ಋಣಾನುಬಂಧ
ಋಣಾನುಬಂಧ
"ಸುಜಾತಾ,ನಿನಗೆ ಹುಡುಗ ಇಷ್ಟ ಆಯ್ತಾ? ನಮಗೆಲ್ಲರಿಗೂ ಒಪ್ಪಿಗೆ ಆಗಿದೆ. ಏನೇ ಆದರೂ ನಿನ್ನ ಒಪ್ಪಿಗೆಯ ಮೇರೆಗೆ ಈ ಸಂಬಂಧ ಮುಂದು ವರಿಯುತ್ತದೆ. ನಿನ್ನ ನಿರ್ಧಾರ ಏನು?"
ಸುಜಾತಾ ಳ ತಾಯಿ ಸಾವಿತ್ರಿ ,ಮಗಳನ್ನು ಕೇಳಿದಾಗ ,ಅವಳದು ಒಂದೇ ಮಾತು.
"ನನಗೆ ಈ ಹುಡುಗ ಬೇಡ. ಅವನಿಗೂ ನನಗೂ ಹದಿನೈದು ವರ್ಷಗಳ ವಯಸ್ಸಿನ ಅಂತರವಿದೆ,ನನಗೆ ಈ ಮದುವೆ ಇಷ್ಟವಿಲ್ಲ"
ಮಗಳು ಕಡ್ಡಿ ತುಂಡು ಮಾಡಿದಂತೆ ಹೇಳಿದಾಗ ,ಸುಜಾತಾಳ ತಂದೆ ತಾಯಿ ಸುಮ್ಮನಾಗಬೇಕಾಯಿತು.. ಆದರೆ ಈಗ ಬಂದಿರುವ
ಸಂಬಂಧ ಎಲ್ಲಾ ರೀತಿಯಲ್ಲೂ ಉತ್ತಮವಾಗಿದ್ದು ಮೇಲಾಗಿ, ಆ ಹುಡುಗ ಸುಜಾತಾ ಳನ್ನು ತುಂಬಾ ಇಷ್ಟ ಪಟ್ಟಿದ್ದ. ಆಗರ್ಭ ಶ್ರೀಮಂತ ವಂಶದ ಲ್ಲಿ ಹುಟ್ಟಿದ್ದ
ಭೂಷಣ್ ಗೆ ಹತ್ತು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಇತ್ತು. ಜೊತೆಗೆ , ಬಿ.ಇ. ಓದಿದ್ದ. ನೋಡಲು
ಆಕರ್ಷಕವಾಗಿ ದ್ದ.ಆದರೆ ಏನು ಮಾಡುವುದು?ಮಗಳ ನಿರ್ಧಾರ ವನ್ನು ಒಪ್ಪಿಕೊಳ್ಳಲೇ ಬೇಕು. ಸುಮ್ಮನಾದರು.
ಒಮ್ಮೆ ವೇದಿಕೆಯೊಂದರಲ್ಲಿ ಸುಜಾತಾ ಹಾಡುವ ಮಧುರಗಾನಕ್ಕೆ ಹಾಗೂ ರೂಪಕ್ಕೆ ಮನಸೋತಿದ್ದ ಭೂಷಣ್,ಮದುವೆ ಬ್ರೋಕರ್ ರಂಗಣ್ಣ ನವರ ಮೂಲಕ ಸಂಬಂಧ ಕುದುರಿಸುವಂತೆ ಮಾಡಿ ,ಹುಡುಗ ಹುಡುಗಿ ಪರಸ್ಪರ ನೋಡುವವರೆಗೂ ಬಂದಾಗಿತ್ತು.
ಭೂಷಣ್ ಗೆ ತಾಯಿ ಇಲ್ಲದಿರುವ ಕಾರಣ ಅವನ ಮದುವೆ ಪ್ರಯತ್ನ ನಿಧಾನವಾಗಿ ಸಾಗಿತ್ತು. ಅವನ ಶ್ರೀಮಂತಿಕೆ ಯನ್ನು ಕಂಡು ಅವನ ಮನೆ ಬಾಗಿಲಿಗೆ ಹಲವಾರು ಕನ್ಯಾ ಪಿತೃಗಳು ತಮ್ಮ ಚಪ್ಪಲಿ ಗಳನ್ನು ಸವೆಸಿದ್ದರೂ, ಭೂಷಣ್ ಗೆ ಯಾವ ಹುಡುಗಿಯೂ ಇಷ್ಟವಾಗಿರಲಿಲ್ಲ.
ಆದರೆ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಇಪ್ಪತ್ತು ವರ್ಷ ವಯಸ್ಸಿನ ಸುಜಾತಾ ಅವನ ಮನಸೆಳೆದಿದ್ದಳು.
ಹೀಗಾಗಿ ವರನ ಕಡೆಯಿಂದಲೇ ಮದುವೆ ಪ್ರಸ್ತಾಪ ಸುಜಾತಾ ಳ ಮನೆಯವರೆಗೂ ಬಂದಿತ್ತು.
ಸುಜಾತಾ ಳ ತಂದೆ ತಾಯಿ ಯರಿಗೆ ಭೂಷಣ್ ಕುಟುಂಬ ಎಲ್ಲಾ ರೀತಿಯಲ್ಲೂ ಸರಿಯೆನಸುವಂತೆ ಅನ್ನಿಸಿದ್ದರೂ, ಅವನ ವಯಸ್ಸು ಸ್ವಲ್ಪ ಹೆಚ್ಚೆನಿಸುತ್ತಿತ್ತು. ಹೀಗಾಗಿ ಮಗಳ ನಿರ್ಧಾರ ಕ್ಕೇ ಬಿಟ್ಟಿದ್ದರು.
"'ಚಿನ್ನದ ಸೂಜಿ ಎಂದು ಕಣ್ಣು ಚುಚ್ಚಿ ಕೊಳ್ಳಲಾದೀತೆ?
ಸ್ವಲ್ಪ ಕಪ್ಪಾಗಿದ್ದರೂ, ಭೂಷಣ್ ಲಕ್ಷಣವಾಗಿದ್ದ,ತಾನಾಗೇ ಮೆಚ್ಚಿ ಮನೆಯವರೆಗೂ ಬಂದಿರುವ ಶ್ರೀಮಂತ ಹುಡುಗ, ಆದರೆ ನನಗೂ ಅವನಿಗೂ ಹದಿನೈದು ವರ್ಷ ಮೀರಿ ದ ವಯಸ್ಸಿನ ಅಂತರ, ಜನರೇಶನ್ ಗ್ಯಾಪ್ ಆಗುತ್ತದೆ.ಮದುವೆಯಾದ ತಕ್ಷಣ ಮಕ್ಕಳಿಗಾಗಿ ಒತ್ತಡ ಹಾಕುತ್ತಾರೆ. ನಾವು ನಾವಾಗಿ ವಿವಾಹ ಜೀವನವನ್ನು ಒಂದೆರಡು ವರ್ಷ ಗಳೂ ನೆಮ್ಮದಿ ಯಿಂದ ಎಂಜಾಯ್ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಮೇಲಾಗಿ ಹುಡುಗ ಸ್ವಲ್ಪ ಕಪ್ಪು.ನಮ್ಮದು ಇಜ್ಜೋಡಿ ಆಗುತ್ತದೆ. ನನಗಿನ್ನೂ ಈಗ ಇಪ್ಪತ್ತು ವರ್ಷ. ಇವನನ್ನು ಬಿಟ್ಟರೆ ಬೇರೆ ಹುಡುಗರು ಸಿಗಲ್ವಾ?ನನಗಂತೂ ನನ್ನಷ್ಟೇ ಸಮ ವಯಸ್ಸಿನ ಹುಡುಗ ಸಿಗಬೇಕು. ಆಗ ಲೈಫ್ ಥ್ರಿಲ್ ಆಗಿರುತ್ತದೆ". ಚೆನ್ನಾಗಿ ಯೋಚಿಸಿ ಕಡೆಗೆ
ಒಂದೇ ಮನಸ್ಸಿನಿಂದ ಈ ಹುಡುಗ ನನ್ನು ತಿರಸ್ಕರಿಸಿ ದ್ದಳು.
ಸುಜಾತಾ ಳ ಸ್ನಾತಕೋತ್ತರ ಪದವಿ ಯ ವಿದ್ಯಾಭ್ಯಾಸ ವೂ ಮುಂದುವರೆಯುತ್ತಿತ್ತು. ಹಲವಾರು ವರಗಳ ವೀಕ್ಷಣೆ ಯೂ ನಡೆಯುತ್ತಿತ್ತು. ಯಾವುದೂ ಸಹ ಅವಳಿಗೆ ಸರಿಯಾಗಿ ಮ್ಯಾಚ್ ಆಗಿರಲಿಲ್ಲ. ಎಷ್ಟೋ ಬಾರಿ ಅವಳ ತಾಯಿ ಸಾವಿತ್ರಿ,
"ಮನೆವರೆಗೂ ಬಂದ ಮಹಾಲಕ್ಷ್ಮಿ ಯನ್ನು ತಿರಸ್ಕರಿಸಿದೆವು. ಈಗ ಅದರ ಫಲ ವನ್ನು ಅನುಭವಿಸುತ್ತಾ ಇದ್ದೀವಿ"ಎಂದು ಬೇಸರ ಮಾಡಿಕೊಂಡಿದ್ದೂ ಆಗಿತ್ತು.
ಆಗೆಲ್ಲಾ ಸುಜಾತಾ ಅಮ್ಮ ನಿಗೆ
"ಅಮ್ಮ ಯಾವುದಕ್ಕೆ ಯಾವುದನ್ನೋ ಸೇರಿಸಿ ಮಾತನಾಡಬೇಡ . ನನ್ನ ಹಣೆಯಲ್ಲಿ ಬರೆದಂತೆ ಆಗಲಿ."ಎಂದು ತಿಳುವಳಿಕೆ ಹೇಳುತ್ತಿದ್ದಳು.
ಒಂದು ದಿನ ಸುಜಾತಾ, ಕಾಲೇಜು ಮುಗಿಸಿ,ಬಸ್ಸ್ಟಾಂಡ್ ನಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ, ಎಷ್ಟು ಹೊತ್ತಾದರೂ ಬಸ್ ಬರದೆ ಕಡೆಗೆ ಧೋ ಎಂದುಮಳೆ ಶುರುವಾಯಿತು. ಅವಳಿಗೆ ಏನು ಮಾಡಬೇಕೆಂದು ತೋಚದೇ ಸುಮ್ಮನೆ ಬಸ್ ಸ್ಟಾಪ್ ನ ಕಲ್ಲು ಬೆಂಚಿನ ಮೇಲೆ ಕುಳಿತಿದ್ದಾಗ, ಕಾರೊಂದು ಅವಳ ಮುಂದೆ ನಿಂತಾಗ, ಅವಳಿಗೆ ಆಶ್ಚರ್ಯವಾಯಿತು. ಸ್ಟೀರಿಂಗ್ ಸೀಟಿನಲ್ಲಿ ಕುಳಿತಿದ್ದ ಭೂಷಣ್ ಗ್ಲಾಸ್ ಕೆಳಗೆ ಮಾಡಿ ಇವಳನ್ನು ಕಾರ್ ಹತ್ತುವಂತೆ ಒತ್ತಾಯ ಮಾಡಿದಾಗ, ವಿಧಿಯಿಲ್ಲದೆ ಅವಳು ಭೂಷಣ್ ಕಾರಿನಲ್ಲಿ ಕುಳಿತಳು.
ಇಂಪೋರ್ಟೆಡ್ ಕಾರು ರಸ್ತೆ ಯಲ್ಲಿ ಚಲಿಸುತ್ತಿದ್ದರೆ,ತಾನು ವಿಮಾನದಲ್ಲಿ ಹಾರುತ್ತಿರುವಂತೆ ಅವಳಿಗೆ ಭಾಸವಾಯಿತು.,ಮೂವತ್ತೈದರ ಹರಯದ ಭೂಷಣ್ ಸ್ವಲ್ಪ ಕಪ್ಪಾಗಿದ್ದರೂ ಲಕ್ಷಣವಾಗಿದ್ದ ಎಂಬುದನ್ನು ಅವಳು ಮೊದಲ ಬಾರಿಗೆ ಗಮನಿಸಿದಳು. ನೀಲ ಮೇಘ ಶ್ಯಾಮ ನನ್ನು ಓರೆಗಣ್ಣಿನಿಂದ ನೋಡುತ್ತಾ ಇದ್ದಳು. 'ಅಯ್ಯೋ ನಾನು ಇವನ ಆಯ್ಕೆ ಯ ವಿಷಯದಲ್ಲಿ ತಪ್ಪು ಮಾಡಿದೆನಾ?ಆದರೆ ನನ್ನ ನಿರ್ಧಾರ ವನ್ನುಈಗಾಗಲೇ ತಿಳಿಸಿಯಾಗಿದೆ. ಬಡವರ ಮನೆಯ ಹೆಣ್ಣಿಗೆ ಇದಕ್ಕಿಂತಲೂ ಅದೃಷ್ಟ ಬರುವುದು ಸಾಧ್ಯವೇ '? ಮನದಲ್ಲೇ ಯೋಚಿಸುತ್ತಾ ಸುಮ್ಮನೆ ಕುಳಿತಿದ್ದಾಗ, ಭೂಷಣ್ ಕ್ಯಾಸೆಟ್ ಪ್ಲೇ ಮಾಡಿದ. ಅವಳಿಗೆ ಆಶ್ಚರ್ಯವಾಯಿತು. ಅಂದು ತಾನು ಕಾಂಪಿಟೇಶನ್ ಗೆ ಹಾಡಿದ್ದ ಜಿ.ಎಸ್.ಶಿವರುದ್ದಪ್ಪನವರ ಭಾವಗೀತೆ.
"ಎಲ್ಲಿದೆ ಬೃಂದಾವನ ಕೇಳಿರೋ
ಎಲ್ಲಿ ಯಶೋದಾ ತಾಯಿ
ಎಲ್ಲ ನನ್ನ ಆ ಧವಳ ಶ್ಯಾಮಲೆ
ಎಲ್ಲಿದೆ ಮೋಹನ ಮುರಳಿ
ನನ್ನ ಪ್ರಾಣಸಖಿ ರಾಧಾ ರಮಣಿಯು
ಹುದುಗಿರುವಳು ಇನ್ನೆಲ್ಲಿ "
ಭಾವಗೀತೆ ಹೊರಹೊಮ್ಮುತ್ತಿತ್ತು.ಭೂಷಣ್ ಸುಶ್ರಾವ್ಯವಾದ ಭಾವಗೀತೆ ಕೇಳುತ್ತಾ ಕಾರ್ ಡ್ರೈವ್ ಮಾಡುತ್ತಿದ್ದ.
ಸುಜಾತಾ ಳನ್ನು ಅವಳ ಮನೆಯ ಹತ್ತಿರ ಇಳಿಸಿ
ಬೈ ಎಂದು ಹೇಳಿ ಹೊರಟ ಭೂಷಣ್ ಬಗ್ಗೆ ,ಸುಜಾತಾ
ರಾತ್ರಿ ಇಡೀ ಯೋಚಿಸಿ ದಳು. '
ತನ್ನನ್ನು ಮೆಚ್ಚಿದ ಇಂತಹ ಸಭ್ಯ ಸಿರಿವಂತ ಹುಡುಗ ನನ್ನು ತಿರಸ್ಕರಿಸಿ ಎಂತಹ ತಪ್ಪು ಮಾಡಿಬಿಟ್ಟೆ.? ಬಯಸದೇ ಬಂದಿದ್ದ ಭಾಗ್ಯವನ್ನು ತಿರಸ್ಕರಿಸಿ ಬಿಟ್ಟೆನಲ್ಲಾ!'ಸುಜಾತಾಳಿಗೆ ಬೇಸರವೆನಿಸಿತು.
ಈ ಘಟನೆ ನಡೆದು. ಒಂದೆರಡು ತಿಂಗಳುಗಳು ಕಳೆದ ಮೇಲೆ, ಮದುವೆಯ ಬ್ರೋಕರ್ ರಂಗಣ್ಣ,ಸುಜಾತಾ ಳ ಮನೆಗೆ ಬಂದು, ಭೂಷಣ್ ಸುಜಾತಾ ಳ ಹೊರತು ಬೇರೆ ಯಾರನ್ನೂ ಮದುವೆಯಾಗುವುದಿಲ್ಲ ವೆಂಬ ವಿಷಯ ತಿಳಿಸಿದಾಗ, ಸುಜಾತಾ ಳ ತಾಯಿ ಸಾವಿತ್ರಿ, ಮತ್ತೊಮ್ಮೆ ಭೂಷಣ್ ನ ಪ್ರಸ್ತಾಪ ತೆಗೆದು ಮಗಳಿಗೆ ಮನಸ್ಸು ಬದಲಾಯಿಸುವಂತೆ ಹೇಳಿನೋಡಿದರು., ಸುಜಾತಾ ತನ್ನ ನಿರ್ಧಾರ ಕ್ಕಾಗಿ ಎರಡು ದಿನಗಳ ಕಾಲಾವಕಾಶ ಕೇಳಿಕೊಂಡಳು.
ಆಂದಿನ ಅವಳ ಅಭಿಪ್ರಾಯ ಇಂದು ಬದಲಾಗಿತ್ತು.ಭೂಷಣ್ ನ ನಂತರ ಬಂದ ಗಂಡುಗಳಲ್ಲಿ ಯಾವುದಾದರೊಂದು ನ್ಯೂನತೆ ಇರುತ್ತಿತ್ತು.ಅವಳ ಮನಸ್ಸಿಗೆ ಯಾವುದೂ ಮೆಚ್ಚುಗೆ ಆಗುತ್ತಿರಲಿಲ್ಲ.ದೇವರ ದೃಷ್ಟಿಯಲ್ಲಿ ಭೂಷಣ್ ನೇ ನನ್ನ ಜೀವನ ಸಂಗಾತಿ ಯಾಗಬೇಕೆಂಬ ಸಂಕಲ್ಪವಿದ್ದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ,ಇನ್ನು ವಯಸ್ಸಿನ ಅಂತರವಿದ್ದರೂ ಮಿಕ್ಕೆಲ್ಲಾ ವಿಷಯಗಳಲ್ಲಿ ಯಾವುದೇ ಕೊರತೆಯಿಲ್ಲ. ದೇವರಿಟ್ಟಂತೆ ಆಗಲಿ ಎಂದು ನಿರ್ಧರಿಸಿ,
ಮದುವೆಗೆ ಒಪ್ಪಿಗೆ ಸೂಚಿಸಿದಳು.
ಸುಜಾತಾ ತನ್ನನ್ನು ಮದುವೆಯಾಗಲು ಒಪ್ಪಿದ್ದಾಳೆಂದು
ತಿಳಿದಾಗ, ಭೂಷಣ್ ತನ್ನ ಬ್ರಹ್ಮ ಚರ್ಯವ್ರತದ ನಿರ್ಧಾರ ವನ್ನು ಬದಲಾಯಿಸಿದ.
ಯಾವ ಜನ್ಮದ ಋಣಾನುಬಂಧ ವೋ ಏನೋ, ಸುಜಾತಾ ಹಾಗೂ ಭೂಷಣ್ ಗಂಡ ಹೆಂಡತಿ ಯರಾಗಿ ನೂರಾರು ಜನಗಳ ಸಮ್ಮುಖದಲ್ಲಿ ಸಪ್ತಪದಿ ತುಳಿದರು.
ಇಬ್ಬರ ಮುಖದಲ್ಲೂ ಸಂತೃಪ್ತಿ ತುಳುಕುತ್ತಿತ್ತು.ಯಾವ ಜನ್ಮದ ಮೈತ್ರಿಯೋ ಅವರಿಬ್ಬರನ್ನೂ ಈ ಜನ್ಮದಲ್ಲೂ ಒಟ್ಟಿಗೆ ಸೇರಿಸಿದ್ದು, ಇದನ್ನು ಯಾರಿಂದಲೂ ತಪ್ಪಿಸಲು ಆಗಲಿಲ್ಲ."ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ:"