ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು
ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು
ಯಾರ್ಯಾರಿಗೆ, ಯಾವ ಯಾವ ತರಹದ ಪ್ರಾಬ್ಲಮ್ ಇವೆ ಅನ್ನುವುದು ತಿಳಿಯೋಕಾಗಲ್ಲ. ಯಾಕೆಂದರೆ ಎಲ್ಲರಿಗೂ ಒಂದೊಂದು ರೀತಿಯ ಪ್ರಾಬ್ಲಮ್ಗಳು ಇದ್ದೆ ಇರುತ್ತವೆ. ಸಾಮಾನ್ಯವಾಗಿ ಎಲ್ಲರೂ ಹೇಳುವ ಒಂದು ವಾಕ್ಯವಿದೆಯಲ್ಲ ಎಲ್ಲರ ಮನೆ ದೋಸೆನೂ ತೂತೆ ,ಹಾಗೆ ಎಲ್ಲರಲ್ಲಿಯೂ ಪ್ರಾಬ್ಲಮ್ಗಳು ತುಂಬಿವೆ.
ರುದ್ರಪ್ಪ ಮತ್ತು ನಂಜಮ್ಮ ಕೇವಲ ಎಂಟು ಮಕ್ಕಳಿಗೆ ಜನ್ಮ ಕೊಟ್ಟು ಮಹಾನ್ ತಂದೆ ತಾಯಿಗಳೆಂದು ಊರಲ್ಲಿ ಹೆಸರು ವಾಸಿಯಾಗಿದ್ದರು. ಯಾಕೆಂದರೆ ಇರುವ ಎಂಟು ಮಕ್ಕಳ ಜೊತೆಗೆ ನಾಲ್ಕು ಮಕ್ಕಳು ಹುಟ್ಟಿ ತೀರಿ ಹೋಗಿದ್ದವು. ಆದರೂ ಸಹ ಅಂತಹ ವಯಸ್ಸಾದ ಹಂತದಲ್ಲಿಯೂ ಇಬ್ಬರೂ ಆರೋಗ್ಯಯುತರಾಗಿದ್ದರು. ಯಾವುದೇ ಕಾಯಿಲೆ ಕಸಾರಿಕೆ ಏನು ಇಲ್ಲದೆ ಕಟ್ಟು ಮಸ್ತಾದ ಆರೋಗ್ಯ ಹೊಂದಿದ ಶರೀರ ಅವರದಾಗಿತ್ತು.
ದುಡಿಯುವ ಶಕ್ತಿ ಇರುವ ಹೊತ್ತಲ್ಲಿ , ದುಡಿಯುವುದಕ್ಕೂ ಮತ್ತು ಅದಕ್ಕೆ ತಕ್ಕಂತೆ ತಿನ್ನುವುದಕ್ಕೂ ಯಾವತ್ತೂ ಹಿಂದೇಟು ಹಾಕಿದವರಲ್ಲ ಆ ದಂಪತಿಗಳು. ಹೀಗಾಗಿ ಯಾವುದೇ ಕಾಯಿಲೆಗಳು ಸಹ ಅವರತ್ತ ಬರದಂತೆ ಅವರಿಬ್ಬರು ತಮ್ಮ ಆರೋಗ್ಯವನ್ನು ಕಾಯ್ದುಕೊಂಡಿದ್ದರು.
ಇನ್ನು ಮಕ್ಕಳು ದೊಡ್ಡವರಾದಂತೆ ಎಲ್ಲ ನಾಲ್ಕು ಹೆಣ್ಣು ಮಕ್ಕಳಿಗೂ ಮದುವೆ ಮಾಡಿ ಕೊಟ್ಟರು. ತಮ್ಮದೇನೂ ಹೇಳಿಕೊಳ್ಳುವಂತಹ ದೊಡ್ಡ ಆಸ್ತಿಯೇನೂ ಇರದೇ ಇದ್ದಿದ್ದರಿಂದ ಹೆಣ್ಣು ಮಕ್ಕಳಿಗೆ ವರದಕ್ಷಿಣೆ ಕೊಡಲು ಆಗದಿದ್ದರಿಂದ ಸ್ವಲ್ಪ ಸಾಧಾರಣ ಮನೆಗೆ ನಾಲ್ಕು ಜನ ಹೆಣ್ಣು ಮಕ್ಕಳನ್ನು ಕೊಟ್ಟು ಮದುವೆ ಮಾಡಿದ್ದರು.
ಇನ್ನು ಉಳಿದ ನಾಲ್ಕು ಮಂದಿ ಗಂಡು ಮಕ್ಕಳಲ್ಲಿ ಮೊದಲ ಮೂರು ಜನರು ಇರುವ ನಾಲ್ಕು ಎಕರೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಕೊನೆಯ ಮಗ ಮಾತ್ರ ತುಸು ಜಾಸ್ತಿ ಓದಿ ಬೆಂಗಳೂರಿನಲ್ಲಿ ಒಂದು ಕಂಪನಿಯಲ್ಲಿ ಕೆಲಸ ಪಡೆದು ,ಅಲ್ಲಿಯೇ ಸಣ್ಣ ಕೋಣೆಯೊಂದನ್ನು ಬಾಡಿಗೆ ಪಡೆದು ವಾಸವಾಗಿದ್ದನು.
ರುದ್ರಪ್ಪ ಎಲ್ಲ ಮಕ್ಕಳನ್ನು ತನ್ನ ಹತೋಟಿಯಲ್ಲಿಟ್ಟು ಕೊಂಡಿದ್ದನು. ತಾನು ಹೇಳಿದಂತೆ ನಡೆಯಬೇಕು ಎನ್ನುವ ನೀತಿ ಮನೆಯಲ್ಲಿತ್ತು. ಆ ಪ್ರಕಾರವೇ ನಡೆಯುತ್ತಿತ್ತು. ಯಾವತ್ತೂ ಯಾವ ಮಕ್ಕಳೂ ಸಹ ಎದುರು ಮಾತಾಡಿದವರಲ್ಲ , ಎದುರು ಉತ್ತರ ಕೊಟ್ಟವರಲ್ಲ.
ಹೀಗೆ ಮಕ್ಕಳು , ಹೆಂಡತಿ ,ಎಲ್ಲರೂ ರುದ್ರಪ್ಪನ ಆದೇಶದಂತೆ ನಡೆದುಕೊಳ್ಳುತ್ತಿದ್ದರು. ವಯಸ್ಸಿಗೆ ಬಂದ ಗಂಡು ಮಕ್ಕಳಿಗೆ ಹೆಣ್ಣು ಹುಡುಕಲಾರಂಭಿಸಿದ ರುದ್ರಪ್ಪ , ಮೊದಲ ಮಗನಿಗೆ ದೊಡ್ಡ ಕುಟುಂಬದಿಂದ ಹೆಣ್ಣು ತಂದಿದ್ದ. ಅವಳು ಆ ಕುಟುಂಬಕ್ಕೆ ಬಂದ ದಿನದಿಂದಲೇ ಚೆನ್ನಾಗಿ ಹೊಂದಿಕೊಂಡು , ಒಂದೂ ದಿನವೂ ಅತ್ತೆ ಮಾವನಿಂದ ಯಾವುದಕ್ಕೋ ಏನೂ ಅನ್ನಿಸಿಕೊಳ್ಳದೆ , ಚೆನ್ನಾಗಿ ಸಂಸಾರ ನಿಭಾಯಿಸಿಕೊಂಡು ಹೋಗುತ್ತಿದ್ದಳು. ಮತ್ತೆರಡು ವರ್ಷದ ನಂತರ ರುದ್ರಪ್ಪ ಉಳಿದ ಮೂವರು ಗಂಡು ಮಕ್ಕಳಿಗೆ ಒಟ್ಟಿಗೆ ಮದುವೆ ಮಾಡಿ ಮುಗಿಸಿದನು. ಈಗಂತೂ ನಂಜಮ್ಮ ಕೆಲಸದಿಂದ ನಿವೃತ್ತಿ ಪಡೆದಂತಾಗಿತ್ತು.
ಹೀಗೆ ಕೆಲವು ವರ್ಷಗಳು ಚೆನ್ನಾಗಿಯೇ ನಡೆದಿತ್ತು. ಹುಟ್ಟುತ್ತ ಅಣ್ಣ ತಮ್ಮಂದಿರು, ಬೆಳೆಯುತ್ತ ದಾಯದಿಗಳು ಎನ್ನುವ ಮಾತೇ ಇದೆಯಲ್ಲ,ಅದರಂತೆ ಮನೆಯಲ್ಲಿ ಸಣ್ಣಗೆ ಕಿಡಿ ಹೊತ್ತಲಾರಂಭಿಸಿತು. ಅಣ್ಣ ತಮ್ಮಂದಿರ ಮದ್ಯ ಜಗಳಗಳು ಶುರುವಾದವು. ಅಪ್ಪನ ಮಾತು ಕೇಳಲು ಯಾರೂ ತಯಾರಿರಲಿಲ್ಲ. ಕೊನೆಗೆ ಇರುವ ನಾಲ್ಕು ಎಕರೆ ಜಮೀನನ್ನು ಹಂಚಿಕೊಂಡು ಬೇರೆಯಾಗುವ ನಿರ್ಧಾರಕ್ಕೆ ಬಂದರು. ಅದೂ ಕೂಡ ಆಯಿತು. ಈಗ ಎಲ್ಲರ ಮದ್ಯ ಇರುವ ಪ್ರಾಬ್ಲಮ್ ಅಂದ್ರೆ ರುದ್ರಪ್ಪ ಮತ್ತು ನಂಜಮ್ಮ. ಈ ವಯಸ್ಸಾದ ಅಪ್ಪ ಅಮ್ಮನನ್ನು ಇಟ್ಟುಕೊಳ್ಳಲು ಯೋಚಿಸುತ್ತಿರುವಾಗ , ದೊಡ್ಡ ಸೊಸೆ ತಾನು ಇಬ್ಬರನ್ನು ನೋಡಿಕೊಳ್ಳುವುದಾಗಿ ಹೇಳಿದಳು. ಆದರೆ ಆ ಮೂರು ಚಿಕ್ಕ ಸೊಸೆಯರು ಅದಕ್ಕೂ ಕ್ಯಾತೆ ತೆಗೆದರು. ನೀನೊಬ್ಬಳೇ ನೋಡಿಕೊಂಡು ಊರವರ, ಸಂಬಂಧಿಕರ ಮುಂದೆ ನಮ್ಮನ್ನು ಅವಮಾನಿಸಬೇಕೆಂದು ಯೋಚಿಸಿದ್ದೀಯ? ಹಾಗೆಲ್ಲ ಏನೂ ಇಲ್ಲ, ಅತ್ತೆ ಮಾವನನ್ನು ಒಬ್ಬೊಬ್ಬರು ಮೂರು ಮೂರು ತಿಂಗಳು ಇಟ್ಟುಕೊಳ್ಳುವುದೆಂದು ನಿರ್ಣಯಿಸಿದರು. ರುದ್ರಪ್ಪ ನಂಜಮ್ಮ, ಅವರ ಮದುವೆ ಆದಾಗಿನಿಂದ ಇಲ್ಲಿಯವರೆಗೂ ಒಂದೂ ದಿನವೂ ಬಿಟ್ಟಿದ್ದವರಲ್ಲ. ಈಗ ಮಕ್ಕಳು ಒಬ್ಬೊಬ್ಬರನ್ನು ಒಮ್ಮೊಮ್ಮೆ ಇಟ್ಟುಕೊಳ್ಳಲು ಮಾತಾಡಿಕೊಂಡಿದ್ದರು. ಈ ವಿಷಯ ರುದ್ರಪ್ಪ ಮತ್ತು ನಂಜಮ್ಮನಿಗೆ ತುಂಬಾ ಸಂಕಟ ಮಾಡಿತ್ತು.
ದೊಡ್ಡ ಮಗ ಸೊಸೆ ರುದ್ರಪ್ಪನನ್ನು ಮೂರು ತಿಂಗಳು ಇಟ್ಟುಕೊಳ್ಳುವುದಾಗಿ, ಚಿಕ್ಕ ಮಗ ಅದೇ ಬೆಂಗಳೂರಲ್ಲಿ ಇರುವವನು ನಂಜಮ್ಮನನ್ನು ಮೂರು ತಿಂಗಳು ಇಟ್ಟುಕೊಳ್ಳುವುದಾಗಿ ಯೋಚಿಸಿದರು. ಇವರ ನಂತರ ಸರದಿ ಎರಡು ,ಮೂರನೆಯ ಮಕ್ಕಳದಾಗಿತ್ತು..
ಮೂವತ್ತೈದು ವರ್ಷ ಕೂಡಿ ಬಾಳಿದ ಆ ಜೀವಗಳನ್ನು ದೂರ ಮಾಡಿ ,ಬೇರೆ ಬೇರೆಯಾಗಿ ಇರಲು ನಿರ್ಧಾರ ಮಾಡಿದ ಮಕ್ಕಳ ಬಗ್ಗೆ ಬೇಸರ ಇದ್ದರೂ ಕೂಡ ಅವರು ಹೇಳಿದಂತೆ ಮೂರು ತಿಂಗಳ ಕಾಲ ಒಬ್ಬೊಬ್ಬರ ಮನೆಯಲ್ಲಿರಲು ಒಪ್ಪಿಕೊಂಡಿದ್ದರು.
ಇಬ್ಬರು ದೂರ ದೂರ ಹೋಗುವ ಹಿಂದಿನ ದಿನ ಎರಡೂ ಹಿರಿ ಜೀವಗಳು ಕುಳಿತು ಮಾತಾಡುತ್ತಿರುವಾಗ ಈ ಮೇಲಿನ ಶೀರ್ಷಿಕೆಯನ್ನು ಹೇಳಿದಾಗ ಇಬ್ಬರ ಕಣ್ಣಲ್ಲಿ ನೀರು ತುಂಬಿ ಬಂದಿತ್ತು.
ಹೌದು,ಹಾಗಾದರೆ ಆ ಹಿರಿ ಜೀವಗಳೆರಡು ಯಾರಿಗೆ ಹೇಳಿಕೊಳ್ಳಬೇಕು ತಮ್ಮ ಆ ಪ್ರಾಬ್ಲಮ್ಮನ್ನು..