Prabhakar Tamragouri

Inspirational

3.5  

Prabhakar Tamragouri

Inspirational

ಅಂತಃಕರಣ

ಅಂತಃಕರಣ

13 mins
330


ಬೆಳಗಿನ ಜಾವದಲ್ಲಿ ಮನೆ ಮುಂದಿನ ಚರಂಡಿಯಲ್ಲಿ ಮಳೆ ನೀರು ರಭಸದಿಂದ ಧುಮುಕುವ ಸದ್ದಿಗೆ ಎಚ್ಚರವಾಯಿತು . ಕಣ್ಣು ಉಜ್ಜಿ ಕಿಟಕಿ ಕಡೆ ನೋಡಿದೆ . ಮಳೆ ಜೋರಾಗಿ ಸುರಿಯುತ್ತಿತ್ತು . ಸಣ್ಣಗೆ ಬೆಳಕು ಬಿಟ್ಟಿತ್ತು . ಬೆಳಗೆದ್ದು ಓದಿಕೊಳ್ಳಲು ಈಗ ಏಳಲೋ ಇನ್ನೂ ಸ್ವಲ್ಪ ಹೊತ್ತು ಬಿಟ್ಟು ಏಳಲೋ ಎಂದು ಲೆಕ್ಕಾಚಾರ ಹಾಕುತ್ತಿದ್ದೆ . ತಂದೆಯವರು ಹಾಸಿಗೆ ಮೇಲೆ ಏನನ್ನೋ ಯೋಚಿಸುತ್ತಾ ಕೂತಿದ್ದರು . ಅಮ್ಮ ಆಗಲೇ ಎದ್ದು ಒಲೆಗೆ ಬೆಂಕಿ ಹಚ್ಚಲು ಬೂದಿ ಕೆರೆಯುವುದು ಕೇಳಿಸುತ್ತಿತ್ತು . ಅದೇ ಹೊತ್ತಿಗೆ ಯಾರೋ ಮುಂದಿನ ಬಾಗಿಲಲ್ಲಿ ” ಹೆಗಡೆರೆ ” ಎಂದು ತಂದೆಯವರನ್ನು ಕರೆದರು . ಇಷ್ಟು ಬೆಳಿಗ್ಗೆ ಯಾರು ಬಂದರಪ್ಪ ಎಂದು ಗೊಣಗಿಕೊಳ್ಳುತ್ತಾ ತಂದೆಯ ಕಡೆ ನೋಡಿದೆ . ತಂದೆಯವರೊಡನೆ ಕಾಡು ಹರಟೆ ಕೊಚ್ಚಲು ಅವರ ಸ್ನೇಹಿತರು ಕೆಲವರು ಹೊತ್ತುಗೊತ್ತು ಇಲ್ಲದೆ ಬರುತ್ತಿದ್ದರು. ಹಾಗೇ ಯಾರೋ ಬಂದಿರಬಹುದು ಎಂದುಕೊಂಡೆ . ತಂದೆಯವರು ” ಯಾರು ..? ” ಎಂದರು .


ಬಂದವರು ” ನಾನು ರಾಮಯ್ಯ ” ಎಂದದ್ದು ಕೇಳಿಸಿತು . ರಾಮಯ್ಯ ಅಜ್ಜಿಮನೆ ಹತ್ತಿರ ಇರುವವನು. ನನ್ನ ದೊಡ್ಡ ಮಾವ ವೈದ್ಯಕೀಯ ಓದಿದನೆಂದು ಇವನೂ ವೈದ್ಯಕೀಯ ಓದಲು ಸೇರಿಕೊಂಡಿದ್ದ . ರಜಾ ದಿನಗಳಲ್ಲಿ ನಮ್ಮ ಮನೆಗೆ ಬರುತ್ತಿದ್ದ . ಆದರೆ , ಇಷ್ಟು ಬೆಳಿಗ್ಗೆ ಎಂದೂ ಬಂದಿರಲಿಲ್ಲ . ತಂದೆ ಸಟ್ಟನೆದ್ದು ಬಾಗಿಲು ತೆಗೆದರು . ” ಓ ! ರಾಮಯ್ಯ ಇಷ್ಟು ಬೆಳಿಗ್ಗೆ ….” ಕೆಟ್ಟ ಸುದ್ದಿ ಹೇಳೋಣ ಅಂತ ಬಂದೆ . ” ” ಏನು ? ” ತಂದೆ ಗಾಬರಿಯಿಂದ ಕೇಳಿದರು . ” ಪಾತತ್ತೆ ತೀರಿಕೊಂಡ್ಲು . ” ” ಹೌದಾ ? ನಿನ್ನೆ ಬೆಳಿಗ್ಗೆ ಇಲ್ಲಿ ಬಂದು ಮಗಳನ್ನು , ಮೊಮ್ಮಕ್ಕಳನ್ನು ಕರ್ಕೊಂಡು ಹೋಗಿದ್ದರಲ್ಲ ಮಾರಾಯ . ಅವರಿಗೇನಾಗಿತ್ತು …?


“ಗಂಡನ ಮನೆಯಲ್ಲಿ ಚಿಕ್ಕಮ್ಮನಿಗೆ ಎರಡನೇ ಹೆರಿಗೆಯಾಗಿ ಎರಡು ತಿಂಗಳ ಮೇಲೆ ತಂದೆಯವರು ಚಿಕ್ಕಮ್ಮನನ್ನು ಅವರ ಇಬ್ಬರು ಮಕ್ಕಳನ್ನು ಒಂದು ತಿಂಗಳ ಮಟ್ಟಿಗೆ ಕರೆಸಿಕೊಂಡಿದ್ದರು . ಅಜ್ಜಿಗೆ ನಾನೇ ಮೊನ್ನೆ ಚಿಕ್ಕಮ್ಮ , ಮಕ್ಕಳು ನಮ್ಮ ಮನೆಗೆ ಬಂದ ಸುದ್ದಿ ಮುಟ್ಟಿಸಿ ಬಂದಿದ್ದೆ. ಅಜ್ಜಿ ನಿನ್ನೆ ಬೆಳಿಗ್ಗೆ ಬಂದು ಎರಡು ದಿನದ ಮಟ್ಟಿಗೆಂದು ಮಗಳು , ಮೊಮ್ಮಕ್ಕಳನ್ನು ಕರೆದುಕೊಂಡು ಹೋಗಿದ್ದಳು . ಅಜ್ಜಿಯನ್ನು ನಾನು ಕರೆಯಲು ಹೋದಾಗ ಅವಳು ” ಗೋವಿಂದ ಕಾಗದ ಬರೆದಿದ್ದನೆ ? ಹೇಗಿದ್ದಾನಂತೆ ? ” ಎಂದು ಕೇಳಿದಳು . ಮಾವ ಕಾಗದ ಬರೆದಿದ್ದ . ಚೆನ್ನಾಗಿದ್ದಾನಂತೆ ಎಂದು ವರದಿ ಕೊಟ್ಟಿದ್ದೆ . ಅಜ್ಜಿ ಮಗನನ್ನು ನೋಡದೇ ಒಂದು ವರ್ಷವಾಗಿತ್ತು . ಮಕ್ಕಳಿಗೆ ಬೇಡವಾದ ತಾನು ಯಾಕೆ ಬದುಕಿರಬೇಕು . ದೇವರು ತನಗೆ ಯಾಕೆ ಸಾವು ಕೊಡುವುದಿಲ್ಲ ಎಂದು ಅಜ್ಜಿ ಕಣ್ಣೀರು ಹಾಕಿದ್ದಳು .


ಅಜ್ಜಿಗೆ ದೊಡ್ಡ ಮಾವನಲ್ಲದೇ ಇನ್ನೂ ಒಬ್ಬ ಗಂಡು ಮಗನಿದ್ದ . ಅವನು ಓದದೆ , ಕೆಲಸವಿಲ್ಲದೆ ಉಂಡಾಡಿಗುಂಡನಂತೆ ನಮ್ಮ ಮನೆಯಲ್ಲಿ ತಿಂದುಂಡುಕೊಂಡು ಇದ್ದ. ಅಣ್ಣ ,ತಮ್ಮ ,ತಂಗಿ ಮೂರು ಜನರೂ ನಮ್ಮ ತಂದೆಗೆ ನಮ್ಮ ತಾಯಿಯನ್ನು ಕೊಟ್ಟು ಮದುವೆಯಾದಾಗ ಅವರ ಜೊತೆಯಲ್ಲೇ ಬಂದಿದ್ದರು . ಚೂಟಿಯಾದ ದೊಡ್ಡ ಮಾವನನ್ನು ನಮ್ಮ ತಂದೆ ಎಸ್ಸೆಸ್ಸೆಲ್ಸಿ ತನಕ ಓದಿಸಿದ್ದರು . ಹಣಕಾಸಿನ ತೊಂದರೆಯಿಂದ ತಂದೆಯವರು ಮುಂದೆ ಅವನನ್ನು ಓದಿಸಲಿಕ್ಕೆ ಆಗಿರಲಿಲ್ಲ . ಅವನು ಅವರಿವರಿಂದ ದೇಣಿಗೆ ಸಂಗ್ರಹಿಸಿ ಹಾಸ್ಟೆಲ್ ಗಳಲ್ಲಿ ಬಟ್ಟೆ , ಊಟ ,ವಿದ್ಯಾರ್ಥಿವೇತನ ಪಡೆದು ವೈದ್ಯಕೀಯ ಓದಿದ್ದ . ತಂದೆಯವರಿಗೆ ಆಗಾಗ ನೂರು ರೂಪಾಯಿಗಳನ್ನು ಕಳುಹಿಸಿ ಎಂದು ಕಾಗದ ಬರೆದು ಹಣ ತರಿಸಿಕೊಳ್ಳುತ್ತಿದ್ದ .ತಂದೆ ಮಾವನಿಗೆ ಬಸ್ ಚಾರ್ಜ್ ಕೊಟ್ಟಿದ್ದೂ ಇದೆ . ಅಜ್ಜಿಯು ಅವರಿವರ ಮನೆಯಲ್ಲಿ ಕೆಲಸ ಮಾಡಿ ಹತ್ತೋ , ಇಪ್ಪತ್ತೋ ರೂಪಾಯಿ ಮಗನಿಗೆ ಕೊಟ್ಟಿದ್ದೂ ಇದೆ .


ಮಾವನಿಗೆ ತಾಯಿಯ ಹಣ ಬೇಕಿತ್ತೆ ಹೊರತು, ತಾಯಿಯೊಂದಿಗೆ ಪ್ರೀತಿ , ವಿಶ್ವಾಸದಿಂದ ಮಾತನಾಡಿ ಗೊತ್ತಿರಲಿಲ್ಲ . ಅಣ್ಣ ತಮ್ಮ ಇಬ್ಬರೂ ತಾಯಿಯನ್ನು ‘ ಪಿರ್ಕಿ ‘ ಎಂದು ಮೊದಲಿಸುವುದು ಇತ್ತು . ಇದರಿಂದ ಬೇಸತ್ತು ಅಜ್ಜಿ , ನನಗೆ ಗಂಡು ಮಕ್ಕಳು ಇಲ್ಲದೆ ಇದ್ರೆ ಚೆನ್ನಾಗಿತ್ತು ಎನ್ನುತ್ತಿದ್ದಳು . ” ನಿನ್ನೆ ಇಲ್ಲಿಂದ ಬಂದವಳೇ ಸಾಗರಕ್ಕೆ ಯಾರದ್ದೋ ಸಂಬಂಧಿಕರ ಮದುವೆ ಅಂತ ಮಗಳು ಮೊಮ್ಮಕ್ಕಳನ್ನು ಕರ್ಕೊಂಡು ಹೋಗಿದ್ದಳಂತೆ . ಅಲ್ಲಿ ಜ್ವರ ಶುರುವಾಗಿ ಮಧ್ಯಾಹ್ನವೇ ವಾಪಸ್ಸು ಬಂದರಂತೆ. ರಾತ್ರಿ ಬಾಯಾರಿಕೆ ಅಂತ ನೀರು ಕುಡಿದು ಮಲಗಿದವಳು ಏಳಲೇ ಇಲ್ವಂತೆ.” ” ಆ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಯಾಕೆ ಮದುವೆಗೆ ಹೋಗಿದ್ದರು ? ” ತಂದೆಯವರೆಂದರು . ತಾಯಿಯ ಸುದ್ದಿ ಕೇಳಿ ಅಮ್ಮ ಅಡಿಗೆ ಮನೆಯಿಂದ ಬಂದಳು .


” ರಾಮಯ್ಯ , ನಿನಗೆ ಯಾರು ಹೇಳಿದ್ದು ಅಮ್ಮ ಸತ್ತು ಹೋಯಿತು ಅಂತ …? ” ” ರಾತ್ರೇನೇ ಪಕ್ಕದ ಮನೆ ಗೋಪಾಲನಿಗೆ ಸುಶೀಲ ಹೇಳಿದಳಂತೆ . ಅವನು ಬೆಳಿಗ್ಗೆ ಬಂದು ತಿಳಿಸಿದ . ” ತಂದೆಯ ತಾಯಿಯ ಕಡೆ ಅಜ್ಜನ ಪ್ರೀತಿಯನ್ನೇ ನಾವು ಮೊಮ್ಮಕ್ಕಳು ನೋಡಿರಲಿಲ್ಲ . ನಾವು ಹುಟ್ಟುವುದಕ್ಕೆ ಮುಂಚೆಯೇ ಅವರು ಸತ್ತು ಹೋಗಿದ್ದರು ಅಜ್ಜಿಯರ ಪ್ರೀತಿಯನ್ನು ಮಾತ್ರ ನಾವು ನೋಡಿದ್ದೆವು . ಅದರಲ್ಲೂ ಒಬ್ಬಳು ಹೋದಳೇ …? ಸತ್ತು ಹೋದ ಅಜ್ಜಿಗೆ ಆಸ್ತಿಯಾಗಿ ಒಂದು ಗೇರು ಮರ ಮನೆಯ ಮುಂದೆಯೂ , ಒಂದು ನುಗ್ಗೆ ಮರ ಮನೆಯ ಹಿಂದೆಯೂ ಇತ್ತು . ಅವು ಹಣ್ಣು , ಕಾಯಿ ಬಿಡುವಾಗ ಅಜ್ಜಿ , ಗೇರು ಹಣ್ಣನ್ನು , ನುಗ್ಗೆ ಕಾಯನ್ನು ಕಳ್ಳರು ಕದಿಯದಂತೆ ಕಾದುಕೊಂಡು ಇರುತ್ತಿದ್ದಳು .ಗೇರು ಹಣ್ಣಾಗುವಾಗ ಹಣ್ಣುಗಳನ್ನು ಮಡಿಲಲ್ಲಿ ತುಂಬಿಕೊಂಡು ನಮಗೆ , ಮೊಮ್ಮಕ್ಕಳಿಗೆ ತಂದು ಕೊಡುತ್ತಿದ್ದಳು . ಇನ್ನಾರು ನಮಗೆ ಅದನ್ನೆಲ್ಲಾ ತಂದು ಕೊಡುವವರು ? ಅಜ್ಜಿಯ ಗುಡಿಸಲು ಕತೆ ಏನು ? ಪ್ರತಿ ವರ್ಷವೂ ಅಜ್ಜಿ ಅವರಿವರ ಕೈಕಾಲು ಕಟ್ಟಿಕೊಂಡು ಗುಡಿಸಲು ಹೊದ್ದಿಸಿ ಬಂದೋಬಸ್ತ್ ಮಾಡಿಕೊಳ್ಳುತ್ತಿದ್ದಳು .ಗುಡಿಸಲು ಉದ್ದ ಅಗಲ ಇದ್ದುದು ಹತ್ತಡಿಯಷ್ಟೇ. ಅಜ್ಜಿ ಅಲ್ಲೇ ಅಡಿಗೆ ಮಾಡಿಕೊಂಡು ಮಲಗೇಲುತ್ತಿದ್ದಳು .


ಅವರಿವರ ಮನೆಯಲ್ಲಿ ಅಡಿಕೆ ಸುಲಿಯುವ ಕಾಯಕ ಮಾಡಿ ಕೈಯಲ್ಲಿ ನಾಲ್ಕು ಕಾಸು ಮಾಡಿಕೊಳ್ಳುತ್ತಿದ್ದಳು . ಮಾವ ಓದಿ ಕೆಲಸಕ್ಕೆ ಸೇರಿದ ಮೇಲೆ ತಾಯಿ ಅಡಿಕೆ ಸುಲಿಯುವುದಕ್ಕೆ ಹೋಗುವುದು ತನ್ನ ಮರ್ಯಾದೆಗೆ ಕಡಿಮೆ,ಜನ ನಗುತ್ತಾರೆಂದು ಅಕ್ಕ ಭಾವನಿಗೆ ಹೇಳಿಕೊಂಡು ಕಣ್ಣೀರು ಹಾಕಿದ್ದ . ತಂದೆಯವರು ಅಜ್ಜಿಗೆ ಇನ್ನು ಅಡಿಕೆ ಸುಳಿಯಲು ಅವರಿವರ ಮನೆಗೆ ಹೋಗ ಕೂಡದೆಂದು ತಾಕೀತು ಮಾಡಿದ್ದರು . ಅಜ್ಜಿಯ ಸಂಪಾದನೆಗೆ ಕಲ್ಲು ಬಿತ್ತು . ಅಜ್ಜಿಗೆ ದಾಯಾದಿಗಳ ಮನೆಯ ಕೆಲಸಗಳೇ ಗಟ್ಟಿಯಾಯಿತು.


 ‘” ಅಯ್ಯೋ , ಯಾರಿಂದ ಏನನ್ನೂ ಬಯಸದೆ ಸತ್ತಳಲ್ಲಪ್ಪ …” ಅಮ್ಮ ನರಳಿದಳು.” ಯಾಕೆ ಅಳತೀರಿ. ಸಂತೋಷಪಡಿ . ದೇವರು ಅವಳಿಗೆ ಸುಖ ಸಾವು ಕೊಟ್ಟಿದ್ದಾನೆ . ಅಂತ ಸಾವು ಎಲ್ಲರಿಗೂ ಬರುತ್ತದಾ …? “ರಾಮಯ್ಯ ಅಮ್ಮನಿಗೆ ಸಮಾಧಾನ ಹೇಳಿದ.” ನೀನು ಹೇಳೋದು ನಿಜ ರಾಮಯ್ಯ. ಏನಾದರೂ ಅವರು ನರಳುತ್ತಾ ಮಲಗಿದ್ದರೆ ಯಾರು ನೋಡುತ್ತಿದ್ದರು …? ಈ ಗಂಡು ಮಕ್ಕಳನ್ನು ನಂಬಲಿಕ್ಕೆ ಆಗುತ್ತದಾ ..?” ತಂದೆಯವರು ಎಂದರು. ರಾಮಯ್ಯ ನಕ್ಕ .


” ಸರಿ ನೀನು ಹೋಗು ರಾಮಯ್ಯ. ನಾವು ಹಿಂದಿನಿಂದ ಬರುತ್ತೇವೆ.” ರಾಮಯ್ಯ ಹೋದ. ಅಮ್ಮ ಅವನು ಹೋಗುವುದನ್ನೇ ಕಾಯುತ್ತಿದ್ದವಳಂತೆ ರೋಧಿಸ ಹತ್ತಿದಳು. ರಾಮಯ್ಯನನ್ನು ಕಳುಹಿಸಲಿಕ್ಕೆ ಹೊರಗೆ ಹೋದ ತಂದೆ ಬಂದರು್. ಹೊರಗೆ ಜಡಿ ಮಳೆ ಸುರಿಯುತ್ತಿತ್ತು . ” ಮಾಬ್ಲಾ ” ತಂದೆಯವರು ನನ್ನನ್ನು ಕರೆದರು. “ಆಂ …?” “ಎಚ್ಚರ ಇದೆಯೇನ ?” “ಹು” “ಎಲ್ಲ ಕೇಳಿಸಿಕೊಂಡಿದಿಯೇನೋ ?” “ಹೂಂ” “ಅಳಬೇಡ ಸುಮ್ಮನಿರು. ನಿನ್ನಮ್ಮನ್ನ ಕರಕೊಂಡು ಅಜ್ಜಿಮನೆಗೆ ನೀನು ಮುಂದೆ ಹೋಗು. ನಾನು ನಿನ್ನ ಅಣ್ನನ್ನ, ನಿನ್ನ ತಂಗೀನ ಕರಕೊಂಡು ಹಿಂದಿನಿಂದ ಬರತೀನಿ. ಸುಶೀಲ ಒಬ್ಬಳೇ ಮಕ್ಕಳನ್ನು ಕಟ್ಟಿಕೊಂಡು ರಾತ್ರಿಯಿಂದ ಹೆಣವನ್ನು ಕಾಯ್ತಾ ಕೂತಿದ್ದಾಳೆ. “ನಾನೆದ್ದು ಮುಖ ತೊಳೆದುಕೊಳ್ಳುವ ಹೊತ್ತಿಗೆ ತಂದೆ ಮತ್ತೊಂದು ಕೋಣೆಯಲ್ಲಿ ಮಲಗಿದ್ದ ಚಿಕ್ಕ ಮಾವನಿಗೆ ಸುದ್ದಿ ಮುಟ್ಟಿಸಿದರು .. ಮಾವ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಒಳಗೋಡಿ ಬಂದು ಅಕ್ಕನೆದುರಿಗೆ ನಿಂತು ಬೊಬ್ಬೆ ಹೊಡೆಯುತ್ತಿದ್ದ.


ತಾಯಿಯನ್ನು ಎಂದೂ ಪ್ರೀತಿಯಿಂದ ಮಾತನಾಡಿಸದವರಿಗೆ ಈ ರೀತಿಯ ದುಃಖ ಹೇಗೆ ಬರುತ್ತದೆ? ಈತ ವರ್ಷಕ್ಕೊಮ್ಮೆ ಎರಡುಮೂರು ತಿಂಗಳುಕಾಯಿಲೆಯಿಂದ ಮಲಗುತ್ತಿದ್ದ . ಅಕ್ಕ ಭಾವನೇ ತಂದೆ ತಾಯಿಯಂತೆ ಆರೈಕೆ ನಡೆಸುತ್ತಿದ್ದರು.. ಕಾಯಿಲೆ ಗುಣವಾದ ಕೂಡಲೇ ತಾಯಿಯನ್ನು ಶತ್ರುಗಳನ್ನು ನೋಡುವಂತೆ ನೋಡುತ್ತಿದ್ದ. ಅವನು ಕಾಯಿಲೆಯಲ್ಲಿ ಮಲಗಿದಾಗ ಅಣ್ಣ ಅತ್ತಿಗೆಯಿಂದ ಮೊಸಳೆ ಕಣ್ಣೀರಿನ ಕಾಗದ ಬರುತ್ತಿತ್ತೇ ಹೊರತು ಅವರೆಂದೂ ನೋಡಲು ಬಂದಿರಲಿಲ್ಲ. ವೈದ್ಯಕೀಯ ಖರ್ಚು ಕೊಟ್ಟವರಲ್ಲ.

“ಈಗ ಕಣ್ಣೀರು ಹಾಕಿದರೆ ಪ್ರಯೋಜನವಿಲ್ಲ. ಜನ ನಗಾಡಲಿಕ್ಕೆ ಏನು ಬೇಕೋ ಅಷ್ಟು ಮಾಡಿದಿರಿ. ಅವನಂತೂ ಮದುವೆಯಾದ ಮೇಲೆ ಕಾಗದ ಬರೆಯೋದೇ ನಿಲ್ಲಿಸಿಬಿಟ್ಟ. ಈಗ ಹೊರಡಿ. ನಾನು ಗೋವಿಂದನನ್ನು ಕರಕೊಂಡು ಬರಲಿಕ್ಕೆ ಶಿವಮೊಗ್ಗಕ್ಕೆ ಕಾರಿನ ವ್ಯವಸ್ಥೆ ಮಾಡಿ ಬರ್ತೇನೆ?” ತಂದೆಯವರೆಂದರು. ಜಡಿ ಮಳೆಯಲ್ಲಿ ಅಮ್ಮನನ್ನು ಕರೆದುಕೊಂಡು ಹೊರಟೆ.” ನಿನ್ನ ಮಾವನಿಗೆ ಅಕ್ಕ ಸತ್ತಿದ್ದು ಗೊತ್ತಿದೆಯೋ, ಇಲ್ಲವೋ.? ದಾರೀಲಿ ಹೋಗ್ತಾ ಅವರಿಗೆ ಹೇಳಿ ಹೋಗು” ತಂದೆಯವರು ಅಮ್ಮನಿಗೆ ಹೇಳಿದರು. “ಅವರಿಗೇನು ಹೇಳೋದು..?” ಅಮ್ಮ ರೇಗಿದಳು.

ಅಮ್ಮನನ್ನು ಒಬ್ಬ ಮುದುಕನಿಗೆ ಕೊಟ್ಟು ಮದುವೆ ಮಾಡಲು ಅವಳ ಸೋದರ ಮಾವ ಪ್ರಯತ್ನಿಸಿದ್ದರು. ಆ ಸಂಬಂಧವಾಗಿ ಅವನಿಗೂ ಮನಸ್ತಾಪವಾಗಿತ್ತು. ಆ ಕಾರಣಕ್ಕಾಗಿ ಅಮ್ಮ ಅವರ ಮನೆಗೆ ಹೋಗುತ್ತಿರಲಿಲ್ಲ. ಅವರ ಮಾವನೂ ನಮ್ಮ ಮನೆಗೆ ಬರುತ್ತಿರಲಿಲ್ಲ. ಹಬ್ಬ ಹುಣ್ಣಿಮೆಯಲ್ಲಿ ದೊಡ್ಡ ಮಾವ ಊರಿಗೆ ಬಂದಾಗ ಅವನನ್ನು ಊಟಕ್ಕೆ ಕರೆಯುತ್ತಿದ್ದರು. ನನ್ನ ಕಂಡರೆ ಅವರಿಗೆ ತುಂಬಾ ಪ್ರೀತಿ ಇದ್ದುದರಿಂದ ನಾನೂ ಮಾವನೊಂದಿಗೆ ಅವರ ಮನೆಗೆ ಹೋಗುತ್ತಿದ್ದೆ. “ಈ ಸಮಯದಲ್ಲಿ ಏನೂ ಮನಸ್ಸಲ್ಲಿ ಇಟ್ಟುಕೊಳ್ಳಬಾರದು” ತಂದೆಯವರು ಎಂದರು.

“ಅವರು ಅಪ್ಪಯ್ಯ ಸತ್ತಮೇಲೆ ನಮ್ಮ ತಂದೆ ತಾಯಿಯನ್ನು ಮನೆಯಿಂದ ಹೊರ ಹಾಕಿದ್ದರು. ನಾನು ಅದನ್ನು ಮರೆತಿಲ್ಲ ….” ಅಮ್ಮ ಮುನಿಸಿಕೊಂಡು ಹೇಳಿದಳು.” ಅದನ್ನೆಲ್ಲ ಮನಸ್ಸಲ್ಲಿ ಇಟ್ಟುಕೊಳ್ಳಬಾರದು ಅಂತ ಹೇಳಲಿಲ್ಲವಾ? ವಿಷ ಗಳಿಗೇಲಿ ಏನೇನೋ ನಡೆಯುತ್ತೆ. ಅದನ್ನೆಲ್ಲ ಮರೆತು ಬಿಡಬೇಕು. ನಾಕು ದಿನ ಬದುಕಲಿಕ್ಕೆ ಯಾಕೆ ದ್ವೇಷ ಅಸೂಯೆ …?” ತಂದೆ ರೇಗಿದರು.

ಅಜ್ಜಿ ಅವರ ತಂದೆಗೆ ಪ್ರೀತಿಯ ಮಗಳಾಗಿದ್ದಳು. ಆ ಕಾರಣಕ್ಕೆ ಅಜ್ಜಿಗೆ ಮದುವೆ ಮಾಡಿ ಹೊರಗೆ ಕಳುಹಿಸಲಿಕ್ಕೆ ಇಷ್ಟ ಪಡದೇ ಅವರು ಮಗಳು ಅಳಿಯನನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದರು. ಅಪ್ಪ ಸತ್ತ ಮೇಲೆ ಅಜ್ಜಿಯ ತಮ್ಮ ಅಕ್ಕ ಭಾವನನ್ನು ಹೊರಕ್ಕೆ ಹಾಕಿದ್ದರು. ಹೆಂಡತಿ, ಮಕ್ಕಳನ್ನು ಕಟ್ಟಿಕೊಂಡು ಅಜ್ಜ ಊರ ಹೊರಗೆ ಗುಡಿಸಲು ಹಾಕಿಕೊಂಡು ಅವರಿವರ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಅಮ್ಮ, ಅಜ್ಜ , ಮಕ್ಕಳನ್ನು ಸಾಕಲಿಕ್ಕೆ ಕಷ್ಟಪಟ್ಟುದುದನ್ನು ನಮಗೆ ಬಿಡುವಾದಾಗ ಹೇಳುತ್ತಿದ್ದಳು. ಅದರಿಂದಾಗಿ ನಮಗೆ ಮಕ್ಕಳಿಗೆ ಅಮ್ಮನ ಸೋದರ ಮಾವನ ಮೇಲೆ ದ್ವೇಷ ,ಅಸೂಯೆ ಬೆಳೆದಿತ್ತು. ಅವರನ್ನು ನಾವು ಅಜ್ಜ ಎಂದು ಕರೆಯುತ್ತಿದ್ದೆವು. ಅವರಿಗೆ ಮಕ್ಕಳಿರಲಿಲ್ಲ. ಗಂಡ ಹೆಂಡತಿ ಇಬ್ಬರೇ. ದೊಡ್ಡ ಮನೆಯಲ್ಲಿ ಹೆಂಡ ಕುಡಿದುಕೊಂಡು ಬದುಕಿ ಬಾಳುತ್ತಿದ್ದರು ..

ದೊಡ್ಡ ಮಾವ ಓದುವ ದಿನಗಳಲ್ಲಿ ಅವರು ಕರೆಯದಿದ್ದರೂ ಏನಾದರೂ ಸಹಾಯ ಮಾಡಬಹುದೇನೋ ಎಂಬಾಸೆಯಿಂದ ಅವರ ಮನೆಗೆ ಆಗಾಗ ಹೋಗುತ್ತಿದ್ದ. ಅಜ್ಜ ಅವನಿಗೆ ಐದೋ, ಹತ್ತೋ ರೂಪಾಯಿ ಕೊಡುತ್ತಿದ್ದರು. ಮಾವ ಕೆಲಸ ಸಿಕ್ಕಿದ ಮೇಲೆ ಅವರ ಮನೆ ಕಡೆ ಹೋಗುವುದನ್ನು ನಿಲ್ಲಿಸಿದ್ದ.

ನಾವು ಅಜ್ಜನ ಮನೆ ತಲುಪಿದೆವು. ಅಜ್ಜ ಜಗುಲಿಯಲ್ಲಿ ಶರಾಬಿನ ಬಾಟಲಿ ಇಟ್ಟುಕೊಂಡು ಕುಡಿಯುತ್ತಾ ಕೂತಿದ್ದರು. ನನ್ನನ್ನು ನೋಡಿದವರೇ, “ಏನೋ ಮಾಬ್ಲಾ?” ಎಂದರು ಅಮ್ಮ ಮನೆಯೊಳಕ್ಕೆ ಬಾರದೆ ಹೊರಗೆ ನಿಂತಿದ್ದಳು. “ಅಜ್ಜಿ ಸತ್ತೋಯಿತಂತೆ.” “ಏನು.?” ಅಜ್ಜ ಗಾಬರಿಯಿಂದ ಕೇಳಿದರು .. ” ಅಜ್ಜಿ ಸತ್ತೋಯಿತಂತೆ.” “ಯಾವಾಗ? ಎಲ್ಲಿ ?” ಮನೇಲಿ ಮಲಗಿದ್ದಲ್ಲೇ ಸತ್ತೋಯಿತಂತೆ. ಬೆಳಿಗ್ಗೆ ರಾಮಯ್ಯ ಬಂದು ನಮ್ಮ ಮನೆಗೆ ತಿಳಿಸಿದ.” “ಅಯ್ಯೋ ಶಿವನೇ, ಮೊನ್ನೆ ಇಲ್ಲಿಬಂದು ನನ್ನ ಹತ್ರ ಜಗಳ ಮಾಡಿಕೊಂಡು ಹೋಗಿದ್ದಳು. ಇನ್ನು ನಿನ್ನ ಮನೆ ಮೆಟ್ಲು ಹತ್ತೋದಿಲ್ಲಾಂತ ಹೇಳಿದ್ದಳು. ಹಾಗೇ ಆಯ್ತಲ್ಲಪ್ಪ…” ಅಜ್ಜ ದುಃಖದಿಂದ ನರಳಿದರು .


 ಅವರು ಸಟ್ಟನೆದ್ದು ಶರಾಬಿನ ಬಾಟಲಿಯನ್ನು ಬದಿಗಿಟ್ಟು ಹೆಂಡತಿಯನ್ನು ಕೂಗಿ ಕರೆದು ಅಕ್ಕ ಸತ್ತುದುದನ್ನು ಹೇಳಿದರು . ಅವರ ಹೆಂಡತಿಯು , ” ಅಯ್ಯೋ , ಮೊನ್ನೆ ತಮ್ಮನತ್ರಜಗಳ ಮಾಡಿಕೊಂಡು ಹೋಗಿದ್ದರಲ್ಲಪ್ಪ . ಅವರಿಗೇನಾಗಿತ್ತು …..? ” ಎಂದು ಬೊಬ್ಬೆ ಹೊಡೆದರು .ಅಜ್ಜನಿಗೂ , ಅಜ್ಜಿಗೂ ಅಷ್ಟಕ್ಕಷ್ಟೇ . ಆಗಾಗ ಏನಾದರೊಂದಕ್ಕೆ ಇಬ್ಬರಿಗೂಜಗಳವಾಗುತ್ತಿತ್ತು .ಅಜ್ಜಿಯ ಜಗಳವೇನಿದ್ದರೂ ತಾತ್ಕಾಲಿಕ . ನಾಲ್ಕು ದಿನಗಳ ನಂತರ ತಾನಾಗಿಯೇ ಅವರನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದಳು .


” ಶಾಲು ಮೇಲೆ ಬಾರೆ , ಅಲ್ಲೇ ನಿಂತೆಯಲ್ಲೇ ” ಅಜ್ಜಿ ಕರೆದರು . ” ಬೇಡ ಹೋಗೋಣ . ಅಲ್ಲಿ ಸುಶೀಲ ಒಬ್ಬಳೇ ರಾತ್ರಿಯಲ್ಲಾ ಹೆಣ ಕಾಯ್ಕೊಂಡು ಕೂತಿದ್ದಾಳೆ .” ” ಅವಳು ಅಲ್ಲಿಗೆಹೋಗಿದ್ದಾಳಾ ?” ” ನಿನ್ನೆ ಬೆಳಿಗ್ಗೆ ಅಮ್ಮ ಬಂದು ಕರಕೊಂಡು ಹೋಗಿದ್ಲು.” ” ಛೆ , ಒಬ್ಬಳೇ ಇದ್ದಾಳಾ ? ಎಷ್ಟು ಹೆದರಿಕೊಂಡಳೋ ಏನೋ ? ನಡೀರಿ ನಾವು ಬರ್ತೀವಿ . ” ಗಂಡಹೆಂಡತಿ ಬಾಗಿಲು ಎಳೆದುಕೊಂಡು ನಮ್ಮೊಂದಿಗೆ ಹೊರಟರು . ” ಗೋವಿಂದನ್ನ ಓದಿಸೋಕೆ ಕೈಯಲ್ಲಿದ್ದದ್ದು ಬಾಯಲ್ಲಿದ್ದದ್ದು ಕೊಟ್ಟಳು . ಬಡ್ಡಿ ಮಗ ದೊಡ್ಡ ಮನುಷ್ಯರ ಮನೆ ಹೆಣ್ಣು ತಂದುತಾಯಿಯನ್ನ ಸಾಕಾಲಿಲ್ಲ . ನಮ್ಮನ್ನೂ ಮರೆತುಬಿಟ್ಟ ….” ಅಜ್ಜ ತೊದಲುತ್ತಾ ಹೇಳಿದರು. ದೊಡ್ಡ ಮಾವನಿಗೆ ಕೆಲಸ ಸಿಕ್ಕ ಮೇಲೆ ತಾಯಿಯನ್ನು ಕರೆದುಕೊಂಡು ಹೋಗಿ ಸಾಕಬೇಕೆಂದುತಂದೆಯವರು ಅಮ್ಮನೂ ಕಿವಿಮಾತು ಹೇಳಿದ್ದರು . ತಾಯಿ ಅವರಿವರ ಮನೆಯಲ್ಲಿ ಇನ್ನೂ ಕೆಲಸ ಮಾಡಿಕೊಂಡು ಇರುವುದು ನೆಂಟರಿಷ್ಟರಿಂದ ಕೆಟ್ಟ ಮಾತು ಕೇಳುವಂತಾಗುವುದು ಎಂದುಹೇಳಿದರು . ಮಾವ ಒಪ್ಪಿಕೊಂಡನೇ ವಿನಃ ತಾಯಿಯನ್ನು ಕರೆದುಕೊಂಡು ಹೋಗಲಿಲ್ಲ . ಮಾವನಿಗೆ ಮದುವೆಯಾದ ಮೇಲೂ ಬಂಧುಗಳು , ಸ್ನೇಹಿತರು ಮತ್ತೆ ಅದೇ ಪ್ರಸ್ತಾಪವನ್ನು ಅವನಮುಂದಿಟ್ಟರು. ನಿರ್ವಾಹವಿಲ್ಲದೇ ಮಾವ ಒಪ್ಪಿಕೊಂಡನಾದರೂ ತಾನು ಕರೆದುಕೊಂಡು ಹೋಗಲಿಲ್ಲ . ತಮ್ಮನೊಂದಿಗೆ ತಾಯಿಯನ್ನು ಕಳುಹಿಸಿರಿ ಎಂದು ನಮ್ಮ ತಂದೆಗೆ ಕಾಗದ ಬರೆದ .


ತಂದೆಯವರು ನನ್ನನ್ನೂ ಅಜ್ಜಿಯೊಂದಿಗೆ ಕಳುಹಿಸಿದರು . ಅಜ್ಜಿ , ತನ್ನ ಆಸ್ತಿಯಾದ ಗುಡಿಸಲು , ಗೇರು ಮರ , ನುಗ್ಗೆ ಮರ ಬಿಟ್ಟು ಬರಲು ಇಷ್ಟ ಪಡದಿದ್ದರೂ ಕೊನೆಗೆ ಎಲ್ಲರಒತ್ತಾಯದಿಂದ ಹೊರಟಳು . ನಾವು ಮಾವನ ಶಿವಮೊಗ್ಗ ಮನೆಗೆ ಹೋದಾಗ ಮಧ್ಯಾಹ್ನ ಎರಡು ಗಂಟೆಯಾಗಿತ್ತು . ಮಾವನ ಹೆಂಡತಿ ಪ್ರೀತಿ ವಿಶ್ವಾಸದಿಂದ ಮಾತನಾಡಿ ಕುಡಿಯಲು ಕಾಫಿಕೊಟ್ಟಳು . ಅವಳು ಈಗ ಊಟಕ್ಕೆ ಹಾಕುತ್ತಾಳೆ , ಮತ್ತೊಂದು ಗಳಿಗೆಯಲ್ಲಿ ಊಟಕ್ಕೆ ಹಾಕುತ್ತಾಳೆಂದು ನಾವು ಕಾದೆವು , ಆದರೆ , ಅದರ ಸುದ್ದಿಯೇ ಇಲ್ಲ . ನಾನು ಹಸಿವೆಯಿಂದ ಕಂಗೆಟ್ಟಿದ್ದೆ. ಮಾವನ ಮನೆಗೆ ಬಸ್ಸಿನಲ್ಲಿ ಬಹಳ ದೂರ ಹೋಗುವುದೆಂದು ಸಂಭ್ರಮದಲ್ಲಿ ಬೆಳಿಗ್ಗೆ ಸರಿಯಾಗಿ ತಿಂಡಿ ತಿಂದಿರಲಿಲ್ಲ . ನನ್ನ ಕಷ್ಟವನ್ನ ಅರ್ಥ ಮಾಡಿಕೊಂಡ ಅಜ್ಜಿ ಸೊಸೆಗೆ ಕೇಳಿಯೇಬಿಟ್ಟಳು.

” ಸರೋಜ , ಅಡಿಗೆ ಮಾಡಲಿಲ್ಲವೇನೆ …? ಊಟದ ಸುದ್ದಿಯೇ ಇಲ್ಲವಲ್ಲ …” ” ನೀವು ಬರೋದು ಗೊತ್ತಿರಲಿಲ್ಲ .ಗೊತ್ತಿದ್ದರೆ ಅಡಿಗೆ ಮಾಡಿ ಇಡುತ್ತಿದ್ದೆ ….” ಸರೋಜಒಯ್ಯಾರದಿಂದ ಹೇಳಿದಳು . ” ಎಂಥಾ ಗೊತ್ತಿರಲಿಲ್ಲ ? ನನ್ನ ಅಳಿಯ ಕಾಗದ ಬರೀಲಿಲ್ಲವಾ ” ” ನನಗೆ ನಿಮ್ಮ ಮಗ ಹೇಳಿರಲಿಲ್ಲವಮ್ಮ .” ” ಅವನು ಹೇಳದಿದ್ದರೆ ಹೋಗಲಿ . ನಾವುಬಂದು ಎಷ್ಟೊತ್ತು ಆಯಿತು . ಹುಡುಗ ಹಸಿವಾಗಿ ಒದ್ದಾಡುತ್ತಿದ್ದಾನೆ . ಈಗಲಾದರೂ ಮಾಡಿ ಹಾಕಲಿಕ್ಕೆ ಏನು ತೊಂದರೆ ನಿನಗೆ ..? ” ” ಇಲ್ಲಿ ಕೆಲಸಕ್ಕೆ ಜನ ಇಲ್ಲಮ್ಮ ಬೇಕಾದಾಗ ಅಡಿಗೆಮಾಡಲಿಕ್ಕೆ .” ” ಏನೆಂದೆ ? ನನ್ನ ಮಗನಿಗೆ ತಿನ್ನಲಿಕ್ಕೆ ಗತಿ ಇಲ್ಲದಾಗ , ಓದೋಕೆ ಕಾಸು ಇಲ್ಲದಾಗ ನೀನು ಇದ್ದೆಯಾ …? ನಿನ್ನಪ್ಪ ಇದ್ದನಾ …? ? ಏನೇ ನೀನು ಮಾತಾಡೋದು ?” “ಹಾಗೆಲ್ಲ ಮಾತಾಡಬೇಡಿಯಮ್ಮ . ಅಷ್ಟೆಲ್ಲಾ ಇದ್ದವರು ನನ್ನನ್ನ ಯಾಕೆ ಮದುವೆಯಾದರು ನಿಮ್ಮ ಮಗ ..? ” ” ನೀನು ಇಂಥವಳು ಅಂತ ಗೊತ್ತಿರಲಿಲ್ಲ .” ಅತ್ತೆ ಸೊಸೆಗೆ ಮೊದಲ ದಿನವೇಸಮರ ನಡೆಯಿತು . ಅಜ್ಜಿ ಹುಚ್ಚೆದ್ದು ಕೂಗಿ ಸೊಸೆಯ ಅಪ್ಪನ ಆರ್ಥಿಕ ಸ್ಥಿತಿಯನ್ನು , ಮಗ ಮದುವೆಯಲ್ಲಿ ತನ್ನನ್ನು ಕರೆದುಕೊಂಡು ಹೋಗದೇ ಮಗಳ ಮನೆ ಕಾದುಕೊಂಡು ಇರುವುದಕ್ಕೆಬಿಟ್ಟು ಹೋದುದನ್ನು ಹೇಳಿ ಕೂಗಿ ಗಲಾಟೆ ಮಾಡಿದಳು .

ಅದುವರೆಗೂ ಸುಮ್ಮನಿದ್ದ ಚಿಕ್ಕ ಮಾವ ತಾಯಿಗೆ , ಸುಮ್ಮನೆ ಇರು . ಅಣ್ಣ ಅವರಿಗೆ ಹೇಳಿದ್ದರೆ ಅವರು ಅಡಿಗೆ ಮಾಡಿಡುತ್ತಿದ್ದರು . ನೀನು ಜಗಳಗಂಟಿ ” ಎಂದು ಅಜ್ಜಿಯ ಬಾಯಿಮುಚ್ಚಿಸಿದ . ಅತ್ತಿಗೆಯನ್ನ ಸಂತೃಪ್ತಿ ಗೊಳಿಸಲು ಅವನು ತಾಯಿಗೆ ಹೆದರಿಸಿದ್ದಷ್ಟೆ . ಮೊದಲ ಸುತ್ತಿನಲ್ಲಿ ಅಜ್ಜಿಗೆ ಜಯವಾಯಿತೆಂದೇ ಹೇಳಬೇಕು . ಅಜ್ಜಿಗೆ ಮಗನ ಮದುವೆಯಲ್ಲಿ ತನ್ನನ್ನುಕರೆದುಕೊಂಡು ಹೋಗಲಿಲ್ಲ ಎಂಬ ಕೊರಗಿತ್ತು . ಮದುವೆಯಲ್ಲಿ ಬೀಗರ ಕಡೆಯವರಿಗೆ ತಾಯಿ ಏನಾದರೂ ಮಾತನಾಡಿ ಗಲಾಟೆಯಾಗಬಹುದೇನೋ ಎಂದು ದೊಡ್ಡ ಮಾವ ತಾಯಿ ,ಮದುವೆಗೆ ಬರುವುದು ಬೇಡವೆಂದು ಅಕ್ಕ ಭಾವನಿಗೆ ಹೇಳಿದ್ದ . ಅಕ್ಕ ಭಾವ ಅವನ ಮಾತಿಗೆ ಒಪ್ಪಿಕೊಂಡಿದ್ದರು .

ಅಜ್ಜಿಗೆ ಇನ್ನೂ ಒಂದು ಕೊರಗಿತ್ತು . ದೊಡ್ಡ ಮಗ ಚಿಕ್ಕವನಿದ್ದಾಗ ಬುಡುಬುಡುಕೆ ದಾಸಯ್ಯನೊಬ್ಬ ಈ ಹುಡುಗನಿಗೆ ಉತ್ತಮ ಭವಿಷ್ಯವಿದೆ . ವಿದ್ಯಾವಂತನಾಗುತ್ತಾನೆ . ಕೈತುಂಬಾ ಸಂಬಳಸಿಗುವ ಅಧಿಕಾರ ಸಿಗುತ್ತದೆ . ಭಾರೀ ಮನೆ ಕಟ್ಟಿಸುತ್ತಾನೆ…” ಎಂದು ಶಾಸ್ತ್ರ ಹೇಳಿದ್ದ . ಅಜ್ಜಿಗೆ ಆಶ್ಚರ್ಯವೋ ಆಶ್ಚರ್ಯ .

ಬಡತನದಲ್ಲಿರುವ ತಾವು ಅವನನ್ನು ಓದಿಸಲಾಗುತ್ತದೆಯೇ ? ಅವನು ಅಷ್ಟೆಲ್ಲ ಸಾಧನೆ ಮಾಡುತ್ತಾನೆಂದು ಗೋಪಾಲ ಹೇಳಿದಂತಾದರೆ ಮಗನನ್ನು ಕರೆದುಕೊಂಡು ಬಂದು ಹರಕೆಒಪ್ಪಿಸುವುದಾಗಿ ಧರ್ಮಸ್ಥಳದ ದೇವರಿಗೆ ಹರಕೆ ಹೊತ್ತಿದ್ದಳು . ಗೋಪಾಲ ಹೇಳಿದ ಶಕುನವೇನೋ ನಿಜವಾಯಿತು . ಆದರೆ, ಮಗನನ್ನು ಕರೆದುಕೊಂಡು ಅಜ್ಜಿಗೆ ಹರಕೆ ತೀರಿಸಲುಧರ್ಮಸ್ಥಳಕ್ಕೆ ಹೋಗಲಾಗಲಿಲ್ಲ . ಮಾವ ಓದು ಮುಗಿಸಿ ಸರ್ಕಾರಿ ಕೆಲಸ ಸಿಕ್ಕ ಮೇಲೆ ಅಜ್ಜಿ , ಮಾವನಿಗೆ ಹರಕೆ ವಿಷಯ ಹೇಳಿದಾಗಲೆಲ್ಲಾ ಮಾವ ಈಗ ರಜೆ ಇಲ್ಲ . ಮುಂದೆ ನೋಡೋಣಎಂದು ಕಾಲ ದೂಡಿದ . ಮುಂದೊಂದು ದಿನ ಯಾರಿಗೂ ಗೊತ್ತಾಗದಂತೆ ಹೆಂಡತಿ ಮಕ್ಕಳನ್ನು ಅತ್ತೆಯನ್ನು ಕಟ್ಟಿಕೊಂಡು ಧರ್ಮಸ್ಥಳಕ್ಕೆ ಹೋಗಿ ಹರಕೆ ತೀರಿಸಿ ಬಂದ . ತನ್ನನ್ನು ಕರೆದುಕೊಂಡು ಹೋಗದಿದ್ದುದಕ್ಕೆ ಅಜ್ಜಿ ಸದಾ ಕಣ್ಣೀರು ಹಾಕುತ್ತಿದ್ದಳು .

ಸಂಜೆ ಆಫೀಸು ಮುಗಿಸಿಕೊಂಡು ಬಂದ ಮಾವ ತಾಯಿಯನ್ನು , ತಮ್ಮನನ್ನು ಮಾತನಾಡಿಸಲಿಲ್ಲ. ನನಗೆ ” ಯಾವಾಗ ಬಂದಿರಿ ? ಮಧ್ಯಾಹ್ನ ಎಲ್ಲಿ ಊಟ ಮಾಡಿದಿರಿ ? ” ಎಂದುಕೇಳಿದ . ನಾನು , ” ಮಧ್ಯಾಹ್ನ ಬಂದೆವು . ಇಲ್ಲಿ ಊಟ ಸಿಗುತ್ತೆ ಅಂತ ಬಂದೆವು . ಅತ್ತೆಯವರು ಊಟ ಹಾಕುತ್ತಾರೆ ಅಂತ ಕಾದೆವು . ಅವರು ಆ ಪ್ರಶ್ನೇನೆ ಎತ್ತಲಿಲ್ಲ …” ಎಂದೆ . ಅತ್ತೆಸೊಸೆಗೆ ನಡೆದ ಸಂಭಾಷಣೆಯನ್ನು ನಾನು ಹೇಳಲಿಲ್ಲ . ಅತ್ತೆ ಸೊಸೆಯರು ಆ ಪ್ರಶ್ನೆ ಎತ್ತಲಿಲ್ಲ . ಮಾವ ಹೆಂಡತಿಗೆ ” ಯಾಕೆ , ಅಡಿಗೆ ಮಾಡಿರಲಿಲ್ಲವೇ ? ” ಕೇಳಿದ . ” ನೀವೆಲ್ಲಿಹೇಳಿದ್ದೀರಿ ಅವರು ಬರ್ತಾರೆ ಅಂತ …?” ಎಂದು ಅತ್ತೆ ಕೇಳಿದಳು . ” ಯಾಕೆ , ನೀನು ಭಾವ ಬರೆದ ಕಾಗದವನ್ನು ಓದಿರಲಿಲ್ಲವಾ ?” ಕೇಳಿದ ಮಾವ . ಮಾವನ ಹೆಂಡತಿ ಮೌನವಾದಳು. ಅಲ್ಲಿಗೆ ಪ್ರಹಸನ ನಿಂತಿತು . ಹೆಚ್ಚೇನೂ ಗಲಾಟೆ ಆಗಲಿಲ್ಲ .

ರಾತ್ರಿ ದೊಡ್ಡ ಮಾವನಿಗೆ ಮೊದಲು ಊಟ ಬಡಿಸಲಾಯಿತು . ಆನಂತರ ಮಾವನ ಹೆಂಡತಿ ಊಟ ಮಾಡಿದಳು . ಅವಳದಾದ ಮೇಲೆ ಮಾವನ ಹೆಂಡತಿ ಗಂಡನಿಗೆ , ” ಅವರಿಗೆ ಊಟಮಾಡಲಿಕ್ಕೆ ಹೇಳಿ ” ಎಂದಳು . ಮಾವ ನಮಗೆ , ” ಹೋಗಿ ಊಟ ಮಾಡಿ ” ಎಂದ . ಮಾವನ ಮನೆಯ ವಿದ್ಯಮಾನ ನಮಗೆ ವಿಚಿತ್ರವಾಗಿ ಕಂಡಿತು . ಮಾವ ಓದುವ ದಿನಗಳಲ್ಲಿ ಅಣ್ಣತಮ್ಮಂದಿರನ್ನು ಹೊರಗೆ ಕೂರಿಸಿ ಎಂದೂ ನಾವು ಮೊದಲು ಊಟ ಮಾಡಿರಲಿಲ್ಲ . ಮಾವ ರಜೆಯಲ್ಲಿ ಮನೆಗೆ ಬಂದಾಗ ಮಧ್ಯಾಹ್ನ ನಾಲ್ಕು ಗಂಟೆಯಾಗುತ್ತಿತ್ತು . … ರಾತ್ರಿ ಹತ್ತುಗಂಟೆಯಾಗುತ್ತಿತ್ತು . ಅಡಿಗೆ ಮುಗಿದು ಹೋಗಿದ್ದರೂ ಅಮ್ಮ ಹೊಸದಾಗಿ ಅಡಿಗೆ ಮಾಡಿ ಅವನಿಗೆ ಬಡಿಸುತ್ತಿದ್ದಳು . ನಮಗೆ ಏಕೆ ಹೀಗಾಯಿತು …? ? ಎಂದು ನಾನು ಪ್ರಶ್ನೆ ಮಾಡಿಕೊಂಡೆ .





ಮರುದಿನ ಬೆಳಿಗ್ಗೆ ಚಿಕ್ಕ ಮಾವ ಊರಿಗೆ ಹೋದ . ಶಾಲೆಗೆ ರಜೆ ಇದ್ದುದರಿಂದ ನಾನು ಮಾವನ ಮನೆಯಲ್ಲೇ ಇದ್ದೆ . ಮುಂದಿನ ವಿದ್ಯಮಾನಗಳು ದುಃಖದ ವಿಷಯ . ಮಾವನ ಹೆಂಡತಿ ಬೆಳಿಗ್ಗೆ ಏಳುಗಂಟೆಯತನಕ ಏಳುತ್ತಿರಲಿಲ್ಲ . ಅಜ್ಜಿಯೇ ಎದ್ದು ಸ್ನಾನಕ್ಕೆ ನೀರು ಕಾಯಿಸಬೇಕು . ಮನೆ ಕಸ ಗುಡಿಸಬೇಕು . ಕಾಫಿ ತಿಂಡಿ ಮಾಡಬೇಕು . ಸೊಸೆಗೆ ಅದು ಸರಿಬರುತ್ತಿರಲಿಲ್ಲ . ” ಅದು ಮಾಡಿದ್ದು ಸರಿಯಾಗಲಿಲ್ಲ …. . ಇದು ಮಾಡಿದ್ದು ಸರಿಯಾಗಲಿಲ್ಲ ….” ಎಂದು ಗೊಣಗುತ್ತಿದ್ದಳು . ಅಜ್ಜಿ , ” ಅಷ್ಟು ಇದ್ದವಳು ನೀನೇ ಎದ್ದು ಮಾಡಬೇಕಿತ್ತು . ಮಹಾರಾಣಿಯ ಹಾಗೆ ಸೂರ್ಯ ಮೂಡೋತನಕ ಕಾಲು ಚಾಚಿಕೊಂಡು ಮಲಗಿರುತ್ತಿಯಲ್ಲ ” ಎಂದು ಸಿಡುಕುತ್ತಿದ್ದಳು . ” ನಿಮಗೆ ಯಾರು ಅದನ್ನೆಲ್ಲ ಮಾಡಲಿಕ್ಕೆ ಹೇಳಿದವರು ….? ಅಷ್ಟು ಅರ್ಜೆಂಟ್ ಏನಿತ್ತು ಎಲ್ಲ ಮಾಡಲಿಕ್ಕೆ ….? ” ಸೊಸೆ ರೇಗುತ್ತಿದ್ದಳು .ಇಬ್ಬರಿಗೂ ಜಗಳವಾಗುತ್ತಿತ್ತು . ಮಾವ ಎಲ್ಲಾ ಕೇಳಿಕೊಂಡು ಸುಮ್ಮನಿರುತ್ತಿದ್ದ . ಒಂದು ದಿನ ಇಬ್ಬರ ಜಗಳವೂ ತಾರಕಕ್ಕೇರಿತು . ಅಜ್ಜಿ ಮೌನಿಯಾಗಿ ಕೂತಿದ್ದ ಮಗನನ್ನು ತರಾಟೆಗೆ ತೆಗೆದುಕೊಂಡಳು . ” ಏನೋ ಅವಳು ಆ ಥರ ಮಾತನಾಡುತ್ತಾಳೆ . ಸುಮ್ಮನೆ ಕೂತಿರುವಿಯಲ್ಲ ….? ಒಂಬತ್ತು ತಿಂಗಳು ಹೊತ್ತು ಸಾಕಿದ್ದು ಇದಕ್ಕೇನೋ ?! ಕೈಯಲ್ಲಿದ್ದುದು ಕೊಟ್ಟು ಚೆನ್ನಾಗಿ ಓದಿಸಿದ್ದು ಇದಕ್ಕೆ ಏನೋ ..? ” ಎಂದಳು .


ಮಾವ , “ನೀನು ಏನೂ ಮಾಡ್ಬೇಡ . ಸುಮ್ಮನೆ ಇರೋದು ಕಲಿ . ” ಎಂದುಬಿಟ್ಟ . ಅಜ್ಜಿ ಹಳೆಯದೆಲ್ಲ ಎತ್ತಿ ಅವಾಚ್ಯವಾಗಿ ಬೈದು ಕೂಗಾಡಿದಳು . ಊಟ , ತಿಂಡಿ ಮಾಡದೆ ಉಪವಾಸ ಕೂತಳು .ಮಾವ ತಾಯಿಗೆ ಯಾಕೆ ಉಪವಾಸ ಕೂತೆ ಎಂದು ಕೇಳಲಿಲ್ಲ . ಹಸಿವಾದರೆ ಊಟಮಾಡುತ್ತಾಳೆ ಎಂಬ ನೀತಿಗೆ ಬದ್ಧನಾದ . ಸೊಸೆ ಅವಳ ತಂದೆಗೆ ಕಾಗದ ಬರೆದಲೇನೋ . ಅವಳಪ್ಪ ಅಣ್ಣ ತಮ್ಮಂದಿರು ಬಂದರು . ಅವರಿಗೆ ಅವಳು ಕಣ್ಣೀರು ಹಾಕಿಕೊಂಡು ಅತ್ತೆಯಿಂದ ತನಗಾಗುವ ಕಷ್ಟವನ್ನು ಹೇಳಿಕೊಂಡಳು .ಅವರು ಅಜ್ಜಿಯ ಮೇಲೆ ಹರಿಹಾಯ್ದರು . ಅಜ್ಜಿ ಒಬ್ಬಂಟಿಯಾಗಿ ಅವರೊಂದಿಗೆ ಹೋರಾಡಿದಳು . ಆ ಮನೆಗೆ ಬಂದಾಗ ಊಟ ಹಾಕದೇ ಇರುವುದರಿಂದ ಹಿಡಿದು ಎಲ್ಲವನ್ನೂ ಹೇಳಿ ಸೊಸೆಯ ನಡವಳಿಕೆಯನ್ನು ಹರಾಜು ಹಾಕಿದಳು . ಮನೆಯಲ್ಲಿ ಗಲಾಟೆ ನಡೆಯುವಾಗ ಮಾವ ಅಜ್ಜಿಯ ಬಾಯಿ ಒತ್ತಿ ಹಿಡಿದು , ಕಾರು ಶೆಡ್ಡಿಗೆ ದೂಡಿ ಬಾಗಿಲು ಹಾಕಿದ . ಇಲ್ಲಿಂದ ಅಜ್ಜಿಯ ಆರ್ಭಟ ಇಳಿಮುಖವಾಯಿತು .


ಅಜ್ಜಿ ಆನಂತರ ಒಂದು ಕೋಣೆಯಲ್ಲಿ ಸುಮ್ಮನೆ ಕೂತಿರುತ್ತಿದ್ದಳು .ಯಾರೊಡನೆಯೂ ಮಾತನಾಡುತ್ತಿರಲಿಲ್ಲ . ಯಾರೂ ಅವಳನ್ನು ಮಾತನಾಡಿಸುತ್ತಿರಲಿಲ್ಲ . ಮಗ ಸೊಸೆಯ ಊಟವಾದ ಮೇಲೆ ಕಸ ಗುಡಿಸುವುದು , ಪಾತ್ರೆ ತೊಳೆಯುವುದು , ಅವಳ ಪಾಲಿಗೆ ಬಂದ ಕೆಲಸವನ್ನು ಮಾಡಿಕೊಂಡಿರುತ್ತಿದಳು . ಸೊಸೆಯ ತವರು ಮನೆಯವರು ಬಂದಾಗ ಗಂಡನೆದುರಿಗೆ ಅತ್ತೆಯನ್ನು ವ್ಯಂಗ್ಯ , ಟೀಕೆ ಮಾಡುವುದನ್ನು ಕೇಳಿಸಿಕೊಂಡು ಕೂತಿರುತ್ತಿದ್ದಳು .

ಶಾಲೆಗೆ ರಜೆ ಮುಗಿದು ನಾನು ಊರಿಗೆ ಬಂದ ಮೇಲೆ ಅಜ್ಜಿಯೊಂದಿಗೆ ಮಾತನಾಡುವವರೇ ಇಲ್ಲವಾಯಿತು . ನಾನು ಊರಿಗೆ ಬಂದ ಮೇಲೆ ಅಜ್ಜಿ ಮಗನ ಮನೆಯಲ್ಲಿದ್ದುದು ಒಂದೇ ವಾರ . ಮಾವ ನಮ್ಮ ತಂದೆಗೆ ತಾಯಿಯ ಮೇಲೆ ಚಾಡಿಯ ಸರಮಾಲೆಯನ್ನೇ ಬರೆದು ತಾಯಿ ಮೂರು ದಿನದಿಂದ ಉಪವಾಸವಿದ್ದಾಳೆಂದು ತನ್ನನ್ನು ಊರಿಗೆ ಕಳುಹಿಸು ಎಂದು ಬೊಬ್ಬೆ ಹೊಡೆಯುತ್ತಾಳೆಂದು ದೂರಿದ . ಆಗಲೇ ನಾನು ತಂದೆಯವರಿಗೆ ಅಜ್ಜಿಯ ಕತೆ ಹೇಳಿದ್ದರಿಂದ ಅವರು ಮಾವನಿಗೆ ಉತ್ತರ ಬರೆಯಲು ಹೋಗಿರಲಿಲ್ಲ . ಚಿಕ್ಕ ಮಾವನನ್ನು ಕಳುಹಿಸಿ ಅಜ್ಜಿಯನ್ನು ಕರೆಸಿಕೊಂಡರು . ವಿಷಯ ಸರಿಯಾಗಿ ಇಳಿಯದ ಅಮ್ಮ ಚಿಕ್ಕ ಮಾವ ತಾಯಿಗೆ ಬೈದರು . ಅಜ್ಜಿ ಮಾತನಾಡದೇ ತನ್ನ ಗೂಡು ಸೇರಿ ಸ್ವತಂತ್ರಳಾದಳು.

ನಾವು ಅಜ್ಜಿ ಮನೆಯನ್ನು ಸೇರುವ ಹೊತ್ತಿಗೆ ಮಳೆ ಬಿಟ್ಟು ಎಳೆ ಬಿಸಿಲು ಹರಡಿಕೊಂಡಿತ್ತು . ಚಿಕ್ಕಮ್ಮನ ಮಗ ಅನಂತನಿಗೆ ಅಜ್ಜಿಯ ಸಾವಿನ ಬಿಸಿ ತಟ್ಟಿರಲಿಲ್ಲವಾದ್ದರಿಂದ ಅವನು ಮಳೆಯ ನೀರಿನಲ್ಲಿ ಆಟವಾಡುತ್ತಿದ್ದ . ಚಿಕ್ಕಮ್ಮ ಅಕ್ಕನನ್ನು ನೋಡಿದ ಕೂಡಲೇ , ” ಅಯ್ಯೋ ಅಕ್ಕ ಇದೇನು ಇಷ್ಟು ತಡವಾಗಿ ಬರ್ತಿದ್ದೀರಿ . ರಾತ್ರಿಯೆಲ್ಲಾ ಮಕ್ಕಳನ್ನು ಮಲಗಿಸಿಕೊಂಡು ಹೆಣ ಕಾಯ್ತಾ ಒಬ್ಬಳೇ ಕೂತೆ . ಚಿಮಣಿ ಎಣ್ಣೆ ಖರ್ಚಾಗಿ ದೀಪ ಬೇರೆ ಆರಿಹೋಗಿ ಕತ್ತಲೆಲ್ಲೆ ಕೂತನಲ್ಲೆ …” ಎಂದು ರೊದಿಸ ಹತ್ತಿದಳು . ” ನಮಗೆ ಗೊತ್ತಾಗಿದ್ದೇ ಬೆಳಿಗ್ಗೆ ರಾಮಯ್ಯ ಬಂದು ಹೇಳಿದ ಮೇಲೆ . ರಾತ್ರೇನೇ ಗೊತ್ತಾಗಿದ್ರೆ ಬರ್ತಿರಲಿಲ್ವೇನೆ …? ” ಎಂದು ಅಮ್ಮ ಅಜ್ಜಿಯನ್ನು ತಬ್ಬಿಕೊಂಡು ಗಳಗಳನೆ ಆಳಹತ್ತಿದಳು .

ಆಗಲೇ ಹತ್ತಾರು ಜನ ನೆಂಟರಿಷ್ಟರು ಅಲ್ಲಿ ಸೇರಿದರು . ಹತ್ತಿರ ಹೋಗಿ ಅಜ್ಜಿಯ ಮುಖ ನೋಡಿದೆ . ಅಜ್ಜಿಯ ಮುಖದಲ್ಲಿ ಮುಗುಳು ನಗು ಇತ್ತು . ಪ್ರೇತ ಕಳೆ ಇರಲಿಲ್ಲ . ಒಂದು ಕಾಲದಲ್ಲಿ ನನಗೆ ಪ್ರಿಯವಾಗಿದ್ದ ಅಜ್ಜಿಯ ಗೇರು ಮರ ಇಂದು ನನಗೆ ಯಮನಂತೆ ಕಂಡಿತು . ಮನೆ ಹಿಂದಿನ ನುಗ್ಗೆ ಮರ ಕಾಣಲಿಲ್ಲ . ಏಕೆ , ಏನಾಯಿತೆಂದು ಹಿತ್ತಲ ಕಡೆ ಹೋಗಿ ನೋಡಿದೆ ಗಾಳಿ ಮಳೆಗೆ ನುಗ್ಗೆಮರ ನೆಲಕ್ಕೆ ಅಡ್ಡ ಬಿದ್ದಿತ್ತು . ಹಿಂದುರಿಗಿ ಬಂದೆ. ಅಜ್ಜಿಯ ಶವ ಸಂಸ್ಕಾರಕ್ಕೆ ಬಿರುಸಿನಿಂದ ಓಡಾಡುತ್ತಿದ್ದರು .ಅಷ್ಟರಲ್ಲಿ ತಂದೆಯವರು ನನ್ನಣ್ಣ ತಂಗಿ ಚಿಕ್ಕ ಮಾವನೊಂದಿಗೆ ಬಂದರು . ದೂರದ ಊರಿಂದ ಅಜ್ಜಿಯ ತಂಗಿಯು ಬಂದಳು . ಮತ್ತೆ ರೋದನ ಶುರುವಾಯಿತು .

ಚಿಕ್ಕಜ್ಜಿ ಅಕ್ಕ ಜೀವನದಲ್ಲಿ ಕಷ್ಟ ಪಟ್ಟಿದ್ದನ್ನು ಹೇಳಿಕೊಂಡು ತಾನೂ ಅತ್ತಳಲ್ಲದೆ ಬೇರೆಯವರಿಗೂ ಕರಳು ಬಾಯಿಗೆ ಬರುವಂತೆ ಮಾಡಿದಳು .ಚಿಕ್ಕ ಮಾವನಂತೂ ಚಿಕ್ಕ ಮಕ್ಕಳಂತೆ ಆಳ ಹತ್ತಿದ .ಶವ ಸಂಸ್ಕಾರಕ್ಕೆ ಸಿದ್ಧತೆ ಮುಗಿಯುತ್ತಿದ್ದಂತೇ ದೊಡ್ಡ ಮಾವನ ಸವಾರಿ ಸ್ನೇಹಿತರೊಂದಿಗೆ ಬಂದಿಳಿಯಿತು . ಆತ ಕೂಡ ” ಅಯ್ಯೋ ಅಮ್ಮ ಹೋದಿಯೇನೆ ….” ಎಂದು ಗೋಡೆಗೆ ತಲೆ ಬಡಿದುಕೊಳ್ಳ ಹತ್ತಿದ . ನನಗೆ ಎಲ್ಲವೂ ಕೃತಕವಾಗಿ ಕಂಡಿತು . ” ನಿನ್ನ ಹೆಂಡತಿ ಬರಲಿಲ್ಲವೇನೋ ..? ” ಚಿಕ್ಕಜ್ಜಿ ಅಳುತ್ತಲೇ ಕೇಳಿದಳು . ” ಅವಳಿಗೆ ಹುಶಾರಿಲ್ಲ ” ಮಾವ ಬಿಕ್ಕುತ್ತಲೇ ಹೇಳಿದ . ” ಹುಶಾರಿಲ್ಲವೋ ..? ಅಥವಾ ಹೀಗೆ ಹೇಳಿ ಅಂತ ಹೆಳಿಕಳಿಸಿದಳೋ …? ದೊಡ್ಡ ಮನುಷ್ಯರ ಮನೆ ಹೆಣ್ಣು ತಂದರೆ ಹೀಗೇ ! ನೀನು ಹೆಂಡತಿ ಗುಲಾಮ . ಕಳ್ಳರಂಡೆನ ಮದುವೆ ಮಾಡಿಕೊಂಡು ಹೆತ್ತ ತಾಯಿಯನ್ನು ಮನೆಯಿಂದ ಓಡಿಸಿದವನಲ್ಲವಾ ನೀನು ..? ” ಅಜ್ಜ ರೇಗಿದರು .

” ಸುಮ್ಮನೆ ಇರಿ . ಈಗ ಅದೆಲ್ಲ ಯಾಕೆ ? ” ತಂದೆ ಅಂದರು . ಅಜ್ಜ ಸುಮ್ಮನಿರಲಿಲ್ಲ . ಮಾತು ಬೆಳೆಸಿದರು . ” ನಿನಗೆ ಅನ್ನ ಹಾಕೋ ಬದಲು ನಾಯಿಗೆ ಅನ್ನ ಹಾಕಿದ್ದರೆ ಬಾಲ ಅಲ್ಲಾಡಿಸಿಕೊಂಡು ಕೃತಜ್ಞತೆಯಿಂದ ಮನೆ ಕಾಯ್ಕೊಂಡು ಬಿದ್ದಿರುತ್ತಿತ್ತು . ಹೆಂಡತಿ ಪೈಕಿ ಯಾರ ಮದುವೆಯಾದರೂ ಅಲ್ಲಿಗೆ ನಿನಗೆ ಹೋಗಲಿಕ್ಕೆ ಆಗುತ್ತದೆ . ಕಷ್ಟ ಕಾಲದಲ್ಲಿ ಸಹಾಯ ಮಾಡಿದವರು , ಅನ್ನ ಹಾಕಿದವರನ್ನ ನೋಡಬೇಕು ಅನ್ನೋದಿಲ್ಲ ಅಲ್ಲವಾ ನಿನಗೆ …..?” ಮಾವ ಮಾತನಾಡಲಿಲ್ಲ . ಕಣ್ಣೀರು ಹಾಕುತ್ತಾ ನಿಂತಿದ್ದ . ಅವನು ಬೈಸಿಕೊಂಡಿದ್ದಕ್ಕೆ ಕಣ್ಣೀರು ಹಾಕುತ್ತಿದ್ದಾನೋ , ತಾಯಿ ಸತ್ತಿದ್ದಕ್ಕೆ ಕಣ್ಣೀರು ಹಾಕುತ್ತಿದ್ದಾನೋ ಎಂಬುದು ನನಗೆ ಅರ್ಥವಾಗಲಿಲ್ಲ . ಅಜ್ಜ ಅವನಿಗೆ ಇನ್ನಷ್ಟು ಉಗಿಯಲಿ ಎಂಬ ಮನಸ್ಸು ನನಗಿತ್ತು . ಅದೇಕೋ ಅಜ್ಜನ ಆರ್ಭಟ ಅಲ್ಲಿಗೇ ನಿಂತು ಹೋಯಿತು .

ಮಳೆಗೆ ಜಿಂಕ್ ಶೀಟ್ ಮಾಡು ಕಟ್ಟಿ ನೀರು ಬಿದ್ದು ಬೆಂಕಿ ಆರಿ ಹೋಗದಂತೆ ಅಜ್ಜಿಯ ಶವ ಸಂಸ್ಕಾರ ಮಾಡಿದರು . ಬಂದವರೆಲ್ಲ ಹೋದರು . ಚಿಕ್ಕಜ್ಜಿ ಮಾವ ನಮ್ಮೊಂದಿಗೆ ಮನೆಗೆ ಬಂದರು . ಮಾವ ಹಣ ಖರ್ಚು ಮಾಡಿ ತಾಯಿಯ ವೈಕುಂಠ ಸಮಾರಾಧನೆ ಮಾಡಿ ಕೈತೊಳೆದುಕೊಂಡ . ಅವನು ಹೋದ ಮೇಲೆ ಅವನ ಹೆಂಡತಿಯಿಂದ ನಮ್ಮ ತಂದೆಗೆ ಕಾಗದ ಬಂತು . ” ಅಯ್ಯೋ ಅತ್ತೆ ಕಾಲವಾದರಂತೆ . ನನಗೆ ಮೊನ್ನೆ ಗೊತ್ತಾಯಿತು . ನಾನು ಊರಲ್ಲಿ ಇರಲಿಲ್ಲ . ಇವರು ನನಗೆ ತಿಳಿಸಿದ್ದರೆ ನಾನು ಅಂತಿಮ ದರ್ಶನ ಮಾಡಿಕೊಳ್ಳುತ್ತಿದ್ದೆ . ಎಂಥಾ ಕೆಲಸ ಆಗಿಹೋಯಿತು . ಪರಮಾತ್ಮನು ಅವರ ಆತ್ಮಕ್ಕೆ ಶಾಂತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ” ಎಂದು ಬರೆದಿದ್ದಳು .

ಕಾಗದ ಓದಿ ನಾವೆಲ್ಲಾ ನಕ್ಕೆವು . ನಾನೂ ಒಂದು ಕಾಗದ ಅವಳಿಗೆ ಬರೆದೆ . ” ನೀನು ಅಜ್ಜಿಯನ್ನು ಗೋಳು ಹೊಯ್ದುಕೊಂಡು ಮನೆಯಿಂದ ಓಡಿಸಿದಾಗಲೇ ದೇವರು ಅವಳ ಆತ್ಮಕ್ಕೆ ಶಾಂತಿಯನ್ನು ಕೊಟ್ಟಿದ್ದಾನೆ . ನಿನ್ನ ಮೊಸಳೆ ಕಣ್ಣೀರು ಬೇಕಾಗಿಲ್ಲ ….” ಎಂದು . ತಂದೆಯವರು ” ಹಾಗೆಲ್ಲ ಬರೆಯಬಾರದು . ಅವರವರ ಪಾಪಕ್ಕೆ ಅವರವರೇ ಹಾಳಾಗುತ್ತಾರೆ ” ಎಂದು ನನ್ನನ್ನು ಆಕ್ಷೇಪಿಸಿದರು .




Rate this content
Log in

Similar kannada story from Inspirational