ಸಂಶಯದ ಭೂತ ಹೆಗಲೇರಿದರೆ.
ಸಂಶಯದ ಭೂತ ಹೆಗಲೇರಿದರೆ.
ಸಂಶಯವೆಂಬ ಭೂತವು ಹೆಗಲೇರಿದರೆ ಮುಗಿಯಿತು. ಸಂಸಾರದ ಬಂಡಿ ಎತ್ತ ಓಡುವುದೊ ನಾ ಕಾಣೆ.
ಗಂಡ ಹೆಂಡತಿ ಅಂದ ಮೇಲೆ ಇಬ್ಬರು ಸಹ ಪರಸ್ಪರ ನಂಬಿಕೆ ವಿಶ್ವಾಸ ಹೊಂದಿರಬೇಕು. ಬಾಳ ಬಂಡಿಯ ಎರಡು ಚಕ್ರಗಳು ಸಮನಾಗಿ ಓಡುತ್ತಿರಬೇಕು. ಹಾಗಿದ್ದರೆ ಮಾತ್ರ ಸುಂದರವಾದ ಜೀವನ ನಡೆಸಲು ಸಾಧ್ಯ.
ಆದರೆ ಗಂಡ ಅಥವಾ ಹೆಂಡತಿಗೆ ಒಬ್ಬರ ಮೇಲೆ ಇನ್ನೊಬ್ಬರಿಗೆ ನಂಬಿಕೆ ವಿಶ್ವಾಸ ಕಳೆದು ಹೋಗಿ ಸಂಶಯದ ಭೂತ ಬೆಂಬಿಡದೇ ಬೆನ್ನತ್ತಿದ್ದರೆ ಹೇಗೆ ತಾನೇ ಸುಖಮಯ ಸಂಸಾರ ನಡೆಯಲು ಸಾಧ್ಯ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎನ್ನುವಂತಾಗುತ್ತದೆ.
ಶರಾವತಿ, ಕರಣ್ ಮನೆಯವರೆಲ್ಲ ನೋಡಿ ಒಪ್ಪಿ, ಮದುವೆಯಾದ ಜೋಡಿ. ತುಂಬಾ ಸುಂದರವಾದ ಜೋಡಿ. ಮದುವೆಯಂತೂ ಖುಷಿ ಖುಷಿಯಾಗಿ, ಚೆನ್ನಾಗಿ ಆಯ್ತು. ಕರಣ್ ತನ್ನ ಹೆಂಡತಿ ಶರು ಮೇಲೆ ಅತೀಯಾದ ಪ್ರೀತಿ ಹೊಂದಿದ್ದನು. ಶರಾವತಿ ಕೂಡ ಅಷ್ಟೇ ಪ್ರೀತಿ ಮತ್ತು ನಂಬಿಕೆ ಗಂಡನ ಮೇಲಿಟ್ಟುಕೊಂಡಿದ್ದಳು. ಒಟ್ಟಾರೆಯಾಗಿ ಎಲ್ಲರಿಗೂ ಇವರಿಬ್ಬರದು ಹೇಳಿ ಮಾಡಿಸಿದ ಜೋಡಿ ಅಂತ ಅನ್ನಿಸುವಂತೆ ಖುಷಿಯಾಗಿರುತ್ತಿದ್ದರು.
ಶರಾವತಿ ಕರಣ್ ಇಬ್ಬರೂ ಒಟ್ಟಾರೆಯಾಗಿ ಮನೆ ಕೆಲಸ ಮುಗ್ಸಿ, ಹೊಲದ ಕೆಲಸಕ್ಕಾಗಿ ಹೊಲಕ್ಕೂ ಇಬ್ಬರೂ ಸೇರಿಯೇ ಹೋಗುತ್ತಿದ್ದರು. ಬದುಕಿನ ಬಂಡಿ ಎಳೆಯಲು ಇಬ್ಬರು ಸೇರಿ ದುಡಿಯುತ್ತಿದ್ದರು..
ಜೊತೆಗೆ ಸಂಸಾರದಲ್ಲಿ ಇಬ್ಬರು ಮುದ್ದು ಮುದ್ದು ಮಕ್ಕಳು ಬಂದು ಅವರ ಕುಟುಂಬವೂ ದೊಡ್ಡದಾಗಿ ಬೆಳೆಯತೊಡಗಿತು. ಆಗ ಇನ್ನೂ ಹೆಚ್ಚಿನ ದುಡಿಮೆಗೆ ಒತ್ತು ಕೊಟ್ಟು ಕಷ್ಟ ಪಡತೊಡಗಿದರು. ಕಾರಣ ತಾವೂ ಎಲ್ಲರಂತೆ ಒಂದು ಐಷಾರಾಮಿ, ಉತ್ತಮ ಜೀವನ ಕಟ್ಟಿಕೊಳ್ಳಬೆಕೆಂಬ ಹಂಬಲ ಜೊತೆಗೆ ತಮ್ಮ ಮಕ್ಕಳಿಬ್ಬರಿಗೆ ಸುಂದರವಾದ ಬದುಕು ಕಟ್ಟಿಕೊಡಬೇಕೆಂಬ ಛಲ ಅವರನ್ನು ಶ್ರಮಜೀವಿಗಳನ್ನಾಗಿ ಮಾಡಿತ್ತು.
ಈ ರೀತಿ ಬದುಕಿನ ರಥ ಸುಂದರವಾಗಿ ಸಾಗಿರುವಾಗಯಾರ ದೃಷ್ಟಿ ತಾಗಿತೋ ಅವರಿಬ್ಬರ ಮೇಲೆ ಗೊತ್ತಿಲ್ಲ,,ಸಂಶಯದ ಅಪಶ್ರುತಿಯೊಂದು ಚಿಗುರೊಡೆಯಿತು. ಮೊದಮೊದಲು ಸಣ್ಣಗಿದ್ದ ಆ ಅಪಶ್ರುತಿ ಬರುಬರುತ್ತಾ ದೊಡ್ಡದಾಗುತ್ತ ಸಾಗಿತು. ಶರಾವತಿಗೆ ಗಂಡನ ಕೆಲವೊಂದು ಮಾತುಗಳು ಒಮ್ಮೊಮ್ಮೆ ಚುಚ್ಚಿದಂತೆ ಹಿಂಸೆಯಾಗುತ್ತಿತ್ತು. ಆದರೂ ಸಹ ಸಹಿಸಿಕೊಂಡು ಹೋಗುತ್ತಿದ್ದಳು.
ಬರುಬರುತ್ತ ಕಿರಣ್ ತನ್ನ ಹೊಲದಲ್ಲಿ ಕೆಲಸ ಮಾಡುವ ಮಂಜುವಿನೊಂದಿಗೆ ಶರಾವತಿ ಹೆಸರು ಜೋಡಿಸಿದಾಗ ಶರಾವತಿ ಅಕ್ಷರಶಃ ಕುಸಿದೇ ಹೋಗಿದ್ದಳು.
ತಿಳಿಸಿ ಹೇಳಲು, ಅರ್ಥೈಸಲು ಬಹಳೇ ಪ್ರಯತ್ನ ಪಟ್ಟಳು. ಕಿರಣ್ ಕೊನೆಗೂ ಅರ್ಥ ಮಾಡಿಕೊಳ್ಳಲೇ ಇಲ್ಲ. ಇಂತ ಸಮಸ್ಯೆಯ ಸುಳಿಯಲ್ಲಿ ಈಜಿ ಈಜಿ ಸಾಕಾಗಿ, ಇತ್ತ ದಂಡೆಯೂ ಕಾಣದೇ, ಗಂಡನ ಅಸರೆಯೂ ಸಿಗದೇ ಬೇಸತ್ತು, ಮನೆಬಿಟ್ಟು ಹೊರನಡೆಯಲು ನಿರ್ಧರಿಸಿದಳು. ಮಕ್ಕಳನ್ನು ಕರೆದುಕೊಂಡು ಹೋಗಲು ನಿರ್ಧರಿಸಿದಾಗ ಕರಣ್ ಅದಕ್ಕೂ ಅವಕಾಶ ಕೊಡಲಿಲ್ಲ. ಭಾರವಾದ ಮನಸ್ಸಿನಿಂದ ಹೊರಟು ಹೋದಳು. ಹೋದಮೇಲೆ ಅವಳ ಸುಳಿವೇ ಸಿಗದಷ್ಟು ದೂರ ಹೋದಳು.
ಇತ್ತ ಕರಣ್ ಹಾಗೂ ಇಬ್ಬರು ಮಕ್ಕಳು ಶರಾವತಿಯ ಅನುಪಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ ಕೆಲವೊಮ್ಮೆ ಅವಳ ಅವಶ್ಯಕತೆಯನ್ನು ಎತ್ತಿ ತೋರಿಸುವಂತಹ ಪ್ರಸಂಗಗಳು ಎದುರಾಗುತ್ತಿದ್ದವು. ಕೊನೆಗೂ ಅವಳು ಬಾರದಿದ್ದಾಗ ಮಕ್ಕಳ ಕಾರಣ ಕೊಟ್ಟು ಮನೆಯ ಹಿರಿಯರೆಲ್ಲರು ಎರಡನೇ ಮದುವೆಗೆ ಒತ್ತಾಯಿಸಿದರು. ಕರಣ್ ಕೂಡ ಒಪ್ಪಿದನು.
ಮದುವೆಯೂ ಆಯಿತು. ಎರಡನೇ ಹೆಂಡತಿ ದೇವಕಿ ಆ ಇಬ್ಬರು ಮಕ್ಕಳಿಗೆ ಅಮ್ಮನಾಗಿ ಬಂದಳು. ಅಮ್ಮ ಎನ್ನುವ ಪದಕ್ಕೆ ತದ್ವಿರುದ್ಧವಾಗಿ, ದೇವಕಿ ಎನ್ನುವ ಹೆಸರಿಗೆ ಅಪವಾದ ಎಂಬಂತೆ ಅವಳ ವರ್ತನೆ ಇತ್ತು. ಗಂಡ ಮಾತ್ರ ಬೇಕು ಮಕ್ಕಳು ಮಾತ್ರ ಬೇಡ ಎನ್ನುವ ಆ ಕಠೋರ ಧೋರಣೆ ಕರಣ್ ಗೆ ಹಿಂಸೆಯಾಯಿತು. ಶರಾವತಿ ಮನೆಬಿಟ್ಟು ಹೋದ ಸರಿಯಾದ ಕಾರಣ ತಿಳಿಯದ ದೇವಕಿ, ನಿನ್ನ ಹೆತ್ತ ತಾಯಿಗೆ ಬೇಡವಾದವರು ನೀವಿಬ್ಬರು. ನಾನ್ಯಾಕೆ ಅಮ್ಮನಾಗಬೇಕು, ನಾನ್ಯಾಕೆ ನಿಮ್ಮನ್ನು ಸಲುಹಬೇಕು, ನನಗೆ ನನ್ನದೇ ಬೇರೆಯ ಬದುಕು ಬೇಕು ಎಂದು ಪಟ್ಟು ಹಿಡಿದು ಮಕ್ಕಳನ್ನು ಅಪ್ಪನಿಂದಲೂ ದೂರ ಮಾಡಿದಳು. ಗಂಡ ಮಾತ್ರ ಬೇಕಿದ್ದ ಅವಳಿಗೆ ಮಕ್ಕಳ ಇರುವಿಕೆ ಬೇಡವಾಗಿತ್ತು. ಆ ಚಿಕ್ಕ ಮಕ್ಕಳಿಂದ ಮನೆಕೆಲಸ ಮಾಡಿಸುತ್ತ ತನ್ನ ಅವಾಚ್ಯ ಶಬ್ದಗಳಿಂದ ಬೈಯುತ್ತ , ಹೊಡೆಯುತ್ತ ದಿನಕಳೆಯುತ್ತಿದ್ದಳು..
ಕರಣ್ ಗೆ ಈಗ ದೇವತೆಯಂತಹ ಶರಾವತಿಯ ಒಳ್ಳೆಯ ಗುಣಗಳು, ಅವಳ ವ್ಯಕ್ತಿತ್ವ, ಅವಳ ಪ್ರೀತಿ ಕಣ್ಮುಂದೆ ಬರತೊಡಗಿದವು. ಆದರೇನು ಮಾಡುವುದು ಕಾಲ ಮಿಂಚಿ ಹೋಗಿತ್ತು. ಹೆಂಡತಿ ಸಣ್ಣ ಸುಳಿವು ನೀಡದೇ ದೂರ ಹೋಗಿಬಿಟ್ಟಿದ್ದಳು. ಮಕ್ಕಳ ಮುಖ ನೋಡಿದಾಗೆಲ್ಲ ಕರಣ್ ಕೊರಗುತ್ತಿದ್ದನು. ದೇವಕೀಯ ಕೈಗೊಂಬೆಯಂತೆ ಕುಣಿಯುವ ಕೆಲಸ ಮಾತ್ರ ಕರಣ್ ಪಾಲಿಗಿತ್ತು. ಯಾಕೆಂದರೆ ದೇವಕಿ ಅಷ್ಟೊಂದು ಹಿಡಿತ ಸಾಧಿಸಿಬಿಟ್ಟಿದ್ದಳು..
ಒಮ್ಮೆ ಕಳೆದುಕೊಂಡ ವಸ್ತು, ವ್ಯಕ್ತಿ, ಸಮಯ ಮತ್ತೆ ಸಿಗುವುದೇ?
ಆದ್ದರಿಂದ ಪ್ರತಿಯೊಬ್ಬ ಗಂಡ ಹೆಂಡತಿ, ಪರಸ್ಪರ ನಂಬಿಕೆ ವಿಶ್ವಾಸ ಹೊಂದಿ ಜೀವನ ಮಾಡಿ, ಅನುಮಾನ ಸಂಶಯಗಳಿಗೆ ದಾರಿಮಾಡಿ ಕೊಡಬೇಡಿ,
ಒಂದು ವೇಳೆ ಆ ಪರಿಸ್ಥಿತಿಯೂ ಬಂದರೆ ಪರಿಹಾರ ಸಿಗದ ಸಮಸ್ಯೆಯಂತೂ ಇರುವುದಿಲ್ಲ, ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ. ನಿಮ್ಮ ಸುಂದರವಾದ ಜೀವನವನ್ನು ನಿಮ್ಮ ಕೈಯ್ಯಾರೆ ನೀವೇ ಹಾಳು ಮಾಡಿಕೊಳ್ಳಬೇಡಿ..