ವಿಧಿಯ ಆಟ ಕಲಿಸಿತು ಪಾಠ...ಭಾಗ 1
ವಿಧಿಯ ಆಟ ಕಲಿಸಿತು ಪಾಠ...ಭಾಗ 1
ಬದುಕಿನುದ್ದಕ್ಕೂ ಒಂದಲ್ಲಾ ಒಂದು ರೀತಿಯಲ್ಲಿ ಪರೀಕ್ಷೆಗಳನ್ನು ಎದುರಿಸುತ್ತಾ ಜೀವನ ಸಾಗಿಸುತ್ತೇವೆ..ಎಲ್ಲವು ದೈವ ನಿಶ್ಚಿತ..ಬದುಕು ಬಂದಂತೆ ಸ್ವೀಕರಿಸಿ ಧೈರ್ಯದಿಂದ ಮುನ್ನಡೆದು ಜೀವನವನ್ನು ನೋವಿನ ನಡುವೆ ಹಸನಾಗಿಸಲು ಹೋರಾಡಿ ಗೆದ್ದವಳ ಕಥೆಯಿದು..ಇದು ಕಾಲ್ಪನಿಕವಲ್ಲ..ಸತ್ಯ ಕಥೆ...ಮುಂದಿನದು ಕಥಾನಾಯಕಿ ಹೇಳುತ್ತಾಳೆ..ಮುಂದೆ ಓದಿ...
...........................
ಹಚ್ಚ ಹಸಿರಿನಿಂದ ತುಂಬಿದ ಮಲೆನಾಡಿನ ಚಿಕ್ಕ ಗ್ರಾಮದಲ್ಲಿ ಜನಿಸಿದವಳು ನಾನು.. ನಾನು ಹುಟ್ಟಿದ ಇಸವಿ ನೆನಪಿಲ್ಲ..ಆದರೆ ಇನ್ನು ಸ್ವಾತಂತ್ರ್ಯ ಬಂದಿರಲ್ಲಿಲ್ಲ..ಓ..ನನ್ನ ಹೆಸರು ಹೇಳಲು ಮರೆತೆ..ನನ್ನ ಹೆಸರು ಗೌರಿ...ಅಪ್ಪ ಅಮ್ಮ ಇಬ್ಬರೂ ಅಕ್ಕ ಒಬ್ಬ ತಮ್ಮನಿದ್ದ ಮುದ್ದಾದ ಕುಟುಂಬ ನನ್ನದು..ನನ್ನ ಬದುಕು ಎಲ್ಲರಂತೆ ಇರಲ್ಲಿಲ್ಲ..ನನ್ನ ಬದುಕಿನ ಹಾದಿಯನ್ನು ಹೇಳುವೆ... ಓದುತ್ತಾ ಹೋಗುತ್ತೀರ ಅಲ್ವಾ...?
ಪುಟ್ಟ ಕುಟುಂಬ.. ಸ್ವಲ್ಪ ತೋಟ ಗದ್ದೆ ಇದ್ದ ಕಾರಣ ಉಣ್ಣಲು ತಿನ್ನಲು ಕೊರತೆ ಇರಲಿಲ್ಲ.. ಆಗೆಲ್ಲಾ ಗುರುಕುಲ ಪದ್ಧತಿ ಇತ್ತು..ಆದರೆ ಮನೆಯಿಂದ ದೂರ ಕಳಿಸಲು ಅಪ್ಪಯ್ಯನಿಗೆ ಇಷ್ಟವಿರಲಿಲ್ಲ..ಆಗೆಲ್ಲಾ ಮನೆಗೆ ಬಂದು ಅಕ್ಷರ ಹೇಳಿ ಕೊಡುತ್ತಿದ್ದರು. ಜೋಯಿಷ್ಯರು ಊರು ಊರು ತಿರುಗುತ್ತಾ ಮನೆ ಮನೆಗೆ ಬಂದು ತಿಂಗಳು ಎರಡು ತಿಂಗಳು ನಿಂತು ಪಾಠ ಹೇಳಿಕೊಡುತ್ತಿದ್ದರು.. ಜೋಯಿಷ್ಯರೊಬ್ಬರು ನಿತ್ಯ ಮನೆಗೆ ಬಂದು ಹಾಡು ಶ್ಲೋಕಗಳನ್ನು ಅಕ್ಕಂದಿರಿಗೆ ಹೇಳಿ ಕೊಡಲು ಬರುತ್ತಿದ್ದರು..ನಾನು ತೊದಲು ಮಾತನಾಡುವ ಮಗುವಾಗಿದ್ದೆ..ತಮ್ಮ ತೊಟ್ಟಿಲಲ್ಲಿ ಮಲಗುವ ಹಸುಗೂಸು..
ದೊಡ್ಡ ಅಕ್ಕನಿಗೆ ಒಳ್ಳೆಯ ಸಂಬಂಧ ಬಂತೆಂದು ಮದುವೆ ಮಾಡಿದರು..ನನ್ನೊಂದಿಗೆ ಆಟವಾಡುತ್ತಿದ್ದ ಅಕ್ಕ ಮದುವೆಯ ನಂತರ ಮನೆಯಲ್ಲಿ ಇಲ್ಲದನ್ನು ನೋಡಿ ಅಕ್ಕ ಬೇಕೆಂದು ಅಳುತ್ತಿದ್ದವಳನ್ನು ಅಮ್ಮಾ ಸಣ್ಣಕ್ಕ ಸಮಾಧಾನ ಮಾಡುತ್ತಿದ್ದರಂತೆ..ದೊಡ್ಡಕ್ಕನ ಮದುವೆಯಾಗಿ ಎರಡು ವರುಷ ಕಳೆಯುತ್ತಿದ್ದಂತೆ ಸಣ್ಣಕ್ಕನ ಮದುವೆಯೂ ನಿಶ್ಚಯವಾಯಿತು..ನನಗಾಗ 6 ವರುಷ ಅಕ್ಕನಿಗೆ 7 ವರುಷ.. ಬಾಲ್ಯವಿವಾಹ ನಡೆಯುತ್ತಿದ್ದ ಕಾಲವದು..ಸುಂಕದ ವಸೂಲಿಗೆಂದು ಬ್ರಿಟಿಷ್ ಅಧಿಕಾರಿಗಳು ಚಿಕ್ಕ ಚಡ್ಡಿ ಪೇದೆಗಳನ್ನು ಮನೆಗೆ ಕಳುಹಿಸಿ ಬೆಳೆದಿದ್ದ ದವಸ ಧಾನ್ಯಗಳನ್ನು ಕೊಂಡೊಯುತ್ತಿದ್ದರು..ಅವರು ಬರುತ್ತಾರೆ ಎಂಬ ಸುಳಿವು ಸಿಗುತ್ತಿದ್ದಂತೆ ಬೆಳೆದ ಆಹಾರ ಧಾನ್ಯಗಳನ್ನ ಎರಡು ಪಾಲು ಮಾಡಿ ಗೊಬ್ಬರದ ಗುಂಡಿಯ ಬಳಿ ಇನ್ನೊಂದು ಗುಂಡಿ ತೆಗೆದು ಅಪ್ಪಯ್ಯ ಮುಚ್ಚಿಡುತ್ತಿದ್ದರು..ಬಂದ ಪೇದೆಗಳು ಮನೆಯ ಮಾಳೆಗೆಯನ್ನೆಲ್ಲಾ ಹುಡುಕಿ ಎದುರಿಗಿರುವಷ್ಟು ಧಾನ್ಯಗಳನ್ನು ಮೂಟೆ ಕಟ್ಟಿ ಆಳುಗಳೊಂದಿಗೆ ಹೊರೆಸಿ ಕಳುಹಿಸುತ್ತಿದ್ದರು..ಅಪ್ಪಯ್ಯ ಅಮ್ಮನ ಬಳಿ ಮಕ್ಕಳನ್ನು ಎದುರು ಬಾರದಂತೆ ನೋಡಿಕೊಳ್ಳುವಂತೆ ಹೇಳುತ್ತಿದ್ದರು..ಆಗೆಲ್ಲಾ ನಾವ್ಯಾಕೆ ಕಷ್ಟ ಪಟ್ಟು ಬೆಳೆದಿದ್ದು ಅವರಿಗೆ ಕೊಡಬೇಕು ಎಂಬ ಯೋಚನೆ ಕಾಡುತ್ತಿತ್ತು...ಆದರೆ ಆ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಜೊತೆಗೆ ಹಾಗೆಲ್ಲಾ ಕೇಳಬಾರದು ಎಂದು ಅಪ್ಪಯ್ಯ ಬೈಯುತ್ತಿದ್ದರು..ಮನಸಿಗೆ ಅನಿಸಿದ್ದು ಮಾತನಾಡುವಂತಿರಲ್ಲಿಲ್ಲ.. ಸುಮ್ಮನೆ ಆಟವಾಡುತ್ತಾ ಕಲಿಸಿದ ಹಾಡುಗಳನ್ನು ಗುನುಗುತ್ತಾ ಕಾಲಕಳೆಯುತ್ತಿದ್ದೆ..
ದೊಡ್ಡ ಅಕ್ಕನನ್ನು ಮದುವೆಯಾದ ಆರೇಳು ತಿಂಗಳಲ್ಲಿ ಗಂಡನ ಮನೆಗೆ ಕಳುಹಿಸಿದ್ದರು..ಸಣ್ಣಕ್ಕ ಮದುವೆಯಾದರು ನಮ್ಮ ಜೊತೆಯಲ್ಲಿಯೇ ಇದ್ದಳು..ನನಗೆ ಏನು ಅರ್ಥವಾಗುತ್ತಿರಲ್ಲಿಲ್ಲ...ಅಕ್ಕ ನನ್ನೊಂದಿಗೆ ಆಟವಾಡಲು ಇದ್ದಾಳೆ ಎಂದು ಖುಷಿಪಡುತ್ತಿದ್ದೆ..ಅಮ್ಮ ಮನೆಯಲ್ಲಿ ಇದ್ದಾಗ ಅಕ್ಕನನ್ನು ಆಟವಾಡಲು ಬಿಡುತ್ತಿರಲ್ಲಿಲ್ಲ..ಅಡಿಗೆ ಮಾಡಲು ಕಲಿಯುವಂತೆ ಅಥವಾ ಏನಾದರೂ ಕೆಲಸ ಮಾಡುವಂತೆ ಬೈಯುತ್ತಿದ್ದರು..ಅಕ್ಕ ಹೇಳಿದ್ದು ಕೇಳಲ್ಲಿಲ್ಲವಾದರೆ "ನಾಳೆ ಗಂಡನ ಮನೆಯಲ್ಲಿ ಏನು ಕೆಲಸ ಕಲಿಸಿಲ್ವ ನಿನ್ನ ಅಮ್ಮ "ಅಂತ ನನಗೆ ಅನ್ನುತ್ತಾರೆ ಎನ್ನುವಾಗ "ಓ ಹಾಗಾದರೆ ಈ ಅಕ್ಕನು ಗಂಡನ ಮನೆಗೆ ಹೋಗಬೇಕಾ.." ಎಂದು ಯೋಚಿಸುತ್ತಿದ್ದೆ..ಅಮ್ಮ ಗದ್ದೆ ಕೆಲಸಕ್ಕೆ ಹೋದಾಗ ನಾನು ಅಕ್ಕ ಮತ್ತೆ ತಮ್ಮ ಆಟವಾಡುತ್ತಿದ್ದೆವು..ಅಮ್ಮ ಬರುವ ವೇಳೆಗೆ ಅಕ್ಕ ಅಡುಗೆ ಮನೆ ಸೇರುತ್ತಿದ್ದಳು..
ಅಪ್ಪಯ್ಯನಿಗೆ ಮೂವರು ಹೆಣ್ಣು ಮಕ್ಕಳಲ್ಲಿ ನನ್ನ ಕಂಡರೆ ಸ್ವಲ್ಪ ಜಾಸ್ತಿ ಪ್ರೀತಿ..ಒಂದು ಮಧ್ಯಾಹ್ನ ಅಪ್ಪಯ್ಯ ಊಟ ಮುಗಿಸಿ ಮಲಗಿದ ಹೊತ್ತಲ್ಲಿ ಸಣ್ಣಕ್ಕ ಅಳುವುದು ಕೇಳಿಸಿ ಧಾವಿಸಿದರು.. ಅಮ್ಮನನ್ನು ಏನಾಯ್ತು ಎಂದು ಕೇಳಿದಾಗ "ಮೈನೆರೆದಿದ್ದಾಳೆ"ಎಂದ ಅಮ್ಮನ ಮಾತು ನನಗೆ ಅರ್ಥವಾಗಲ್ಲಿಲ್ಲ..ಆದರೆ ಅಕ್ಕನನ್ನು ದನದ ಕೊಟ್ಟಿಗೆಯ ಬಳಿ ಗೋಣಿ ಹಾಕಿ ಮಲಗುವಂತೆ ಹೇಳಿದ್ದರು..ಮೂರು ದಿವಸ ಅಕ್ಕನನ್ನು ಮುಟ್ಟುವಂತಿಲ್ಲ ಎಂದು ನನಗೆ ಹಾಗು ತಮ್ಮನಿಗೆ ಗದರಿ ಹೇಳಿದ್ದರು..ಅಕ್ಕ ಗೋಣಿಯ ಮೇಲೆ ಹೊಟ್ಟೆಯನ್ನು ಬಿಗಿಯಾಗಿ ಹಿಡಿದುಕೊಂಡ ಮಲಗಿ ಅಳುತ್ತಿದ್ದ ಕಾರಣ ತಿಳಿಯಲ್ಲಿಲ್ಲ..ಆದರೆ ಅಕ್ಕನ ಅಳು ನಮಗೂ ಅಳು ತರಿಸಿತು..ದೊಡ್ಡ ಅಕ್ಕ ಕೂಡ ಹೀಗೆ ಕೊಟ್ಟಿಗೆಯ ಬಳಿ ಮುಲುಗುತ್ತಿದ್ದಳು..ಕೇಳಿದಾಗ ಕಾಗೆ ಮುಟ್ಟಿದೆ ದೂರ ಹೋಗು ಎನ್ನುತ್ತಿದ್ದಳು..ಆದರೆ ಸಣ್ಣ ಅಕ್ಕನ ರೀತಿ ಅಳುವುದನ್ನು ನೋಡಿರಲ್ಲಿಲ್ಲ..ಮೂರು ದಿವಸದ ನಂತರ ಸ್ನಾನ ಮಾಡಿಸಿ ಆರತಿ ಮಾಡಿ ಮನೆಯ ಒಳಗೆ ಬರಲು ಹೇಳಿ ಬಗೆ ಬಗೆಯ ಸಿಹಿ ತಿಂಡಿಗಳನ್ನು ಕೊಟ್ಟು ಉಪಚರಿಸಿ ಒಂದು ವಾರದಲ್ಲಿ ಗಂಡನ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿ ಬೀಳ್ಕೊಟ್ಟರು..ಈಗ ನಾನು ತಮ್ಮ ಇಬ್ಬರೇ..
ಇದಾಗಿ ಎರಡು ತಿಂಗಳಲ್ಲಿ ದೊಡಕ್ಕ ಬರುತ್ತಾಳೆ ಎಂಬ ಸುದ್ದಿ ಸಿಕ್ಕಿತು..ಅಕ್ಕ ಬರುತ್ತಾಳೆ ಆಟವಾಡಬಹುದು ಎಂದು ಕಾಯುತ್ತಿದ್ದ ನನಗೆ ನಿರಾಸೆ ಕಾದಿತ್ತು..ಅಕ್ಕನ ಹೊಟ್ಟೆಯಲ್ಲಿ ಪಾಪು ಇದೆ ಜಾಸ್ತಿ ಕಾಡಿಸಬಾರದು ಎಂದು ಅಮ್ಮ ಆಜ್ಞೆ ಮಾಡಿದರು...
ಮುಂದುವರೆಯುವುದು...