ಕರತಾಡನ
ಕರತಾಡನ
ಅದೊಂದು ತುಂಬಿದ ಸಭಾಂಗಣ. ಅನಾಥಾಶ್ರಮದ ದೇಣಿಗೆಗಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಂಟು ವರ್ಷದ ಬಾಲಕ ಸುಧೀರನ ಗಾಯನ ಕಾರ್ಯಕ್ರಮ. ಜನ್ಮತ:, ಪ್ರತಿಭಾವಂತನಾಗಿದ್ದ ಅವನು, ಯಾರಿಂದಲೂ ಹೇಳಿಸಿಕೊಳ್ಳದೆ ಸ್ವಯಂ ಸಂಗೀತ ಅಭ್ಯಾಸ ಮಾಡಿ, ವಿದ್ವಾಂಸರು ಅಚ್ಚರಿಗೊಳ್ಳುವಂತೆ ಹಾಡಿ, ಹೆಸರು ಗಳಿಸಿದ್ದ. ಸಂಗೀತ ಸರಸ್ವತಿ ಅವನ ನಾಲಿಗೆಯಲ್ಲಿ ನರ್ತಿಸುವುದನ್ನು ಆನಂದಿಸಲು ಸಾವಿರಾರು ಜನರು ಸಭೆಯಲ್ಲಿ ಕಿಕ್ಕಿರಿದಿದ್ದರು.
ಸಂಗೀತ ಕಛೇರಿಗೆ ಇನ್ನೇನು ಕ್ಷಣಗಣನೆ ಆರಂಭವಾಯಿತು. ಬಾಲಕ ಸುಧೀರ್ ವೇದಿಕೆಗೆ ಆಗಮಿಸುತ್ತಿರುವಂತೆಯೇ ಪ್ರೇಕ್ಷಕರಿಂದ ಕರತಾಡನ
ಪ್ರಾರಂಭವಾಯಿತು.ಬಿಳಿ ಜುಬ್ಬಾ ಬಿಳಿ ಪಾಯಿಜಾಮ ತೊಟ್ಟ ನಾಲ್ಕು ಅಡಿ ಎತ್ತರದ ಪುಟ್ಟ ಬಾಲಕ ವಿದ್ವಾಂಸ ವೇದಿಕೆಯ ಮೇಲೆ ಕುಳಿತು ,ಒಂದು ಬಾರಿ ಕಿಕ್ಕಿರಿದ ಸಭಾಂಗಣ ವನ್ನು ಸುತ್ತಲೂ ನೋಡಿದಾಗ, ಆ ಬಾಲಕನಿಗೆ ಒಂದೇ ಕ್ಷಣ ಸಭಾಕಂಪನವಾದಂತಾಯಿತು. ಜನಸಾಗರವನ್ನು ನೋಡುತ್ತಾ ಬಾಯಿಯ ಪಸೆ ಆರಿ ಮೈಯ್ಯೆಲ್ಲಾ ನಡುಕ ಬಂದಂತಾಯಿತು . ಮರುಕ್ಷಣವೇ ದೇವಿ ಶಾರದೆಯನ್ನು ಮನದಲ್ಲೇ ಧ್ಯಾನಿಸಿ , ಹಾಡಲು ಪ್ರಾರಂಭಿಸಿದ.ಸುಮಾರು ಮೂರು ಗಂಟೆಗಳ ಕಾಲ ಸುದೀರ್ಘವಾಗಿ ನೆರೆದಿದ್ದ ವಿದ್ವಾಂಸರು ಅಚ್ಚರಿಗೊಳ್ಳುವಂತೆ,ವರ್ಣ, ಕೀರ್ತನೆಗಳು, ಶಂಕರಾಭರಣದ ರಾಗ ತಾನ ಪಲ್ಲವಿಯೊಂದಿಗೆ ಹಾಡಿ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿದ.
ಕಛೇರಿ ಮುಗಿದ ನಂತರ ಸಭಿಕರೆಲ್ಲರೂ ಕರತಾಡನಗಳೊಂದಿಗೆ ಅವನನ್ನು ಅಭಿನಂದಿಸಿದರು. ವಂದನಾರ್ಪಣೆಯ ಸಂದರ್ಭದಲ್ಲಿ, ವ್ಯವಸ್ಥಾಪಕರು ಆ ಬಾಲಕನ ಪರಿಚಯ ಮಾಡಿಕೊಡುತ್ತಾ, "ಬಾಲಕ ಸುಧೀರ್ ಅನಾಥಾಶ್ರಮದಲ್ಲಿ ಬೆಳೆಯುತ್ತಿರುವ ಹುಡುಗ, ಸಂಗೀತವೆಂಬುದು ಅವನಿಗೆ ರಕ್ತಗತವಾಗಿದೆ, ಇಂತಹ ಅದ್ಭುತ ಪ್ರತಿಭೆಯನ್ನು ಹೊರಗೆಳೆಯಬೇಕಾಗಿರುವುದು
ನಮ್ಮ ನಿಮ್ಮೆಲ್ಲರ ಕರ್ತವ್ಯವೆಂದಾಗ,ಆ ಸಭಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಿಂದ ನಿರಂತರವಾಗಿ ಹತ್ತು ನಿಮಿಷ ಗಳ ಕರತಾಡನ ಕೇಳಿಬಂತು. ಸಭೆಯ ಅಂತ್ಯದಲ್ಲಿ
ಕಾಣಿಕೆಗಳ ಮಹಾಪೂರವೇ ಹರಿಯಿತು. ಸಭೆಯ ಮಧ್ಯದಿಂದ ಎದ್ದು ಬಂದ ಸಿರಿವಂತ ಸುದನ್ವ, ತಾವು ಈ ಅನಾಥ ಬಾಲಕನನ್ನು ದತ್ತು ತೆಗೆದುಕೊಳ್ಳುವುದಾಗಿ
ಎಲ್ಲರೆದುರು ಪ್ರಕಟಿಸಿದಾಗ, ಸಭಿಕರ ಅಭಿಮಾನಕ್ಕೆ ಆ ಪುಟ್ಟ ಬಾಲಕ ತಲೆಬಾಗಿ ಕೈಮುಗಿದಿದ್ದ.