ಸಂತೆಯಲ್ಲೊಂದು ಸಂಭಾಷಣೆ.
ಸಂತೆಯಲ್ಲೊಂದು ಸಂಭಾಷಣೆ.
ನಮ್ಮೂರಲ್ಲಿ ಶನಿವಾರ ಸಂತೆ.ಗಳತಿಯರು ಸಿಕ್ಕಿದರಲ್ಲಿ ಅವರೆಂದರೆ , ಮಾತಿನ ಮಲ್ಲಿಯರು.ಮರೆವರು ಮಾತಿದ್ದರೆ ನಿಂತ ನೆಲೆಯನ್ನೇ.ಡುಮ್ಮಿಯರು ಆಕ್ರಮಿಸಿದರು ರಸ್ತೆ.ಪಾಪ ಪಾದಚಾರಿಗಳು ಸರಿದು ಅತ್ತ ಇತ್ತ ನಡೆಯುತ್ತಾ ತಿಳಿದಂತೆ ಚಿತ್ತ.
ಆಗ ರಾಧೆ ಹೇಳಿದಳು."ಗೊತ್ತೇನೇ ಲಕ್ಷ್ಮಮ್ಮನ ಮನೆ ವಿಷ್ಯಾ. "
ಮಿಟುಕಲಾಡಿ ಮೀನಾಕ್ಷಿ ಹೇಳಿದಳು.,"ಇಲ್ವಲ್ಲಾ ರಾಧಾ ಹೇಳೇ ಅದೇನ್ವಿಷ್ಯಾ "
"ಲಕ್ಷ್ಮಮ್ಮವ್ರ ಸೊಸೆ ರಾಗಿ ಹಲ್ವಾಂತ ಮಾಡೋಕ್ಹೋಗಿ ಸಾಸ್ವೆ ರುಬ್ಬಿ ಹಾಕಿದ್ಲಂತೆ ಕಣ್ರೇ"
"ಒಹೋಹೊ ಬಹಳಾ ಚೆನ್ನಾಗಿದೆ ತಿಂದವರು ಏನಾದ್ರೋ ಕಾಣೆ.ಸೇರ್ಕೊಂಡ್ರೆನೋ ನರ್ಸಿಂಗ್ ಹೋಂಗೆ? "
ಅಯ್ಯೋ ಇಲ್ಲಾ ಕಣ್ರೀ, ಅಷ್ಟರಲ್ಲೇ ಅವರ್ಮನೆ ಬೆಕ್ಕು ಬಾಯ್ಹಾಕಿ ರುಬ್ಬಿದ್ದ ಹಾಲಿನ ಪಾತ್ರೆನೇ ಬೀಳಿಸ್ಬಿಡ್ತಂತೆ.
ಅಯ್ಯೋ ದೇವ್ರೆ ಹಾಗಾದ್ರೆ ಲಕ್ಷ್ಮಮ್ಮಂಗೆ ಹೆಂಗೆ ತಿಳೀತಂತೆ ಅವರ ಸೊಸೆ ಮಾಡಿದ್ದು ಸಾಸ್ವೆ ಹಲ್ವಾಂತ,?
ಓ ಅದಾ ಪಕ್ಕದ ಮನೆ ಪದ್ಮಜ ಬಂದಿದ್ರಂತೆ ಸಾಸ್ವೆ ಸಾಲ ಕೇಳೋಕೇಂತ ಆಗ ಸಾಸ್ವೆ ಡಬ್ಬ ಖಾಲಿಯಿರೋದ್ನೋಡಿ ತಿಳೀತಂತೆ ಕಣ್ರೀ. ಅಹಹಾ ಹಾ ಬಹಳಾ ಚನ್ನಾಗಿದೆ.ಈ ಕಾಲದ ಹುಡುಗಿಯರು ಅಡುಗೆ ಮಾಡಿದ್ದಾರೆಂದ್ರೆ ಉಣ್ಣೊಕ್ಮುಂಚೆ ಲ್ಯಾಬಿಗೆ ಕಳಿಸಬೇಕು ಕಣ್ರೀ.
ಹೌದೌದು ನೀವನ್ನೋದು ನಿಜ ನಿಜ.
ಇಲ್ಕೇಳ್ರೀ ಮಜಾ ವಿಷ್ಯಾ ಏನ್ ಗೊತ್ತಾ..?ಸೀತಮ್ಮನೋರ ಸೊಸೆ ಅದೇ ಡಬಲ್ ಗ್ರಾಜುಯೇಟು, ಕಾರಲ್ಲಿ ಓಡಾಡ್ತಾಳಲ್ಲಾ ಅವಳು ನೆಲ ಒರೆಸೂಂದ್ರೆ ಮನೆತುಂಬಾ ನೀರು ಸುರೀತಾಳಂತೆ ಕಣ್ರೀ. ಕೇಳಿದ್ರೆ ಹೀಗೇ ಒರೆಸಬೇಕು .ಚೆನ್ನಾಗಿ ಕೊಳೆ ಹೋಗುತ್ತೇಂತ ಹೇಳ್ತಾಳಂತೆ.
ಅಯ್ಯೋ ಹೌದು ಕಣ್ರೀ ನಮ್ಮಪಕ್ಕದ ಮನೆವ್ರ ಸೊಸೇದೂ ಅದೇ ಕಥೆ.ಪಾಪ ಅವರತ್ತೆ ವಿಜಯಮ್ಮ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ಬಟ್ಟೆ ತೊಳೆದಿಡಮ್ಮಾಂದ್ರೆ.ಎಲ್ಲಾ ಬಟ್ಟೆ ಒಂದೇ ಬಕೆಟ್ಟಲ್ಹಾಕಿಟ್ಟು ಅವೆಲ್ಲಾ ಬಣ್ಣ ಬಿಟ್ಟು ಗಂಡು ಮಕ್ಕಳ ಬಿಳಿ ಶರ್ಟು ಟವಲ್ಲು ಪಂಚೆ,ಪ್ಯಾಂಟು ಎಲ್ಲಾ ಟೈ ಅಂಡ್ ಡೈ ಬಟ್ಟೆಥರಾ ಬಣ್ಣ ಅಂಟ್ಕೊಂಡು ಎಲ್ಲಾ ಗಂಟು ಸೇರಿದ್ವಂತೆ ಕಣ್ರೀ.
ಅಯ್ಯೋ ಪಾಪ ನಮ್ಮನೆ ಎದುರುಗಡೆ ಮನೇವ್ರದ್ದೂ ಅದೇ ಕಥೆ ನೋಡ್ರೀ.ಅದೇ ಶಾರದಮ್ಮನವರು ಮದುವೆ ಮನೆಗ್ಹೊದ್ರೂಂತ ಸೊಸೆ ಚಪಾತಿ ಮಾಡೋಕ್ಹೋಗಿ ದೋಸೆ ಹಿಟ್ಟಿನಂತೆ ಕಲಸಿಕೊಂಡಿದ್ದಳಂತೆ ಕಣ್ರೀ.ಆಮೇಲೆ ಚಪಾತೀನೇ ಬರ್ತಿಲ್ಲಾಂದ ಕಂಪ್ಲೆಮಟ್ ಮಾಡಿದ್ದಕ್ಕೆ ಆಕೆಯ ಗಂಡ ಹೊಟೆಲ್ನಿಂದಾ ದೋಸೆ ತಂದ್ಕೊಟ್ಟನಂತೆ.ಪರವಾಗಿಲ್ಲಾ ಅಂತೂ ದೋಸೆ ಸಿಕ್ತಲ್ಲಾ ಅದೇ ಮಜಾ. ನಮ್ಮನೆಲೂ ಸೊಸೆದು ಅದೇ ಕಥೆ ತಗೊಳ್ರಿ.ರೈತರ ಮನೆಹೆಣ್ಣೂಂತ ತಂದ್ವಿ.ಈಗ ನೋಡಿದ್ರೆ ಅವ್ಳಿಗೆ ಅಡುಗೆನೇ ಬರಲ್ಲಾ.ಮೊನ್ನೆ ಮುದ್ದೆ ಮಾಡ್ತೀನೀಂತ ನೀರಿಗೆ ಹಿಟ್ಹಾಕಿ ಹಸಿ ಹಿಟ್ಟಿನ ಉಂಡೆ ಬಡಿಸಿದ್ಲು ಕಣ್ರೀ.
ಅಯ್ಯೋ ಹೌದಾ.ಆಮೇಲೆ.
ಆಮೇಲೇನು ಅವತ್ತಿಂದ ಅಡುಗೆ ಕೆಲಸದಿಂದ ವಜಾ ಮಾಡ್ಬಿಟ್ಟೆ.ಅಷ್ಟೇ. ...ಸಿ ಎಂ ಸು.