ಇಷ್ಟ ದೇವತೆ ಭಾಗ 5
ಇಷ್ಟ ದೇವತೆ ಭಾಗ 5
ಗಿರಿಜೆಯು ಮದುವೆಗೆ ಒಪ್ಪಿದ್ದಕ್ಕಾಗಿ ತುಂಬಾ ಖುಷಿಯಿಂದ ಸಂಭ್ರಮಿಸಿದ ಅವಳ ಅಜ್ಜ ಮನೆಯವರಿಗೆಲ್ಲ ಸಂತಸದ ಸುದ್ದಿ ತಿಳಿಸಿದನು.
ಗಿರಿಜೆಯ ತಾಯಿ ಆಶ್ಚರ್ಯದ ಜೊತೆಗೆ ಸ್ವಲ್ಪ ಸಂಕಟ ಕೂಡ ಪಟ್ಟಳು. ಹುಡುಗಿ ನೋಡಿದ ತಕ್ಷಣ ಅವರೇನಾದರೂ ಹುಡುಗಿ ಇಷ್ಟವಾಗಿದ್ದಾಳೆಂದರೆ ಮದುವೆಗೆ ತಡ ಮಾಡುವುದಿಲ್ಲ. ಮಗಳು ಸಣ್ಣವಳು, ಇವಾಗ ತಾನೇ ಋತುಮತಿಯಾಗಿದ್ದಾಳೆ , ಸಂಸಾರದ ಜವಾಬ್ದಾರಿ ಅಂದರೆ ಸುಮ್ನೇನಾ? ಸೊಸೆಯಾಗಿ ಒಂದು ಮನೆಗೆ ಹೋಗಿ ಹೊಂದಿಕೊಳ್ಳುವುದೆಂದರೆ ಸುಲಭದ ಮಾತಲ್ಲ ಅಂತ ಆ ತಾಯಿ ಹೃದಯ ತುಂಬಾ ಚಿಂತೆ ಮಾಡತೊಡಗಿತು. ದೇವರಲ್ಲಿ ಪ್ರಾರ್ಥಿಸುತ್ತ,ದೇವರೇ ನನ್ನ ಮಗಳಿಗೆ ಎಲ್ಲ ರೀತಿಯ ಶಕ್ತಿ ಸಾಮರ್ಥ್ಯ ಕೊಡು, ಅವಳು ಸೊಸೆಯಾಗಿ ಹೋಗುವ ಮನೆಯಲ್ಲಿಯೂ ಅವಳು ತವರಿನಲ್ಲಿದ್ದಂತೆ ಖುಷಿಯಾಗಿ, ಎಲ್ಲರೊಂದಿಗೆ ನಕ್ಕು ನಲಿಯುತ್ತ, ಇಲ್ಲಿನಂತೆ ಅಲ್ಲಿಯೂ ಇಷ್ಟ ದೇವತೆಯಾಗಿ, ಅಂದರೆ ಬೇಕಾಗಿದ್ದನ್ನು ಪಡೆಯುವುದರ ಜೊತೆಗೆ , ಅಲ್ಲಿರುವವರು ಕೇಳಿದ್ದನ್ನು ಮಾಡಿ ಕೊಡುತ್ತ, ಈ ಮನೆಯ ದೇವತೆಯಾಗಿ ಹೇಗಿದ್ದಳೋ ಅವಳು ಮೆಟ್ಟಿದ ಮನೆಯಲ್ಲಿಯೂ ಹಾಗೆಯೇ ದೇವತೆಯಾಗಿಯೇ ಇರುವಂತೆ ಆಶೀರ್ವಾದ ಮಾಡು ತಂದೆ ಎಂದು ದೇವರಲ್ಲಿ ಬೇಡಿಕೊಂಡಳು.
ಇತ್ತ ಮರುದಿನ ಬೆಳಗ್ಗೆ ಮಹದೇವಪ್ಪ ತನ್ನ ಸಾರೋಟ ಏರಿದವನೆ ಪಕ್ಕದೂರಿನ ಪಟೇಲರ ಮನೆಗೆ ನಡೆದೇ ಬಿಟ್ಟನು. ಅಲ್ಲಿ ಹೋಗಿ ಚಹಾ ನಾಷ್ಟಾ ಮುಗಿಸಿ , ತಾನು ಬಂದಿರುವ ವಿಷಯವನ್ನು ತಿಳಿಸಿದನು.
ಮಹದೇವಪ್ಪ ಹೇಳಿದ ಸಂತೋಷದ ಶುಭ ಸಮಾಚಾರ ಕಿವಿಗೆ ಬೀಳುತ್ತಲೇ , ಪಟೇಲರು ತಮ್ಮ ಧರ್ಮಪತ್ನಿಗೆ ಈ ವಿಷಯ ತಿಳಿಸಿದರು. ಆಗ ಆಕೆ ಆಯ್ತು, ಮೊದಲು ಹುಡುಗಿ ನೋಡುವ ಶಾಸ್ತ್ರ ಮಾಡೋಣ ಎಂದು ಒಂದು ಗತ್ತಿನಲ್ಲಿಯೇ ಹೇಳಿದಳು.
ಎಲ್ಲರೊಂದಿಗೆ ಮಾತಾಡಿಕೊಂಡು ನಾವು ಬರುವ ದಿನ ತಿಳಿಸುತ್ತೇವೆ ಎಂದು ಹೇಳಿ ಕಳಿಸಿದರು.
ಅಜ್ಜನ ದಾರಿ ಕಾಯುತ್ತಿದ್ದ ಗಿರಿಜೆಯು ಅಜ್ಜ ಬಂದೊಡನೆ ಒಂದು ಚೆಂಬು ಕುಡಿಯುವ ನೀರಿನ ಸಮೇತ ಬಂದು ಅಜ್ಜನ ಎದಿರು ಹಾಜರಾದಳು.
ಆಗ ಅಜ್ಜ ಖುಷಿಯಿಂದ ಅವರು ನಿನ್ನ ನೋಡಲು ಬರಲು ಒಪ್ಪಿದ್ದಾರೆ ಅಂತ ಹೇಳಿದನು.
ಒಳಗೊಳಗೆ ಭಯ, ಗೊಂದಲ ಎರಡೂ ಒಮ್ಮೆಲೇ ಆಗಿ , ಹೊಟ್ಟೆ ತೊಳಿಸಿದಂತಾಗಿ ಸುಮ್ಮನೆ ಏನೂ ಮಾತಾಡದೇ ಒಳಗೆ ಹೋದಳು.
ಅವ್ವ ಮತ್ತು ಚಿಗವ್ವ ಇಬ್ಬರಿಗೂ ಸುದ್ದಿ ಮುಟ್ಟಿಸಿದಳು.
ನೋಡ್ ಶಾರವ್ವ, ಮಾವನವರು ಅದೆಷ್ಟು ತರಾತುರಿ ನಡಸ್ಯಾರ , ಯಾಕಿಷ್ಟು ಅವಸರ ಮಾಡಾಕತ್ತಾರ ಅಂತಾ ತಿಳಿವಲ್ದು, ಕಾಳಜಿ , ಪ್ರೀತಿ ಐತಿ ಇಲ್ಲ ಅಂತಾ ಅನ್ನಲ್ಲ,ಆದರೂ ಸಹ ಮನಸಿಗೆ ಕಸಿವಿಸಿ ಆಗಾಕತ್ತೈತಿ,
ಹೌದ ಕಮಲಕ್ಕ, ಪಾಪಾ ಆ ಹುಡುಗಿ ಮನ್ನೇ ನನ್ನ ಹಿಡುಕೊಂಡು ಅತ್ತು, ಚಿಗವ್ವ ಕಾಕಾಗ ಅಜ್ಜನ ಜೋಡಿ ಮಾತಾಡಕ ಹೇಳು ಅಂತ ಹೇಳ್ತು. ಆದ್ರ ಆ ಮಾವಾರು ನಮ್ಮ ಮಾತು ಕೇಳ್ತಾರನು ಹೇಳು.
ನಮ್ಮ ನೀಲವ್ವನ ಮದುವೆ ಮಾಡಿದಾಗ ಹದಿನೇಳು ತುಂಬಿತ್ತು ಅಕಿಗೆ ವಯಸ್ಸು, ದೊಡ್ಡಕಿ ಆಗಿ ಐದು ವರ್ಷ ಆಗಿತ್ತು,ಸ್ವಲ್ಪ ತಿಳುವಳಿಕೆ ಬಂದಿತ್ತು. ಈಗ ಅಕಿ ಉದಾಹರಣೆ ಕೊಟ್ಟು ಇಕಿ ಮದುವೆ ತಯಾರಿ ನಡಸ್ಯಾರ, ಒಂದೊರ್ಷರ ಆಗದಬ್ಯಾಡನ ಶಾರವ್ವ ಈಕಿಗೆ...
ಕಮಲಕ್ಕ ನಾವು ಚಿಂತಿ ಮಾಡದ್ ಬಿಟ್ಟು ಮುಂದಿನ ಯೋಚನೆ ಮಾಡೋಣ, ಏನು ಆಗಲ್ಲ,ಎಲ್ಲಾ ಒಳ್ಳೆದಾದ್ರೆ ಅಷ್ಟೇ ಸಾಕು. ನಮ್ಮ ಮಗಳು ಸಣ್ಣಕಿ ಅದಾಳ ಅಂತ ಅವರಿಗೆ ಹೇಳಿಕೊಳ್ಳೋಣ , ನಿ ಚಿಂತಿ ಮಾಡಬ್ಯಾಡ ಅಕ್ಕ, ಮೊದಲ ಮೊನ್ನೆರ ಆರಾಮಿಲದಂಗ ಆಗಿ ಒಂದ ತಿಂಗಳ ಹಾಸಿಗೆ ಹಿಡಿದಿದ್ದಿ.. ಅದಕ್ಕ ಸ್ವಲ್ಪ ಆರಾಮಿರು,ನಾವೆಲ್ಲ ಅದವಿ. ಹೇಳಿಕೊಡೋಣ,ನಮ್ಮ ಹುಡುಗಿ ಶ್ಯಾನೆಕಿ ಅದಾಳಾ.
ಆತಬಿಡವಾ ನಿ ಹೇಳದಂಗ ಆಗ್ಲಿ .
ಅಂತ ಕಮಲವ್ವ ಸುಮ್ಮನಾದಳು.
ಇತ್ತ ಅಜ್ಜ ಪಟೇಲರು ಮೊಮ್ಮಗಳನ್ನು ಯಾವಾಗ ನೋಡಲಿಕ್ಕೆ ಬರುತ್ತಾರೋ ಏನೋ ಅಂತ ಅವರ ದಾರಿ ಕಾಯುತ್ತ ಇದ್ದನು...
ಪಟೇಲರು ಬಂದರಾ? ಗಿರಿಜೆಯನ್ನು ನೋಡಿದರಾ? ಮುಂದೇನಾಯ್ತು ಅಂತಾ ಇಷ್ಟ ದೇವತೆಯ ಮುಂದಿನ ಭಾಗದಲ್ಲಿ ನೋಡೋಣ.......