ಬಾಲ್ಯ
ಬಾಲ್ಯ
ಚಿಕ್ಕದನಿಂದಲೂ ಕ್ರಿಕೆಟ್ ಒಂಥರಾ ಆಕರ್ಷಣೆ ಆಟ . ಸಂಜೆಯಾದರೆ ಸಾಕಿತ್ತು ಗೆಳೆಯರನ್ನು ಸೇರಿಸಿ ಕ್ರಿಕೆಟ್ ಆಡುವುದು ಸಾಮಾನ್ಯವಾಗಿತ್ತು. ಎರಡು ಮೂರು ಜನ ಇರುತ್ತಿದ್ದ ನಾವುಗಳು ಬೇಸಿಗೆ ರಜಾ ಬಂತೆಂದರೆ ಸಾಕಿತ್ತು ಅಜ್ಜಿ ಮನೆಗೆಂದು ಬರುತ್ತಿದ ಗೆಳೆಯರನ್ನು ಸೇರಿಸಿ ಕ್ರಿಕೇಟ್ ಆಡುತಿದ್ದೆವು. ಅವರೆಲ್ಲರಿಗೂ ಚಿನ್ನ ಸ್ವಾಮಿ ಕ್ರೀಡಾಂಗಣ ನಮ್ಮ ಮನೆಯಂಗಳವೇ ಆಗಿತ್ತು. ರಜಾದಿನಗಳಲ್ಲಿ ಅಂಗಳದ ಚಿತ್ರಣವೇ ಬದಲಾತ್ತಿತ್ತು. ನಮ್ಮ ಬಳಿ ಸರಿಯಾಗಿ ಬ್ಯಾಟ್ ಕೂಡಾ ಇರುತ್ತಿರಲ್ಲಿಲ್ಲ.ತೆಂಗಿನ ಹೆಡೆಯ ಬ್ಯಾಟ್ ನಮ್ಮ ಪಾಲಿನ ಎಂ. ಆರ್. ಯಫ್ ಬ್ಯಾಟ್ ಆಗಿತ್ತು.ಆಗ 20 ರೂಪಾಯಿಗೆ ಸಿಕುತ್ತಿದ್ದ ಪೋಲೊ, ಸ್ಟಂಬರ್ ಚೆಂಡು ಪಕ್ಕದ ಗೂಡು ಅಂಗಡಿಯಿಂದ ತೆಗೆದು ಅದು ಒಡೆದರೆ ಹೊಸ ಚೆಂಡು ತೆಗೆಯದೆ ಅದಕ್ಕೆ ಸೂಪರ್ ಗ್ಲೂ ಹಾಕುತ್ತಿದ್ದೆವು.
ಹೀಗೆ ಒಂದು ದಿನ ಆಡುವಾಗ ಗೆಳೆಯನೊಬ್ಬ ಹೊಡೆದ ಚೆಂಡು ನೇರವಾಗಿ ಭಾವಿಗೆ ಬಿತ್ತು . ಇನ್ನೇನು ಮಾಡುವುದೆಂದು ಎಲ್ಲರೂ ಬಾಯಿ ಬಾಯಿ ನೋಡಿದರು. ಅಮ್ಮ ದೊಡ್ಡಮ್ಮ ಒಳಗಡೆಯಿದ್ದ ಕಾರಣ ಗೆಳೆಯ ನನ್ನಲ್ಲಿ ಒಂದು ಉಪಾಯ ಹೇಳಿದ . ಅವರು ಬರುವುದರ ಒಳಗೆ ನಮಗೆ ಬಾಲ್ ತೆಗೆಯಬಹುದು ಹೇಗೂ ರಾಟೆಗೆ ಹಗ್ಗ ಉಂಟು ಅದಕ್ಕೆ ಬಕೆಟ್ ಕಟ್ಟಿ ಬಿಟ್ಟರೆ ಆಯಿತೆಂದು. ಅಲ್ಲೇ ಪಕ್ಕದಲ್ಲಿದ್ದ ಬಕೆಟ್ಟನ್ನು ಹಗ್ಗಕ್ಕೆ ಕಟ್ಟಿ ಪಾತಾಳಕ್ಕೆ ಬಿಟ್ಟ. ನಾವೆಲ್ಲರೂ ಬಾವಿಕಟ್ಟೆಗೆ ಸುತ್ತುವರಿದೆವು. ಮೆಲ್ಲ ಮೆಲ್ಲನೆ ಬಕೆಟ್ ಇಳಿಸಿದ್ದೇ ತಡ ಆ ಮಹಾರಾಯ ಯಾವ ಗಂಟುಹಾಕಿ ಬಕೆಟ್ ಕಟ್ಟಿದನೋ ದೇವನೇ ಬಲ್ಲ. ಇನ್ನೇನು ಬಾಲ್ ಹತ್ತಿರ ಮುಟ್ಟುದರೊಳಗೆ ಹಗ್ಗ ಬಿಚ್ಚಿತು . ನಾನು ತಲೆ ಮೇಲೆ ಕೈಯಿಟ್ಟು ಒಂದೇ ಸಮನೆ ಅವನಿಗೆ ಬಯ್ಯಲು ಶುರು ಮಾಡಿದೆ "ಯೇ ಬೋಳ ಅದು ಅಲ್ಯುಮಿನಿಯಂ ಬಕೆಟ್ ಬಿದ್ದ ವಿಚಾರ ದೊಡ್ಡಮ್ಮನಿಗೆ ಗೊತ್ತಾದ್ರೆ ದೊಡ್ಡ ಮಹಾಭಾರತ ನಡೆಯುತ್ತದೆ". ಅದು ಕೇಳದೆ ಈ ಪುಣ್ಯಾತ್ಮ ಒಂದು ಹೆಜ್ಜೆ ಮುಂದೆ ಹೋದ ಮೂಲೆಯಲ್ಲಿದ್ದ ಬಿದಿರಿನ ಕೋಲಿನ ಸಹಾಯದಿಂದ ಮೊದಲು ಬಕೆಟ್ ಎತ್ತಲು ಮುಂದಾದ . ಬಕೆಟ್ ಇನ್ನೇನೂ ಮೇಲೇರುವ ಹೊತ್ತಲ್ಲಿ ಅಡಿಗೆ ಕೋಣೆಯಿಂದ ಹಳೇ ಟೇಪಿನ ಸದ್ದು ಸನಿಹವೇ ಬಂತು ಅತ್ತ ಕಣ್ಣು ಹಾಯಿಸುವ ಕಂಡದ್ದು ದೊಡ್ಡಮ್ಮ . ಅಯ್ಯೋ ರಾಮ ಎನ್ನುತ್ತ ಕೋಲು ಬಿಟ್ಟು ಎಲ್ಲರೂ ಪರಾರಿ . ಬಡಪಾಯಿ ನಾನಾದ್ರು ಎಲ್ಲಿಗೆ ಹೋಗಲಿ ಅಲ್ಲೇ ನಿಂತುಬಿಟ್ಟೆ. ಶುರುವಾಯಿತು ನೋಡಿ ಬೈಗುಳ ಅಬ್ಬಾ ಕಿವಿಗೆ ಮಹಾದಾನಂದ ಇನ್ನು ಈ ಜನ್ಮದಲ್ಲಿ ಅಂಗಳದಲ್ಲಿ ಕ್ರಿಕೆಟ್ ಆಡುವುದು ಬೇಡ ಎನ್ನುವಷ್ಟರ ಮಟ್ಟಿಗೆ ಬಂದು ಬಿಟ್ಟಿತು. ನಂತರ ಅಪ್ಪ ಬಂದು ಕೋಲು ಬಕೆಟ್ ಕೊನೆಗೆ ಚೆಂಡು ತೆಗೆದು ಇನ್ನು ಇಲ್ಲಿ ಆಡಿದ್ರೆ ನೋಡು ಎನ್ನುತ್ತಾ ಬುದ್ಧಿಮಾತು ಹೇಳಿದರು. ಹಾಳಾದ ಸಮಯ ಸರಿಯಿಲ್ಲ ಸುಮ್ಮನೆ ಬೈಗುಳ ಎಂದು ಮನದೊಳಗೆ ನನ್ನನ್ನು ನಾನೇ ಶಪಿಸಿಕೊಂಡೆ. ಗೆಳೆಯರನ್ನು ಮನಸಾರೆ ಬೈದು ಸುಮ್ಮನಾದೆ.
ಇಂದು ಹಾಗೆ ಕುಳಿತಲ್ಲೇ ಭಾವಿ ಮತ್ತು ಅಂಗಳ ನೋಡುವಾಗ ಈ ನೆನಪುಗಳ ಮಧುರ ಕ್ಷಣಗಳ ಪುಟಗಳು ಒಂದೊಂದಾಗಿ ತೆರೆದುಕೊಳ್ಳಲಾರಂಭಿಸುತ್ತದೆ . ನೆನಪುಗಳು ನೆನಪಾಗಿಯೇ ಉಳಿಯುವುದು .ಇಂದು ಬೇರೆ ಮೈದಾನದಲ್ಲಿ ಸಿಗದ ಖುಷಿ ಸಿಗದ ಮಜ ಮನೆಯಂಗಳದಲ್ಲಿ ಆ ಗೆಳಯರ ಜೊತೆಗೂಡಿ ಆಡುವಾಗ ಸಿಗುತ್ತಿತ್ತು. "ಬಾವಿಯೊಳಗೆ ಬಿದ್ದ ಬಾಲ್ ಅದರಿಂದ ನಾವೆಲ್ಲ ದಿಕ್ಕಾಪಾಲ್" ಆ ಸುಂದರ ಗಳಿಗೆ ಇನ್ನು ಬರೀ ನೆನಪು ಮಾತ್ರ ಎನ್ನುವುದೇ ಕಹಿ ವಿಷಯ .