ಸೆಕೆಂಡ್ ಒಪಿನಿಯನ್…
ಸೆಕೆಂಡ್ ಒಪಿನಿಯನ್…
“ಈ ಮನೆಯಲಿ ರಂಗೋಲಿ ಅಳಿಸಲು ಮಗು ಬರುವ ಲಕ್ಷಣ ಕಾಣುತ್ತಿಲ್ಲ ಮಗನ ಮದುವೆಯಾಗಿ ಅದಾಗಲೇ ಎರಡು ವರ್ಷ ಕಳೆದಿದೆ. ನಮ್ಮ ವಂಶ ಇಲ್ಲಿಗೆ ಕೊನೆಯಾಗುತ್ತದೆ ಎಂದು ಕಾಣುತ್ತದೆ” ಎಂದು ಮುಂಜಾನೆ ಎದ್ದು ಹೊಸ್ತಿಲು ಬರೆಯುವಾಗ ಸಾವಿತ್ರಮ್ಮ ಗೊಣಗುತ್ತಲೇ ದಿನ ಆರಂಭಿಸಿದ್ದರು. ಪಕ್ಕದ ಅಡಿಗೆ ಮನೆಯಲ್ಲಿಯೇ ಕಾಫಿಗೆಂದು ಹಾಲು ಬಿಸಿಗಿಟ್ಟು ಬರುವ ಅಳುವನ್ನು ನುಂಗಿ ಏನನ್ನು ಮಾತನಾಡದೆ ಮೌನವಾಗಿ ಕಿಟಕಿಯಿಂದ ಆಚೆ ನೋಡುತ್ತಾ ನಿಂತವಳಿಗೆ ಹಾಲು ಉಕ್ಕುವುದು ಗಮನಕ್ಕೆ ಬರಲ್ಲಿಲ್ಲ..
” ಅಯ್ಯೋ ಅಯ್ಯೋ ನಿನಗೇನಾಗಿದೆ ಒಲೆ ಮುಂದೆ ಹಾಲಿಟ್ಟು ಕನಸು ಕಾಣುತ್ತಾ ನಿಂತಿದ್ದೀಯಲ್ಲ”ಎಂದು ಧ್ವನಿ ಏರಿಸುತ್ತಾ ಒಳಗೆ ಬಂದ ಸಾವಿತ್ರಮ್ಮ ಸ್ಟವ್ ಆರಿಸಿ, ಕಿರುಗಣ್ಣಿನಲ್ಲಿ ಸುರಭಿಯನ್ನು ನೋಡಿದರು “ಕ್ಷಮಿಸಿ ಅತ್ತೆ ಮೈಮರೆತು ಬಿಟ್ಟೆ”.
“ಮೈ ಮರ್ಯದೆ ಇನ್ನೇನು ಮಾಡುತ್ತಿ ? ದುಡಿಯುವವ ನನ್ನ ಮಗ ತಾನೆ.. ನಿನಗೇನು ಮನೆಯಲ್ಲಿ ಕುಳಿತು ತಿಂದರೆ ದಿನ ಕಳೆಯುತ್ತದೆ” ಎನ್ನುತ್ತಾ ಅಡುಗೆ ಮನೆಯಿಂದ ಆಚೆ ಬಂದರು ಸಾವಿತ್ರಮ್ಮ.
“ಸುರಭಿ ಟಿಫಿನ್ ರೆಡಿನಾ ಹೊತ್ತಾಯ್ತು ಆಫೀಸಿಗೆ” ಎನ್ನುತ್ತಾ ಬಂದ ಅಭಿರಾಮ್ ಡೈನಿಂಗ್ ಟೇಬಲ್ ಮುಂದೆ ಕುಳಿತು ಅಂದಿನ ದಿನ ಪತ್ರಿಕೆಯನ್ನು ಕೈಗೆತ್ತಿಕೊಂಡ..
“ಅಲ್ವೋ ಅಭಿ ಮುಂಚಿನ ಹಾಗೆ ಈಗಿಲ್ಲ.ವೈದ್ಯಕೀಯ ಲೋಕ ಬಹಳ ಮುಂದುವರೆದಿದೆ ನೀವೇಕೆ ಮಗುವಿನ ಬಗ್ಗೆ ಒಂದೊಳ್ಳೆ ವೈದ್ಯರ ಸಲಹೆಯನ್ನು ಪಡೆಯಬಾರದು”ಎನ್ನುತ್ತಾ ಡೈನಿಂಗ್ ಟೇಬಲ್ ಬಳಿ ಬಂದು ಕುಳಿತರು ಸಾವಿತ್ರಮ್ಮ..
“ಅಮ್ಮ ಎಷ್ಟು ಸತಿ ಹೇಳಿದೀನಿ ನಿನಗೆ ಬೆಳಗ್ಗೆ ಬೆಳಗ್ಗೆ ಈ ವಿಚಾರವಾಗಿ ರಗಳೆ ತೆಗಿಬೇಡ ಅಂತ ನಮಗೆ ಏನು ಅಂತ ವಯಸ್ಸಾಗಿಲ್ಲ ಆಗುವ ಕಾಲಕ್ಕೆ ಮಗುವಾಗುತ್ತದೆ.ವೈದ್ಯರ ಬಳಿ ಹೋಗುವಂತಹ ಸಮಸ್ಯೆ ಇಬ್ಬರಿಗೂ ಇಲ್ಲ.ದೇವರು ಕೃಪೆ ತೋರಿಸಬೇಕು ಅಷ್ಟೇ..ನಿನ್ನ ಸಮಾಧಾನಕ್ಕೆ ಎಂದು ಕಳೆದ ತಿಂಗಳು ವೈದ್ಯರನ್ನು ಭೇಟಿ ಮಾಡಿ ಬಂದಾಗಿದೆ..ಎಲ್ಲಾ ರಿಪೋರ್ಟ್ ನಾರ್ಮಲ್ ಅಂತ ತೋರಿಸಿದೆ.. ಆಗುವ ಕಾಲಕ್ಕೆ ಎಲ್ಲವೂ ಆಗುತ್ತದೆ”ಎನ್ನುತ್ತಾ ಪೇಪರ್ ಬದಿಗಿರಿಸಿ ಮಡದಿ ತಂದಿಟ್ಟ ತಿಂಡಿಯನ್ನು ಸವಿಯಲು ಆರಂಭಿಸಿದ.
“ಪ್ರತಿ ಬಾರಿ ನನ್ನ ಬಾಯಿಯನ್ನು ಮುಚ್ಚಿಸು.. ಮೊಮ್ಮಗವನ್ನು ನೋಡುವ ಹಂಬಲ ನನಗೆ. ಎಲ್ಲಿ ಮೊಮ್ಮಗವನ್ನು ನೋಡದೆ ಸಾಯುತ್ತೇನೆ ಎಂಬ ಚಿಂತೆ ನನ್ನನ್ನು ಕಿತ್ತು ತಿನ್ನುತ್ತಿದೆ.ನಿನಗೆಲ್ಲಿ ತಿಳಿಯಬೇಕು”ಎಂದು ಗೊಣಗುತ್ತಾ ಸಾವಿತ್ರಮ್ಮ ತಮ್ಮ ಕೋಣೆಗೆ ನಡೆದರು..
ಸುರಭಿ ಅಮ್ಮನ ಮಾತಿನಂತೆ ಅನೇಕ ದೇವರುಗಳಿಗೆ ಮಗುವಿಗಾಗಿ ಹರಕೆಯನ್ನು ಹೊತ್ತಿದ್ದಳು.. ಸುರಭಿಯ ಮೊರೆ ಅವಳ ಕಣ್ಣೀರು ಮದುವೆಯಾಗಿ ಆರು ವರುಷದ ನಂತರ ದೇವರಿಗೆ ಕೇಳಿಸಿತು.. ಮನೆಯಲ್ಲಿನ ಸಂತಸ ಸಂಭ್ರಮಕ್ಕೆ ಪಾರವೇ ಇರಲಿಲ್ಲ .ಸಾವಿತ್ರಮ್ಮನಂತು ಅಂತೂ ತನಗೆ ಮೊಮ್ಮಗು ನೋಡುವ ಭಾಗ್ಯವಿದೆಯಲ್ಲ ಎಂದು ಸಂತಸ ಪಟ್ಟರು..
ಮೂರು ತಿಂಗಳು ತುಂಬುತ್ತಿದ್ದಂತೆ ಡಾಕ್ಟರ್ ಹತ್ತಿರ ಸ್ಕ್ಯಾನಿಂಗ್ ಗೆ ಹೋದಾಗ ” ಮಗುವಿನ ಬೆಳವಣಿಗೆ ಅಷ್ಟು ಉತ್ತಮವಾಗಿಲ್ಲ..ಈ ಮಗುವನ್ನು ಉಳಿಸಿಕೊಳ್ಳುವ ಬದಲು ಮತ್ತೊಂದು ಮಗುವಿನ ನಿರೀಕ್ಷೆ ಮಾಡುವುದು ಒಳ್ಳೆಯದು ” ಎಂದಾಗ ಕುಟುಂಬದ ಪಾಲಿಗೆ ದೊಡ್ಡ ಆಘಾತವಾಗಿತ್ತು..ಸುರಭಿ ಮಂಕಾದಳು..ಅಭಿ ಸಂತೈಸುವ ಪರಿ ತಿಳಿಯದೆ ಕಂಗಾಲಾದ..ಆರು ವರುಷದ ನಂತರ ಮೂಡಿದ ಕುಡಿಯನ್ನು ಚಿವುಟಿ ಹಾಕಲು ಮನಸು ಒಪ್ಪಲಿಲ್ಲ.. ನಿರ್ಧಾರ ತಿಳಿಸುವುದಾಗಿ ಆಸ್ಪತ್ರೆಯಿಂದ ಹೊರಟು ಬಂದರು..
“ಇದ್ಯಾಕೋ ಇಷ್ಟು ಬೇಸರದಿಂದ ಬರುತ್ತಿದ್ದೀರಿ ಏನಾಯ್ತು?” ಎಂದು ಬಾಗಿಲಲ್ಲಿ ಕಾಯುತ್ತಿದ್ದ ಸಾವಿತ್ರಮ್ಮ ಆತಂಕದಿಂದ ಕೇಳಿದರು.”ಅಮ್ಮ ಏನು ಹೇಳಬೇಕು ತೋಚುತ್ತಿಲ್ಲ ಆದರೆ ನಾವು ಕಂಡ ಕನಸು ಆರಂಭದಲ್ಲೇ ನಂದಿ ಹೋಗುತ್ತಿದೆ. ಮಗುವನ್ನು ತೆಗೆಸಬೇಕು ಬೆಳವಣಿಗೆ ಇಲ್ಲ ಎನ್ನುತ್ತಿದ್ದಾರೆ ” ಎಂದು ಹೇಳಿ ಮುಗಿಸುವಷ್ಟರಲ್ಲಿ”ಅಯ್ಯೋ ದೇವರೇ ಇದೇಕೆ ಹೀಗೆ ಮಾಡಿದೆ..?ಕೊಟ್ಟು ಕಸಿದುಕೊಳ್ಳುವುದಕ್ಕಿಂತ ಕೊಡದಿದ್ದರೆ ವಾಸಿಯಾಗಿರುತ್ತಿತ್ತು” ಎಂದು ಅಳಲಾರಂಭಿಸಿದರು..
“ಅಮ್ಮ ಅಳಬೇಡ ಸಮಾಧಾನ ಮಾಡಿಕೋ ನಾಳೆ ಇನ್ನೊಂದು ವೈದ್ಯರ ಬಳಿ ಪರೀಕ್ಷೆ ಮಾಡಿಸಿ ನೋಡುತ್ತೇನೆ. ಯಾವುದಕ್ಕೂ ಸೆಕೆಂಡ್ ಒಪಿನಿಯನ್ ತುಂಬಾ ಮುಖ್ಯ ಆತುರದಲ್ಲಿ ನಿರ್ಧಾರ ಕೈಗೊಳ್ಳುವುದು ಬೇಡ ಸುರಭಿ ಆರಾಮಾಗಿ ರಿಲಾಕ್ಸ್ ಮಾಡು. ನಾವು ಯಾರನ್ನೂ ನೋಯಿಸಿದವರಲ್ಲ ದೇವರು ನಮ್ಮ ಕೈ ಬಿಡಲಾರನು” ಎಂದು ಸಮಾಧಾನ ಮಾಡಿ ತನ್ನ ಗೆಳೆಯರನ್ನು ಭೇಟಿಯಾಗಿ ವಿಷಯ ಹಂಚಿಕೊಳ್ಳಲು ನಿರ್ಧಾರ ಮಾಡಿದ.
ತನ್ನ ಗೆಳೆಯನ ಸಲಹೆಯಂತೆ ಅವನ ಪರಿಚಯಸ್ತ ಡಾಕ್ಟರ್ ಒಬ್ಬರನ್ನು ಭೇಟಿಯಾಗಿ ಪರೀಕ್ಷೆ ನಡೆಸಿದಾಗ ಅಂತಹ ಸಮಸ್ಯೆಗಳೇನು ಇಲ್ಲ . ಇಷ್ಟು ಬೇಗ ನಿರ್ಧಾರಕ್ಕೆ ಬರುವುದು ಕೊಂಚ ಕಷ್ಟ. ಆರಾಮಾಗಿರಿ ಎಂದು ಧೈರ್ಯ ಹೇಳಿ ಇನ್ನೆರಡು ತಿಂಗಳು ಬಿಟ್ಟು ಬರುವಂತೆ ತಿಳಿಸಿದರು.. ಎರಡು ತಿಂಗಳಗಳ ಕಾಲ ದಂಪತಿಗಳಿಬ್ಬರಿಗೂ ಮುಳ್ಳಿನ ಮೇಲೆ ಕುಳಿತಂತಹ ಅನುಭವ. ಸುರಭಿ ತನ್ನ ಭಾವನೆಯನ್ನು ಹಂಚಿಕೊಳ್ಳುತ್ತಿದ್ದಳು.ಆದರೆ ಅಭಿರಾಮ್ ಮನಸ್ಸಿನಲ್ಲಿಯೇ ಎಲ್ಲವನ್ನು ಇಟ್ಟುಕೊಂಡು ಸುರಭಿಗೆ ಧೈರ್ಯ ಹೇಳುತ್ತಿದ್ದ.ಸಾವಿತ್ರಮ್ಮನಂತು ದೇವರ ಜಪ ತಪಗಳಲ್ಲಿ ಮುಳುಗಿ ಮಗುವಿಗೆ ಏನೂ ತೊಂದರೆ ಆಗದಿರಲಿ ಎಂದು ಪೂಜೆ ಪುನಸ್ಕಾರ ಮಾಡುತ್ತಿದ್ದರು.
5ನೇ ತಿಂಗಳ ಸ್ಕ್ಯಾನಿಂಗ್ ಬಂದೆ ಬಿಟ್ಟಿತು. ಮುಂಜಾನೆ ಎದ್ದು ಆತಂಕದಲ್ಲಿ ಡಾಕ್ಟರ್ ಬಳಿ ತೆರಳಿ ಎಲ್ಲಾ ಪರೀಕ್ಷೆಗಳನ್ನು ಮಾಡಿಸಿ ರಿಪೋರ್ಟ್ ಗಾಗಿ ಕಾಯುತ್ತಾ ಕುಳಿತರು.. ಹೇಳಿಕೊಳ್ಳಲಾಗದ ಭಾವ ಹಂಚಿಕೊಳ್ಳಲಾಗದ ನೋವು ಇಬ್ಬರನ್ನು ಕಂಗಡಿಸುತ್ತಿತ್ತು.. ರಿಪೋರ್ಟ್ಗಳೆಲ್ಲ ಬಂದ ಕೂಡಲೇ ದಂಪತಿಗಳನ್ನು ಕರಸಲಾಯಿತು “ನಿಮ್ಮ ರಿಪೋರ್ಟ್ ಗಳು ನಾರ್ಮಲ್ ಆಗಿದೆ.ಮಗುವಿಗೆ ಯಾವುದೇ ತೊಂದರೆ ಇಲ್ಲ ಆರೋಗ್ಯವಾಗಿ ಬೆಳೆಯುತ್ತಿದೆ ಆದಷ್ಟು ಒತ್ತಡವನ್ನು ಕಡಿಮೆ ಮಾಡಿಕೊಂಡು ಪೌಷ್ಟಿಕ ಆಹಾರಗಳನ್ನು ತಿನ್ನಬೇಕು” ಎನ್ನುತ್ತಿದ್ದಂತೆ ಸುರಭಿಗೆ ಹೋದ ಜೀವ ಮರಳಿ ಬಂದಂತೆ ಭಾಸವಾಯಿತು.. ಸಂತಸದ ಕಣ್ಣೀರಿನ್ನು ತಡೆಯಲಾಗದೆ ಅಳಲಾರಂಭಿಸಿದಳು. ಮನದಲ್ಲಿ ದೇವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದಳು. ಅಭಿರಾಮ್ ಕೂಡ ಇದರಿಂದ ಹೊರತಾಗಿರಲಿಲ್ಲ ಸಾವಿತ್ರಮ್ಮನಂತು ತಾನು ಮಾಡಿದ ಪೂಜೆ ಪುನಸ್ಕಾರಗಳು ಫಲ ಕೊಟ್ಟಿತು ಎಂದು ಸಂತಸದಿಂದ ಕುಣಿಯುವುದು ಬಾಕಿ ಇತ್ತಷ್ಟೇ….
ಕೆಲವೊಮ್ಮೆ ಬದುಕಿನಲ್ಲಿ ನಿರ್ಧಾರವನ್ನು ಕೈಗೊಳ್ಳುವಾಗ ಎರಡು ಬಾರಿ ಯೋಚಿಸುವುದು ಮುಖ್ಯವಾಗಿರುತ್ತದೆ.. ಅದರಲ್ಲಿಯೂ ಆರೋಗ್ಯದ ವಿಚಾರ ಬಂದಾಗ “ಸೆಕೆಂಡ್ ಒಪಿನಿಯನ್” ತುಂಬಾ ಮುಖ್ಯವಾಗಿರುತ್ತದೆ….. ಒಂದೇ ಬಾರಿಗೆ ನಿರ್ಧರಿಸಿ ದುಡುಕಿನ ನಿರ್ಧಾರ ಕೈಗೊಂಡು ನಂತರ ಪಶ್ಚಾತಾಪದಲ್ಲಿ ಮುಳುಗುವುದಕ್ಕಿಂತ ಕೇಳಿದ ವಿಷಯವನ್ನು ಅಥವಾ ಬಂದ ಆಲೋಚನೆಗಳನ್ನು ಇನ್ನೊಬ್ಬರಲ್ಲಿ ಹಂಚಿಕೊಂಡು ಅಭಿಪ್ರಾಯವನ್ನು ತಿಳಿದು ಮುಂದುವರೆಯುವುದರಿಂದ ಆಗುವ ಅನಾಹುತವನ್ನು ತಪ್ಪಿಸುವುದರ ಜೊತೆಗೆ ಮಾನಸಿಕ ಸ್ವಾಸ್ಥ್ಯವನ್ನು ಕಾಯ್ದುಕೊಳ್ಳಬಹುದು… ಏನಂತೀರಾ…?