ನಾನು ನನ್ನ ಅಣ್ಣಯ್ಯ
ನಾನು ನನ್ನ ಅಣ್ಣಯ್ಯ
ಓಂ ನಮೋ ನಾರಾಯಣಾಯ !
ನಂದು ಮತ್ತು ನನ್ನ ಅಣ್ಣನ ಬಾಲ್ಯದ ನೆನಪುಗಳನ್ನ ಆಗಾಗ ಮೆಲುಕುಹಾಕುತ್ತಿರುತ್ತೇನೆ. ನಾವು ಈಗ ನಡೆಸುತ್ತಿರುವ ಜೀವನ ಶೈಲಿಯನ್ನು ಬಾಲ್ಯದ ನೆನಪುಗಳಿಗೆ ಹೋಲಿಸಿದರೆ ಬಾಲ್ಯದ ನೆನಪುಗಳೇ ನಮಗೆ ಆನಂದಕೊಡುತ್ತದೆ. ಏಕೆಂದರೆ ಆ ಬಾಲ್ಯದ ಜೀವನದಲ್ಲಿ ಯಾವುದೇ ಪ್ರಪಂಚದ ಜ್ಞಾನವಿಲ್ಲದೆ ಆಟ, ಹುಡುಗಾಟ, ತರ್ಲೆ, ತಮಾಷೆ, ತುಂಟತನ, ನಗು - ಅಳು ಮತ್ತು ಜವಾಬ್ದಾರಿ ರಹಿತ ಜೀವನವಾಗಿತ್ತು. ನನ್ನ ಅಪ್ಪ ಅಮ್ಮ ಈಗಲೂ ನನ್ನ ಮತ್ತು ನನ್ನ ಅಣ್ಣನ ಕೆಲವು ಬಾಲ್ಯದ ನೆನಪುಗಳನ್ನ ನಮಗೆ ಹೇಳುತ್ತಾ ಆನಂದಪಡುತ್ತಾರೆ. ಆ ಕೆಲವು ಬಾಲ್ಯದ ನೆನಪುಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ಬಾಲ್ಯದ ನೆನಪು ಭಾಗ ೧
ಒಂದು ದಿನ ನಾನು ಮತ್ತು ನನ್ನ ಅಣ್ಣ ಮನೆಯ ಹತ್ತಿರ ಜೂಟ್ ಮುಟ್ಸ್ (ಒಬ್ಬರು ಓಡಿಹೋಗುವುದು ಇನ್ನೊಬ್ಬರು ಹಿಡಿಯುವುದು) ಆಟ ಆಡುತ್ತಿದ್ದೆವು ಆಗ ನಾನು ನನ್ನ ಅಣ್ಣನ ಹಿಡಿಯುವ ಸಲುವಾಗಿ ರೋಡ್ ಕ್ರಾಸ್ ಮಾಡೋದಿಕ್ಕೆ ಹೋದಾಗ ನನಗೆ ಸಣ್ಣ ಅಪಘಾತವಾಯಿತು. ಯಾರೋ ಒಬ್ಬ ಬೈಕ್ ನಲ್ಲಿ ಬಂದು ಹೊಡೆದ ಆಗ ನನ್ನ ಹಣೆಗೆ ದೊಡ್ಡ ಪೆಟ್ಟು ಆಯಿತು ರಕ್ತ ಬರುತಿತ್ತು ಆಗ ನಾನು ಬೈಕ್ ಸವಾರನಿಗೆ ಅಂಕಲ್ ನೀವು ಹೋಗಿ ಏನ್ ಆಗಿಲ್ಲ ಎಂದು ಹೇಳಿದೆ ಆಗ ಅವನು ಏನು ಚಿಕಿತ್ಸೆ ಮಾಡಿಸದೆ ಭಯ ಪಟ್ಟು ಹೊರಟೆ ಹೋದ ಆಮೇಲೆ ಇದನ್ನು ನೋಡಿದ ನನ್ನ ಅಣ್ಣ ಭಯ ಪಟ್ಟು ಅಮ್ಮ ಬಂದರೆ ಹೊಡೆಯುತ್ತದೆ ಎಂದು ಮನೆಗೆ ಕರೆದುಕೊಂಡು ಹೋಗಿ ನನ್ನ ಮೇಲೆ ಕಂಬಳಿ (ಬೆಡ್ಶೀಟ್ )ಹೊದಿಸಿ ಮಲಗಿಸಿಬಿಟ್ಟ ಅನಂತರ ಸ್ವಲ್ಪ ಹೊತ್ತು ಆದಮೇಲೆ ಅಮ್ಮ ಕೆಲಸದಿಂದ ಬಂದರು ಬಂದ ಕೂಡಲೇ ಅಮ್ಮ ಅಣ್ಣನನ್ನು ಈ ರೀತಿ ಪ್ರಶ್ನಿಸಿದರು ಯಾಕೋ ನಿನ್ನ ತಂಗಿ ಇಷ್ಟ್ ಹೊತ್ತಿನಲ್ಲಿ ಮಲಗಿದಾಳೆ ಎಂದು ಆಗ ನನ್ನ ಅಣ್ಣ ಭಯ ಪಡುತ್ತಾ ಗೊತ್ತಿಲ್ಲ ಎಂದು ಹೇಳುತ್ತಾ ಅಮ್ಮ ಕಂಬಳಿ ತೆಗೆದರು ಆಗ ಅಮ್ಮ ನೋಡಿ ಗಾಬರಿಗೊಂಡು ಏನಾಯಿತು ಎಂದು ನನ್ನ ಮತ್ತು ನನ್ನ ಅಣ್ಣನನ್ನು ಗದರಿದರು. ಆಗ ಹೆದರಿ ನಾನು ಅಮ್ಮನಿಗೆ ನಡೆದ ಎಲ್ಲ ವಿಷಯ ಹೇಳಿದೆ ಆಗ ಅಮ್ಮ ಅಣ್ಣನಿಗೆ ಪೆಟ್ಟು ಕೊಟ್ಟು ನನಗೂ ಬೈದು ಹೀಗೆ ಮಾಡಬೇಡ ಇನ್ನೊಂದು ಸರಿ ಏನಾದರು ಆಗಿದ್ದರೆ ಏನು ಗತಿ ಎಂದು ಹೇಳಿ ನನ್ನನ್ನು ಹಾಸ್ಪಿಟಲ್ಗೆ ಕರೆದುಕೊಂಡು ಹೋದರು. ಹೀಗೆ ಈ ನೆನಪನ್ನು ನನ್ನ ಅಮ್ಮ ಈಗಲೂ ನೆನೆಸಿಕೊಂಡು ಅಣ್ಣನಿಗೆ ತಮಾಷೆಯಿಂದ ಬೈಯುತ್ತಿರುತ್ತಾರೆ.
ಬಾಲ್ಯದ ನೆನಪು ಭಾಗ ೨,೩,೪,,,,,,,,,,,,,,,,,,,,,
ನಾನು ಮತ್ತು ನನ್ನ ಅಣ್ಣ ಧನುರ್ಮಾಸದ ಸಮಯದಲ್ಲಿ ಬೆಳಗಿನ ಜಾವ ೪.೦೦ ಕ್ಕೆ ಎದ್ದು ಇಬ್ಬರು ಒಟ್ಟಿಗೆ ದೇವಸ್ಥಾನಗಳಿಗೆ ಹೋಗುತ್ತಿದ್ದೆವು ಅದು ಏತಕ್ಕೆ ಎಂದರೆ ಪ್ರಸಾದಕ್ಕಾಗಿ…., ಬೆಳಗಿನ ಜಾವ , ಪ್ರಸಾದ , ದೇವರ ದರ್ಶನ, ಘಂಟಾನಾದ,ಧನಾತ್ಮಕ ಅಂಶಗಳು ಇವೆಲ್ಲವನ್ನೂ ಈಗಲೂ ನೆನೆದರೆ ತುಂಬಾ ಆನಂದವಾಗುತ್ತದೆ.
ಇಷ್ಟೇ ಅಲ್ಲ ಒಂದು ದಿನ ನನ್ನ ಅಣ್ಣನ ಗೆಳೆಯ ನನ್ನ ಅಣ್ಣನನ್ನು ಹೊಡೆದು ಮನೆಗೆ ಹೋಗಿ ಬಾಗಿಲ ಬಳಿ ಅವಿತಿಕೊಂಡಿದ್ದ ಆಗ ನಾನು ಅವನಿಗೆ ಹೀಗೆ ಹೇಳಿದೆ ಲೋ ಬಾರೋ ನನ್ನ ಅಣ್ಣನಿಗೆ ಹೊಡಿತಿಯ ಬಾ ನಿಂಗೆ ಇದೆ ಎಂದು ಅವನ ಮೇಲೆ ಜಗಳಕ್ಕೆ ಹೋಗಿದ್ದೆ.ಈ ನೆನಪನ್ನು ನನ್ನ ಅಜ್ಜಿ ನೆನೆಸಿಕೊಂಡು ಹೇಳುತ್ತಿರುತ್ತಾರೆ.
ಒಂದು ದಿನ ಅದು ಯಾವಾಗ ಅಂದರೆ ಶ್ರಾವಣ ಮಾಸದ ಸಮಯದಲ್ಲಿ ನನ್ನ ಅಣ್ಣ ಗೋವಿಂದ ಎಂದು ಮನೆ ಮನೆಗೆ ಹೋಗುತ್ತಿದ್ದ ಆದರೆ ಅವನಿಗೆ ನಾನು ಜೊತೆಯಲ್ಲೇ ಬರಬೇಕಿತ್ತು ಆಗ ನಮ್ಮ ಮನೆಯ ಬೀದಿಯಲ್ಲಿ ಇರುವ ಶಿವಣ್ಣ ಎಂಬುವರ ಮನೆಗೆ ಹೋದಾಗ ನನಗೆ ಕೂಗಲು ಹೇಳಿದರು ಆಗ ನನಗೆ ಸ್ಪಷ್ಟವಾಗಿ ಹೇಳಲು ಆಗದೆ ಶಿವಣ್ಣನ ಮನೆ ಗೋವಿಂದ ಗೋವಿಂದ ಎಂದು ಹೇಳಿದೆ ಆಗ ಎಲ್ಲರು ನಕ್ಕಿದ್ದರು ಆಗ ನಾನು ನನ್ನ ಅಣ್ಣ ಅಲ್ಲಿಂದ ಓಡಿಹೋದೆವು .
ಇನ್ನು ಹೇಳುತ್ತಾ ಹೋದರೆ ಎಷ್ಟೋ ಬಾಲ್ಯದ ನೆನಪುಗಳು ಇದೆ. ನಾನು ಅಣ್ಣ ಜಗಳವಾಡಿದ್ದು, ,ಅತ್ತಿದ್ದು, ಒಟ್ಟಿಗೆ ತರಗತಿಗೆ ಹೋಗುತಿದ್ದಿದ್ದು, ಒಟ್ಟಿಗೆ ಆಟವಾಡುತಿದ್ದಿದ್ದು ಹೀಗೆ ಎಷ್ಟೋ ನೆನಪುಗಳನ್ನ ನಾನು ಮೆಲುಕು ಹಾಕುತ್ತಿರುತ್ತೇನೆ. ಆದರೆ ಈಗ ಇರುವ ಜೀವನ ಶೈಲಿಗೂ ಆಗ ಇದ್ದ ಜೀವನ ಶೈಲಿಗೂ ತುಂಬಾ ಬದಲಾವಣೆಗಳು ಇವೆ. ಅದು ಏನೆಂದು ನಿಮಗೂ ಗೊತ್ತಿರುತ್ತದೆ. ಬದಲಾವಣೆ ಜಗದ ನಿಯಮ ನಾವು ಅದಕ್ಕೆ ಹೊಂದಿಕೊಂಡು ಸಾಗಲೇಬೇಕು ಎಂದು ಹೇಳುತ್ತಾ ನನ್ನ ಮತ್ತು ನನ್ನ ಅಣ್ಣನ ಬಾಲ್ಯದ ದಿನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಅವಕಾಶ ಕಲ್ಪಿಸಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು.