಾದ ಕೆಲಸ , ಹಣ , ಮೋಜು ,ಮಸ್ತಿ , ಸ್ನೇಹಿತರೆ ಹೆಚ್ಚಾಗಿ ಹೋದರು. ನನ್ನನ್ನು ಒಂಟಿಯನ್ನಾಗಿ ಮಾಡಿ , ಹೊರಟೆ ಹೋದಳು.
ಹೋಗಲಿಬಿಡು , ಇದ್ದಾಗಲಾದರೂ ಒಂದಿನವೂ ನೆಮ್ಮದಿಯಿಂದ ಇರಲಿಲ್ಲ. ಪ್ರೀತಿ ತೋರಲಿಲ್ಲ , ಅಂದ ಹಾಳಾಗುವುದೆಂದು ನನ್ನನ್ನು ಕೂಡ ಅವಾಯ್ಡ್ ಮಾಡಿದೆ. ಗರ್ಭದಲ್ಲಿದ್ದ ಆ ಮಗುವನ್ನು ಒಮ್ಮೆಯೂ ಪ್ರೀತಿಸಲಿಲ್ಲ. ನಶ್ವರವಾದ ಹಣ ಮತ್ತು ರೂಪಕ್ಕೆ ಬೆಲೆ ಕೊಟ್ಟು , ನೀನೊಂದು ತೀರವಾದೆ , ನಾನೊಂದು ತೀರವಾದೆ.