ದೀಪಾವಳಿ
ದೀಪಾವಳಿ
' ಅಂಧಕಾರವ ಓಡಿಸು , ಜ್ಞಾನ ಜ್ಯೋತಿಯ ಬೆಳಗಿಸು '
ಎಂಬ ಹಾಡಿನ ಸಾಲನ್ನು ಕೇಳಿದಾಗ ಬೆಳಕು ಎಲ್ಲರೂ ಬಾಳಲ್ಲೂ ಬೆಳಗಲೆಬೇಕಾದದ್ದು ಎನ್ನುವುದು ತುಂಬಾ ಹತ್ತಿರದ ವಿಷಯವೇ ಆಗಿದೆ.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಧಾರ್ಮಿಕ ಆಚರಣೆಗಳು ಅಗ್ರಸ್ಥಾನವನ್ನು ಪಡೆದಿವೆ . ಪ್ರತಿ ಆಚರಣೆಯಲ್ಲೂ ವೈಜ್ಞಾನಿಕ ಅಂಶಗಳನ್ನು ತೊರುತ್ತವೆ.ಅಂತಹ ಆಚರಣೆಗಳಲ್ಲಿ ದೀಪಾವಳಿಯೂ ಒಂದು.
ದೀಪಾವಳಿ ಬಂದಿತೆಂದರೆ ಮನೆಯಲ್ಲಿ ಸಡಗರ ಸಂಭ್ರಮದ ವಾತಾವರಣ ಮೂಡುತ್ತದೆ.ಶೀಗಿಹುಣ್ಣಿಮೆಯಾದ ಎರಡು ಮೂರು ದಿವಸಕ್ಕೆ ಮನೆಯ ಸ್ವಚ್ಛತೆ ಶುರುವಾಗುತ್ತದೆ.ಮೊದಲಿನ ಮನೆಗಳು ಮಣ್ಣಿನಿಂದ ಕಟ್ಟಲಾಗಿರುತ್ತಿದ್ದವು,ಗೋಡೆಗೆ ಸುಣ್ಣ ಹಚ್ಚಿರುತ್ತಿದ್ದರು . ವರ್ಷಕ್ಕೊಮ್ಮೆ ಅದು ಈ ದೀಪಾವಳಿಗೆ ಮತ್ತೆ ಸುಣ್ಣವನ್ನು ಹಚ್ಚುತ್ತಿದ್ದರು.
ಗಣಪನ ವಾಹನ ಇಲಿಯಣ್ಣ ಮತ್ತು ಅವರ ದೊಡ್ಡಣ್ಣ ( ಅಂದರೆ ಹೆಗ್ಗಣಗಳು ) ಮಾಡಿದ ಮನೆಗಳಿಗೂ ಈ ದಿನಗಳಂದೆ ಮುಕ್ತಿ ಸಿಗುತಿದ್ದವು.ಪಾಪ ಅವುಗಳ ಶಾಪವನ್ನು ನಾವು ಪಡೆಯಬೇಕಾಗುತ್ತಿತ್ತು.ಅವುಗಳು ಮಾಡಿದ ಬಿಲವನ್ನು ಮುಚ್ಚಿ ,ಅವುಗಳ ಮನೆಯನ್ನು ಅರೆಕಾಲಿಕ ಮುಚ್ಚಿ (ಅವು ಪ್ರಯತ್ನ ಬಿಡದೆ ಮತ್ತೆ ತಮಗೆ ಮನೆಯನ್ನು ಮಾಡಿ ಕೊಳ್ಳುತ್ತಿದ್ದವು ) ಅಂದವಾಗಿ ಸುಣ್ಣ ಹಚ್ಚಲಾಗುತ್ತಿತ್ತು.ಇದು ಹಬ್ಬದ ಮೊದಲ ಹಂತ .
ನಂತರ ಮನೆಯಲ್ಲಿರುವ ಎಲ್ಲ ಹಾಸಿಗೆಗಳನ್ನು ಹರಿಯುತ್ತಿರುವ ಹಳ್ಳಕ್ಕೆ ಒಯ್ದು ತೊಳೆದು ಹಾಕುತ್ತಿದ್ದೇವು.
ಇದಾದ ನಂತರ ಮನೆಯಲ್ಲಿರುವ ತೂತು ಬಿದ್ದು ಹಳೆಯದಾದ ಪಾತ್ರೆಗಳನ್ನು ಬೇರ್ಪಡಿಸಿಟ್ಟು ಅದರಿಂದ ಹೊಸ ಸಾಮಾನುಗಳನ್ನು ಖರೀದಿಸಲಾಗುತ್ತಿತ್ತು.ಈ ಪ್ರಕ್ರಿಯೆ ನಡೆಯುವುದು ದೀಪಾವಳಿ ಸಮಯದಲ್ಲೆ ಕಾರಣ ಮನೆ ಸ್ವಚ್ಛ ಮಾಡುವುದರಿಂದ ಇರೊ ಬರೊ ಹಳೆ ಸಾಮಾನು ಕಣ್ಣಿಗೆ ಬೀಳುತ್ತಿದ್ದವು ಆದ್ದರಿಂದ.
ಇನ್ನೂ ಹಬ್ಬಕ್ಕೆಂದು ಖರೀದಿಯೆನೂ ಜೋರಾಗಿರುತ್ತಿರಲಿಲ್ಲ.ಹಾಕಿ ಕೊಳ್ಳೊಕೆ ಬಟ್ಟೆ ಇಲ್ಲ ಎಂದರೆ ಮಾತ್ರ ಬಟ್ಟೆ ಖರೀದಿ,ಇಲ್ಲದಿದ್ದರೆ ಹೊಸ ಬಟ್ಟೆ ಖರೀದಿಯನ್ನೆ ಬಿಟ್ಟು ಬಿಡುತ್ತಿದ್ದೇವು.ಬಾಗಿಲಿಗೆ ತೋರಣವನ್ನು ಅಂಗಡಿಗೆ ಹೋಗಿ ತರುವುದಕ್ಕಿಂತ ಅಜ್ಜಿಯೊ ಅಮ್ಮನೊ ಕೈಯ್ಯಾರೆ ಹೆಣೆದ ಕಸೂತಿ ಅಥವಾ ಊಲನ್ ತೋರಣ ಹಾಕುತ್ತಿದ್ದೇವು.ಜೊತೆಗೆ ತೋಟದಲ್ಲಿ ಬೆಳೆದ ಚೆಂಡು ಹೂ,ಮಾವಿನ ತೋಳಲನ್ನು ದಾರದಲ್ಲಿ ಪೋಣಿಸಿ ಹಾಕುತ್ತಿದ್ದೆವು.ಇನ್ನು ಕಿರಾಣಿ ಸಾಮಾನುಗಳನ್ನು ಹಬ್ಬ ಎಂದು ಸ್ವಲ್ಪ ಹೆಚ್ಚು ತರಲಾಗುತ್ತಿತ್ತು.
ಆಶ್ವಯುಜ ಮಾಸದ ಕೃಷ್ಣ ಪಕ್ಷದ ಕೊನೆಯ ಎರಡು ದಿನಗಳಿಂದ ನಮ್ಮ ದೀಪಾವಳಿ ಹಬ್ಬ ಪ್ರಾರಂಭವಾಗುತ್ತಿತ್ತು . ಕಾರ್ತಿಕ ಮಾಸದ ಮೊದಲ ದಿನ ಅಂದರೆ ಪಾಡ್ಯದೊಂದಿಗೆ ನಮ್ಮ ದೀಪಾವಳಿ ಹಬ್ಬ ಕೊನೆಗೊಳ್ಳುತ್ತಿತ್ತು . ನರಕ ಚತುರ್ದಶಿಯಂದು ಹಿರಿಯರ ಹಬ್ಬ.ಅಗಲಿದ ಹಿರಿಯರನ್ನು ನೆನೆದು , ಸಜ್ಜಕ ( ಜವಾರಿ ಗೋಧಿಯ ರವೆಯಿಂದ ತಯಾರಿಸಿದ ಸಿಹಿ ಖಾದ್ಯ ) ಜೊತೆಗೆ ಅನ್ನವನ್ನು ನೈವೇದ್ಯ ಮಾಡಿ ಪೂಜೆಯನ್ನು ಮಾಡುತ್ತಿದ್ದೇವು.
ದೀಪಾವಳಿ ಅಮಾವಾಸ್ಯೆಯಂದು ರಾತ್ರಿ ಲಕ್ಷ್ಮೀ ಪೂಜೆ.ಕಡಲೆ ಬೇಳೆಯಿಂದ ತಯಾರಿಸಿದ ಹೋಳಿಗೆ ,ಅನ್ನ , ಕಟ್ಟಿನ ಸಾರು ,ಸಂಡಿಗೆ ,ಹಪ್ಪಳ , ಬದನೆಕಾಯಿ ಪಲ್ಯ , ಕೊಸಂಬರಿಯನ್ನು ನೈವೇದ್ಯ ಮಾಡಿ ಪೂಜೆಯನ್ನು ಮಾಡುತ್ತಿದ್ದೇವು . ಪಾಡ್ಯದಂದು ಮನೆಯಲ್ಲಿರುವ ವಾಹನಗಳ ಪೂಜೆ ,ಅಂಗಡಿಗಳಿದ್ದರೆ ಅಲ್ಲೂ ಲಕ್ಷ್ಮೀ ಪೂಜೆ ಮಾಡುತ್ತಿದ್ದೇವು...
ಪಟಾಕಿಯ ಹಾವಳಿಯಂತು ಇರುತ್ತಿರಲಿಲ್ಲ . ಕಾರ್ತಿಕ ಮಾಸ ಪ್ರಾರಂಭವಾಗುವುದರಿಂದ ಮನೆ ದೇವರುಗಳಿಗೆ , ಊರಲ್ಲಿರುವ ದೇವರುಗಳಿಗೆ ಐದೊ , ಒಂಭತ್ತೊ , ಹನ್ನೊಂದೊ , ನೂರಾ ಒಂದೊ ದೀಪ ಹಚ್ಚಿ ಕಾರ್ತಿಕವನ್ನು ಸಂಭ್ರಮಿಸುತ್ತಿದ್ದೇವು .