ಭಾರತೀ...
ಭಾರತೀ...
ಭಾರತೀ..
ಬೆತ್ತಲಾದೆ ಏಕೆ?
ಮಣಿಪುರ ರಣ ತಂತ್ರದಾ
ಮಧ್ಯೆಯಲೀ..ಮತ್ತಮಲಿನಲೀ
ಸುಪುತ್ರರ ನಡುವೆಯೇ
ನಡು ಬೀದಿಯಲೀ..
ಬೆತ್ತಲಾದೆ ಏಕೆ?
ಭೂತದೊಳು ವೇದ
ಶಾಸ್ತ್ರ ಕಾವ್ಯದೊಳು
ಅಷ್ಟೊಂದು ಮಡಿಯುಟ್ಟ
ನಿನ್ನ ಮೂರು ವರ್ಣದಾ
ಸೀರೆ ಬಿಚ್ಚಿದವರ
ಧರ್ಮ ಯಾವುದು
ಅಮ್ಮಾ ಭಾರತೀ..II
ಜೀವಜಗತ್ತಿನೊಳು
ತಾಯಿಯಾಗಿದ್ದವಳನ್ನೇ
ಎಳೆದು ತಂದ ಪೌರುಷದ
ಪ್ರದರ್ಶಕನಾರು?
ವರ್ತಮಾನದ ಆ
ದುಶ್ಯಾಸನನಾರು?
ರಾಜಕೀಯದ್ಹವನಕೆ
ರಕ್ತದ ಸ್ವಾಹಗಳೆಷ್ಟು
ಮತ್ತಷ್ಟು ಕಲ್ಲುಕೋವಿಗಳ
ಹರಿತಗಳ ಬೆಲೆಯೆಷ್ಟು
ಕೆಂಪುಸಾಗರದಿ ಹೆಣಗಳೆಷ್ಟು
ಮತ್ತು ಹಣಗಳೆಷ್ಟು?
ಮಾಸಿಲ್ಲ ರಾಜಕೀವು
ವರ್ತಮಾನದರಸನಿಗೆ
ನಿನ್ನ ಬೆತ್ತಲಿನಲ್ಲಿಯೇ
ಶ್ರೇಷ್ಠತೆ ತಕ್ಕಡಿ ಇಟ್ಟು
ಕತ್ತಲ ತೂಕ ಮಾಡುತ್ತಾ
ನಕ್ಷತ್ರವಾಗುತ್ತಿದ್ದಾನೆ II
ಭೂತದ ಮಾದರಿ ಯಾರು
ಬೀಗ ಹಾಕಿಕೊಂಡವನಿಗೆ ?
ಬೆತ್ತಲೆಯಾರಾಧಕರ
ಧರುಮ ಯಾವುದು?
ಬದಲಾದರೇ ಭಾನುಮತಿ
ನಿರ್ಜರ ಮಂಡೋದರಿಯರು..?
ಅಮ್ಮಭಾರತೀ.....
ವಸ್ತ್ರಾಪಹರಣ ಮಾಡಿ
ಬೀದಿಯಲಿ ಬೆತ್ತಲಾಗಿಸಿ
ನಿನ್ನ ಕರುಳ ಹಿಸುಕಿದ
ದುಶ್ಯಾಸನರಿಗೆ ಜನ್ಮಕೊಟ್ಟ
ಮಹಾನ್ ತಾಯಿ ನೀನಲ್ಲವೇ?
ಹೇಳು ತಾಯಿ ಭಾರತೀ..
ಉಟ್ಟ ನಿನ್ನ ಸೀರೆ ಮೇಲೆ
ಪುತ್ರ ರಕುತ ಕಲೆಗಳೇ?
ಬೆತ್ತಲಾದ ಮೈಯ ಮೇಲೆ
ಪುತ್ರ ನಖರೇಖೆಗಳೇ?
ಎಂಥ ಘೋರ ಕೀರುತಿ?
ಆಜ್ಞಕನದು ಆವ ಧರ್ಮ?
ದುಶ್ಯಾಸನದಾವ ಧರ್ಮ?
ಬಲಿಯ ಹೆಣ್ಣಾವ ಧರ್ಮ?
ರಕುತಗಳಾವ ಧರ್ಮ?
ಸಹಿಸದಿರು ಭಾರತೀ
ಹೆಣ್ಣೇ ಒಂದು ಧರ್ಮ..