ನನ್ನ ಆಯ್ಕೆ, ನನ್ನ ನಿರ್ಧಾರ.
ನನ್ನ ಆಯ್ಕೆ, ನನ್ನ ನಿರ್ಧಾರ.
ಪ್ರತಿಯೊಬ್ಬರಿಗೂ ತಮ್ಮ ತಮ್ಮ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕಿರುತ್ತದೆ. ಆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಒಂದು ಬಾರಿಯಲ್ಲ, ಹತ್ತಾರು ಸಲ ಯೋಚಿಸುವುದು ಸೂಕ್ತ. ಯಾಕೆಂದರೆ ಆ ನಿರ್ಧಾರ ತಮ್ಮ ಮುಂದಿನ ಇಡೀ ಜೀವನವನ್ನು ನಿರ್ಧರಿಸುತ್ತದೆ. ಒಂದು ಒಳ್ಳೆಯ ನಿರ್ಧಾರ ಜೀವನವನ್ನು ರೂಪಿಸುತ್ತದೆ. ಆದ್ದರಿಂದ ಹೆಜ್ಜೆಯಿಡುವ ಮುನ್ನ ಯೋಚಿಸಿ ಇಡುವುದು ಸೂಕ್ತ. ಆ ನಿರ್ಧಾರ ಮಾಡುವ ಆಯ್ಕೆ ಅವರವರಿಗೆ ಬಿಟ್ಟಿದ್ದು.
ಪಾಲ್ಗುಣಿ ಒಂದು ಬಹು ರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ತಿಂಗಳಿಗೆ ಆರಂಕಿಯ ಸಂಬಳ ಕೈಗೆ ಬರುತ್ತಿತ್ತು. ಬಹಳ ಜಾಣೆ , ಸುಂದರಿ , ಚತುರೆ ಆಗಿದ್ದಳು. ಅವಳು ಈ ಮೇಲಿನ ಹಂತಕ್ಕೆ ಬರಲು ಹರಸಾಹಸ ಮಾಡಿದ್ದಳು . ಒಂದು ಐಷಾರಾಮಿ ಜೀವನವನ್ನು ಕಟ್ಟಿಕೊಳ್ಳಲು ಆಕೆ ಪಡಬಾರದ ಕಷ್ಟ ಪಟ್ಟಿದ್ದಳು. ಹಗಲಿರುಳು ಎನ್ನದೆ ಆಕೆ ದುಡಿಯುತ್ತಿದ್ದಳು. ಕಂಪನಿಯ ಹಲವಾರು ಸಹುದ್ಯೋಗಿಗಳ ಮದ್ಯ ತನ್ನನ್ನು ತಾನು ಗುರುತಿಸಿಕೊಳ್ಳುವಲ್ಲಿ ಸಫಲವಾಗಿದ್ದಳು. ಕಂಪನಿಗೆ ಸೇರಿದ ಕೆಲವೇ ವರ್ಷಗಳಲ್ಲಿ ಬಡ್ತಿ ಪಡೆಯುವಲ್ಲಿ , ತನಗಿಂತ ಹಿರಿಯ ಕೆಲಸಗಾರರನ್ನು ಹಿಂದಿಕ್ಕಿ ಕೆಲಸ ಮಾಡುವುದರಲ್ಲಿ ಹೆಸರು ಮಾಡಿದ್ದಳು. ಅದೊಂದು ದಿನ ಆಫೀಸಲ್ಲಿ ಮದ್ಯಾಹ್ನದ ಹೊತ್ತಿಗೆ ಕೆಲಸ ಮಾಡಿ ಸುಸ್ತಾಗಿಯೋ,ಅಥವಾ ಅದೇ ದಿನ ತನ್ನ ಸಹುದ್ಯೋಗಿ ಮಿತ್ರೆಯ ಮದುವೆಯ ಕರೆಯೋಲೆ ನೋಡಿಯೋ ಏನೋ ತಾನು ಎಲ್ಲರನ್ನು ಕಳೆದುಕೊಂಡಿದ್ದು ನೆನಪಾಗಿ ಕಣ್ಣು ಮುಚ್ಚಿ ಹಳೆಯ ನೆನಪುಗಳಿಗೆ ಜಾರಿದಳು.
ಪಾಲ್ಗುಣಿಯ ಕುಟುಂಬ ಹೇಳಿ ಕೇಳಿ ಪಕ್ಕಾ ಹಳ್ಳಿ ಜಾಡಿನ ಕುಟುಂಬ. ಮನೆ ತುಂಬಾ ಜನರು. ವಯಸ್ಸಾದ ನಾಲ್ಕೈದು ಜನ ಅಜ್ಜ ಅಜ್ಜಿಯರು. ಬಹಳ ಸಂಪ್ರದಾಯ ವಾದಿಗಳು. ರೀತಿ ರಿವಾಜು ಅನ್ನುವ ಹೆಸರಲ್ಲಿ ನೂರೆಂಟು ಗೆರೆಗಳಿದ್ದವು. ಆ ಗೆರೆ ದಾಟುವ ಪ್ರಯತ್ನ ಯಾರು ಮಾಡುತ್ತಿರಲಿಲ್ಲ. ಸೊಸೆಯರಂತೂ ಉಸಿರು ಎತ್ತುತ್ತಿರಲಿಲ್ಲ. ಹಿರಿ ಜೀವಗಳಾದ ಗಂಗಮ್ಮಜ್ಜಿ ಗೌರಮ್ಮಜ್ಜಿ ಕೈಯಲ್ಲಿ ಉಳಿಯುವ ಮಾತೇ ಇರಲಿಲ್ಲ. ಹೀಗಿರುತ್ತಿದ್ದಾಗ ಆ ಮನೆಗೆ ನಾಲ್ಕನೆಯ ಮಗಳಾಗಿ ಬಂದವಳೇ ಪಾಲ್ಗುಣಿ. ಪಾಲ್ಗುಣಿ ಹುಟ್ಟಿ ಬೆಳೆದಂತೆ ಮನೆಯೂ ಸಹ ಇನ್ನೂ ಬೆಳವಣಿಗೆಯ ಹಂತಕ್ಕೆ ಬಂದಿತ್ತು. ಅವಳ ಕಾಲ್ಗುಣ ತುಂಬಾ ಒಳ್ಳೆಯದೆಂದು ಬಹಳ ಮುದ್ದಿನಿಂದ ಬೆಳೆಸಿದರು.
ಬೆಳೆಯುತ್ತ ಬೆಳೆಯುತ್ತ ಪಾಲ್ಗುಣಿಗೆ ಓದುವ ಅತೀಯಾದ ಗೀಳು ಬೆಳೆಯತೊಡಗಿತು. ಹಳ್ಳಿ ಆಗಿದ್ದರಿಂದ ಕೇವಲ ನಾಲ್ಕನೇ ತರಗತಿಯವರೆಗೆ ಮಾತ್ರ ಇದ್ದಿತು. ಆ ಸಂಪ್ರದಾಯವಾದಿ ಅಜ್ಜಿಯರು ಮಾತ್ರ ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸಲು ಒಪ್ಪಲೇ ಇಲ್ಲ. ಹಿರಿಯರಿಬ್ಬ ಅಕ್ಕಂದಿರು ಅಜ್ಜಿಯರು ಹೇಳಿದ ಮಾತಿಗೆ ಒಪ್ಪಿ ಓದಲು ವಿರಾಮ ನೀಡಿದರು. ಆದರೆ ಪಾಲ್ಗುಣಿ ಮಾತ್ರ ಎಲ್ಲರ ವಿರೋಧ ಕಟ್ಟಿಕೊಂಡು ಓದಲು ಹಠ ಮಾಡಿದಳು. ಹಾಗೂ ಹೀಗೂ ಪಕ್ಕದೂರಿಗೆ ಓದಲು ಒಪ್ಪಿಗೆ ಕೊಟ್ಟರು. ಪಿ.ಯು. ಸಿ ಮುಗಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಮನೆಗೂ ,ಊರಿಗೂ, ತಾಲೂಕಿಗೂ ಕೀರ್ತಿ ತಂದಳು. ಆದರೆ ಆ ಕೀರ್ತಿಯ ಅರ್ಥ ಆ ಮನೆಯ ಅಜ್ಜಿಯರಿಗೆ ಅರ್ಥವಾಗಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಪಾಲ್ಗುಣಿ ಸೋದರ ಮಾವನಿಗೆ ಆಕೆಯನ್ನು ಮದುವೆ ಮಾಡಿಕೊಡಲು ಸಿದ್ಧವಾಗಿದ್ದರು. ಅದನ್ನು ತಿರಸ್ಕರಿಸಿದ್ದಕ್ಕೆ ಮನೆಯಿಂದ ಆಕೆಯನ್ನು ಹೊರಹಾಕಲಾಗಿತ್ತು.
ಪಾಲ್ಗುಣಿ ಅಂಜದೆ , ತನ್ನ ಗುರುಗಳ ಸಹಾಯದಿಂದ ,ಹಾಗೂ ಶೈಕ್ಷಣಿಕ ಸಾಲ ಪಡೆದು ಉನ್ನತ ಶಿಕ್ಷಣ ಮುಗಿಸಿ ಇಂದು ಎಂ.ಎನ್. ಸಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದು, ತಾನು ಆಯ್ಕೆ ಮಾಡಿ ತೆಗೆದುಕೊಂಡ ನಿರ್ಧಾರ ಆಕೆಯ ಭವಿಷ್ಯವನ್ನು ನಿರ್ಧರಿಸಿತ್ತು.
ಪೀವ್ನ್ ಟೀ ಕಪ್ ತಂದು ಮೇಡಂ,ಮೇಡಂ ಎಂದಾಗಳೇ ಪಾಲ್ಗುಣಿ ವಾಸ್ತವಕ್ಕೆ ಬಂದಿದ್ದಳು.
ಆಗ ಪಾಲ್ಗುಣಿ ತನ್ನ ಮನಸ್ಸಿನಲ್ಲಿ ಅಂದು ಆಕೆ ಮಾಡಿದ ಆ ನಿರ್ಧಾರ ಸರಿಯಿತ್ತೆಂದು ನಿಟ್ಟುಸಿರು ಬಿಟ್ಟಳು...