ಹರಿವು
ಹರಿವು
ನಾನ್ ಸ್ಟಾಪ್ ನವೆಂಬರ್ - ಮಧ್ಯಂತರ
ಸಂಚಾರಿ ವಿಜಯ್ ಅಪ್ಪನಾಗಿ ಅಭಿನಯಿಸಿದ ಈ ಚಿತ್ರ ಪ್ರಶಸ್ತಿಯನ್ನು ಸಹ ಪಡೆಯಿತು. ಅನಾರೋಗ್ಯದಿಂದ ಬಳಲುತ್ತಿದ್ದ ಮಗನನ್ನು, ದೂರದ ಬೆಂಗಳೂರಿಗೆ ಕರೆದೋಯ್ದು ಚಿಕಿತ್ಸೆ ಕೊಡಿಸಿದರೂ ಮಗ ಪ್ರಾಣ ಬಿಡುತ್ತಾನೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡು, ಮಗನ ಹೆಣವನ್ನು ಮನೆವರೆಗೂ ಮೌನವಾಗಿ ಹೊತ್ತೊಯ್ಯುವುದೇ "ಹರಿವು" ಚಿತ್ರದ ಕಥೆ.
ಈ ಕಥೆಯನ್ನು ನನ್ನ ದೃಷ್ಟಿಕೋನದಂತೆ ಬದಲಾಯಿಸುವುದಾದರೆ,
(ಈ ಕಥೆಯ ಸಂಭಾಷಣೆ ಉತ್ತರ ಕನ್ನಡ ಧಾಟಿಯಲ್ಲೂ ಇರುವುದರಿಂದ ಅದೇ ಭಾಷೆಯನ್ನು ಬಳಸುತ್ತೇನೆ )
ಗಂಡ : ಏ ಇಕಿನ, ನೋಡಬಾ ಇಲ್ಲೇ, ಗುರು ಸ್ವಲ್ಪ ಆರಾಮ್ ಆಗಾಕತ್ತಾನ ಅಂತ ಅನ್ಸಾಕತ್ತತಿ.
ಹೆಂಡತಿ : ದೇವ್ರ್ ದಯೆ. ಇರ ಒಬ್ಬ ಮಗ ಚಂದಗ ತಿಂದುಂಡು ಇದ್ರ ಸಮಾಧಾನ ನೊಡ್ರಿಪ.
ಗಂಡ : ಆದ್ರೂ ಬಡವರಿಗೆ ರೋಗ -ಗೀಗ ಬರ್ಬಾರ್ದ ನೋಡ್. ಒಂದ್ ಕಿಡ್ನಿ ಹುಡುಕೋದು ಎಷ್ಟ್ ಕಷ್ಟ ಐತಿ ಗೊತ್ತದ? ನಮಗ ಅಷ್ಟೆಲ್ಲಾ, ರೊಕ್ಕ ಎಲ್ಲಯ್ತಿ?
ಹೆಂಡತಿ : ಅವ್ರ್ ಇವ್ರ್ನ ಯಾಕ್ ಹುಡುಕ್ತಿರಿ, ನನ್ನ ಮಗಗ ನಾನ್ ಕಿಡ್ನಿ ಕೊಡ್ತನಿ. ಹೇಳ್ರಿ ಡಾಕ್ಟರ್ಗೆ.
ಗಂಡ : ಹಂಗ್ ನಮ್ಮ ಕಿಡ್ನಿ ಕೊಡಂಗ್ ಇದ್ರ್, ನಾನೇ ಕೊಡ್ತನಿ ಬಿಡು.
ಹೆಂಡತಿ : ನೋಡ್ರಿ, ಏನೋ ಒಂದ್ ಮಾಡ್ರಿ. ಒಟ್ನಾಗ್ ನಮ್ಮ ಗುರುರಾಜ ಆರಾಮ್ ಆದ್ರ ಸಾಕ್ ನೋಡ್ರಿ.
ಗಂಡ : ಸರಿ, ಇವತ್ ಹೊಕ್ಕನಿ ತಡಿ ಡಾಕ್ಟರ್ ಕಡೆ. ಮಾತಾಡ್ತಿನಿ.
ಹೆಂಡತಿ : ಸರಿ ರಿ.
--------------------
ಗಂಡ : ಡಾಕ್ಟ್ರೇ, ನನ್ನ ಮಗಗ ಕಿಡ್ನಿ ಕೊಡಾಕ್ ಯಾರೂ ಸಿಕ್ಕಿಲ್ರಿ.
ಡಾಕ್ಟರ್ : ಹಂಗಾದ್ರ ನಿನ್ನ ಮಗನ ಕಳ್ಕೊಳಕ ರೆಡಿ ಆಗು.
ಗಂಡ : ಹಂಗಲ್ರಿ ಸಾಹೇಬ್ರ. ನನ್ನ ಮಗಗ ನನ್ನ ಕಿಡ್ನಿನ ಕೊಡ್ಬೇಕ್ ಅಂತ ಮಾಡಿನ್ರಿ.
ಡಾಕ್ಟರ್ : ಒಹ್,ಹಾಗಿದ್ರೆ ಸರಿ ಬಿಡಿ. ನೀವ್ ಯಾವಾಗ್ ರೆಡಿ ಹೇಳಿ, ಆಪರೇಷನ್ ಮಾಡಿ ಮುಗ್ಸೋಣ.
ಗಂಡ : ತಡ ಮಾಡೋದ್ ಬ್ಯಾಡ್ರಿ, ಇವತ್ತೇ ಮಾಡ್ರಿ.
ಡಾಕ್ಟರ್ : ಸರಿ, ನಿಮ್ಮಜೊತೆ ಇರೋಕೆ, ನಿಮ್ ಹೆಂಡ್ತಿ ಕರ್ಕೊಂಡ್ ಬನ್ನಿ, ಹಾಗೆ ನಿಮ್ಮ ಮಗುನೂ ಕರ್ಕೊಂಡ್ ಬನ್ನಿ.
ಗಂಡ : ಆಯ್ತು ಸಾಹೇಬ್ರ.
--------------------
ಗಂಡ : ಲೇ, ನಡೀ ದವಾಖಾನಿಗೆ, ಗುರು ನೀನೂ ನಡಿಪಾ. ಆಪರೇಷನ್ ಇವತ್ತ ಅಂತ.
ಹೆಂಡತಿ : ನಡ್ರಿ, ಹೋಗೋನು.
----------------------------
ಡಾಕ್ಟರ್ : ಆಪರೇಷನ್ ಸಕ್ಸಸ್ ಆಗಿದೆ.
ಹೆಂಡತಿ : ಬಾಳ್ ಉಪಕಾರ ಆತ್ರಿ ಸಾಹೇಬ್ರ. ನಾನು, ನನ್ನ ಗಂಡ, ನನ್ನ ಮಗ ಈ ಜನ್ಮ ಪೂರ್ತಿ ನಿಮಗ ಋಣಿ ಆಗಿರ್ತಿವ್ರಿ.
ಡಾಕ್ಟರ್ : ಅದೆಲ್ಲ ಇರಲಿ. ನಿಮ್ಮ ಗಂಡನಿಗೆ, ಮಗನಿಗೆ ಅರ್ಧ ಗಂಟೆಯಲ್ಲಿ ಪ್ರಜ್ಞೆ ಬರತ್ತೆ, ತಿನ್ನಕ್ಕೆ ಏನಾದ್ರೂ ಕೊಡಿ. ಒಂದ್ ವಾರದಲ್ಲಿ ಇಬ್ರೂ ಹುಷಾರಾಗ್ತಾರೆ. ನಿಮ್ಮ ಗುರು ಸಹ ಎಲ್ಲ ಮಕ್ಕಳಂತೆ ಬೆಳಿತಾನೆ.
ಹೆಂಡತಿ : ನೀವ್ ನಮ್ ಭಾಗದ ದೇವ್ರ ನೋಡ್ರಿಪಾ. ಧನ್ಯವಾದಗಳು ರೀ ಸಾಹೇಬ್ರ. ನಾ ಇನ್ ಬರ್ತನ್ರಿ.