ಶರಣಾಗಿ ನೋಡು ಅವನಲ್ಲಿ...!
ಶರಣಾಗಿ ನೋಡು ಅವನಲ್ಲಿ...!
ಹಣದ ನಶೆಯಲಿ ಮದವೇರಿದ ಆನೆಯಂತೆ
ದರ್ಪ, ಅಹಂಭಾವದಿ ನಿನ್ನವರನ್ನೇ ತುಳಿದು
ಅಟ್ಟಹಾಸದಿ ಮೆರೆದರೇನು ಬಂತು ಮೂಢ?
ಕರ್ಮಫಲವು ನಿನ್ನ ಬಂಧಿಸದೆ ಬಿಡುವುದೇ?
ಜಗದಲ್ಲಿ ನಾನೇ ಶ್ರೇಷ್ಠ ನಾನೇ ಉತ್ಕೃಷ್ಟನೆಂದು
ಪರಂಜ್ಯೋತಿ ಪರಮಾತ್ಮನನ್ನೂ ಪೂಜಿಸದೇ
ಉಪಕಾರಗೈದವಗೇ ಎರಡು ಬಗೆಯುವೆಯಲ್ಲಾ?
ಬಡವರ ಕಣ್ಣೀರಿನ ಶಾಪ ನಿನಗೆ ತಟ್ಟದೇ ಬಿಟ್ಟೀತೇ?
ಶ್ರೀಮಂತಿಕೆಯ ಮದದಲ್ಲಿ ಬಡ ಜನರ ತುಳಿದು
ಸುಳ್ಳು, ಮೋಸ, ವಂಚನೆಯ ಜಾಲದಿ ಮುಳುಗಿ
ನಿನಗೆ ಸಾವೇ ಇಲ್ಲವೆಂಬಂತೆ ದರ್ಪ ತೋರುವೆಯಲ್ಲಾ?
ನೀ ಎಸಗಿದ ಪಾಪ ಕರ್ಮದ ಕೊಡ ತುಂಬದೇ ಇದ್ದೀತೇ?
ಉರುಳುವ ಕಾಲ ಚಕ್ರಕ್ಕೆ ಸಿಕ್ಕಿ ನಲುಗಿದವರೆಷ್ಟೋ
ಹಿಂದೆ ಮೇಲಿದ್ದ ಜನರು ಇಂದು ಕೆಳಗಾದವರೆಷ್ಟೋ
ರಕ್ಕಸರಂತೆ ಮೆರೆದವರೆಲ್ಲಾ ಮಣ್ಣಾದವರೆಷ್ಟೋ
ಮೂರು ದಿನದ ಬಾಳಿನಲಿ ಸ್ವಾರ್ಥವೇಕೆ ಮೂಢ?
ಕುರುಡು ಕಾಂಚಾಣದ ಅಮಲಿನಲಿ ಕುರುಡಾಗಿ
ಹಣವಿದ್ದರೆ ಜನ ಬಲವಿಹುದೆಂದು ಮೂಢನಂತೆ
ಇರುವಾಗ ಪರೋಪಕಾರ ಮಾಡದೇ ಹೋದೆಯಲ್ಲಾ?
ನಿನ್ನ ಮೋಸ,ವಂಚನೆಯ ಕೂಪದೊಳು ನೀ ಬಿದ್ದೆಯಲ್ಲಾ!
ಬಾಳ ಸಂಧ್ಯಾ ಕಾಲದಲ್ಲಿ ಏನಿಹುದು ನಿನ್ನಲ್ಲಿ ನೀ ಹೇಳು
ಕೂಡಿಟ್ಟ ಹಣವಿಲ್ಲ, ಆಸ್ತಿ ಪಾಸ್ತಿ, ಜನಬಲ ಏನೂ ಇಲ್ಲ!
ಇದ್ದಾಗ ಪರರಿಗುಪಕಾರ ಮಾಡದೇ ನಾಸ್ತಿಕನಾಗಿ ಬಾಳಿದೆ
ಈಗ ಪರಮಾತ್ಮನೇ ದಾರಿಯೆಂದು ಭಾವುಕನಾದೆಯಾ?
ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ದೇವರೇ
ನನ್ನ ಈ ದೇಹದೊಳಗಿನ ಆತ್ಮವೆಂಬ ಬೆಳಕೆಂದು ಬೇಡಿ
ನಿನ್ನ ಆತ್ಮವು ಪರಂಜ್ಯೋತಿ ಪರಮಾತ್ಮನಿಗೆ ಶರಣಾಗಿ
ಕೊನೆಗೂ ಅರಿತೆಯಲ್ಲಾ ಅವನೇ ಸತ್ಯ, ಅವನೇ ನಿತ್ಯವೆಂದು!