ವಿಧಿಯ ಆಟ ಕಲಿಸಿತು ಪಾಠಭಾಗ 4
ವಿಧಿಯ ಆಟ ಕಲಿಸಿತು ಪಾಠಭಾಗ 4
ಅಮ್ಮನ ಸಾವು ಅರಗಿಸಿಕೊಳ್ಳಲು ಬಹಳಾ ಕಷ್ಟವಾಗಿತ್ತು..ಅಪ್ಪ ಯಾವಾಗಲೂ ತೋಟದ ಕೆಲಸದಲ್ಲಿ ನಿರತರಾಗಿರುತ್ತಿದ್ದರು.. ಸೂಲಗಿತ್ತಿ ಸೀತಮ್ಮ ಅವರ ಸಹಾಯಕ್ಕೆ ಯಾರಾದರೂ ಒಬ್ಬರು ಬೇಕೆಂದು ಹುಡುಕುವಾಗ ಅಪ್ಪಯ್ಯ ಅವರು ಬಳಿ ನನ್ನನು ಕಳುಹಿಸುತ್ತಿದ್ದರು.. ಸೀತಮ್ಮನ ಜೊತೆ ಆರಂಭದಲ್ಲಿ ಹೆರಿಗೆ ಮಾಡಿಸುವಾಗ ಕೂಗಾಟ ಕಿರುಚಾಟ ನರಳಾಟಕ್ಕೆ ಭಯವಾಗುತ್ತಿತ್ತು..ದಿನಗಳು ಕಳೆದಂತೆ ದೈರ್ಯ ತಂದುಕೊಂಡು ಅವರೊಂದಿಗೆ ಹೋಗುತ್ತಿದ್ದೆ.. ಸೀತಮ್ಮನ ಸಾವಿನಿಂದ ಊರಿನಲ್ಲಿ ಹೆರಿಗೆ ಮಾಡಿಸುವವರು ಯಾರು ಇಲ್ಲದಂತಾಯಿತು.. ಅಪ್ಪಯ್ಯ ನನಗೆ ದೈರ್ಯ ಹೇಳಿ ಕಲಿತ ವಿದ್ಯೆಯಿಂದ ಉಪಕಾರ ಮಾಡು ಎಂದು ಸಲಹೆ ಇಟ್ಟರು..ದೇವರು ನನಗೆ ಒಳ್ಳೆಯ ನೆನಪಿನ ಶಕ್ತಿ ಕೊಟ್ಟಿದ್ದ.. ಏನನ್ನಾದರೂ ಒಂದೆರಡು ಬಾರಿ ಕೇಳಿದರೆ ಸಾಕು ನನ್ನ ಮನದಲ್ಲಿ ಅವುಗಳು ಅಚ್ಚಳಿಯದಂತೆ ಉಳಿಯುತ್ತಿದ್ದವು..
ಸೀತಮ್ಮನ ನಂತರ ನಾನೇ ಸೂಲಗಿತ್ತಿಯಾದೆ.ಯಾರಿಗೆ ಹೆರಿಗೆ ನೋವು ಬಂದಿದ್ದರು ಹೆರಿಗೆ ಮಾಡಿಸಲು ನನ್ನನ್ನು ಕರೆಯುತ್ತಿದ್ದರು.ಸಂಸಾರದ ಸುಖವನ್ನ ಕಾಣದ ನಾನು ಮಕ್ಕಳ ಲಾಲನೆ ಪಾಲನೆ ಮಾಡದ ನಾನು ಮಕ್ಕಳನ್ನು ಭೂಮಿಗೆ ತರುವ ಕಾಯಕವನ್ನು ಬೆಳೆಸಿಕೊಂಡೆ.. ಅದೆಷ್ಟೋ ಬಾರಿ ಹಸುಗೂಸಿನ ಕರುಳ ಬಳ್ಳಿ ಕತ್ತರಿಸುವಾಗ ನನಗಿಂತ ಭಾಗ್ಯವಿಲ್ಲವಲ್ಲ ಎಂದು ಮನಸ್ಸು ನೋವನ್ನು ಅನುಭವಿಸುತ್ತಿತ್ತು.. ಹೆರಿಗೆಯನ್ನು ಮಾಡಿಸಿ ಒಂದೆರಡು ದಿನ ಅಲ್ಲಿದ್ದು ಬರುತ್ತಿದ್ದೆ..ಆದರೆ ಯಾವುದೇ ಔಷಧಿಗಳನ್ನು ಕೊಡಲು ನನಗೆ ತಿಳಿದಿರಲಿಲ್ಲ.. ನಮ್ಮೂರಿನ ಪಂಡಿತರ ಬಳಿ ಒಂದಿಷ್ಟು ವೈದ್ಯಕೀಯ ಗಿಡಮೂಲಿಕೆಗಳನ್ನು ಔಷಧಿಗಳನ್ನು ಕೇಳಿ ತಿಳಿದುಕೊಂಡು ಅವುಗಳನ್ನು ಕಲಿತು ಕೊಡಲಾರಂಬಿಸಿದೆ..ಆಗೆಲ್ಲಾ ಮನೆಮದ್ದುಗಳಿಗೆ ಬಹಳ ಪ್ರಾಮುಖ್ಯತೆ ಇತ್ತು.. ವೀಳ್ಯದೆಲೆ ಕಷಾಯ ಮಲ್ಲಿಗೆ ಕುಡಿ ಕಷಾಯ ಇವುಗಳಿಂದಲೇ ಶೀತ ಕೆಮ್ಮು ನೆಗಡಿ ವಾಸಿ ಮಾಡುತ್ತಿದ್ದೆ.. ಬಾಣಂತಿಯರಿಗೆ ಕೊಡುವ ಲೇಹ ಹಾಗು ಔಷಧಿಗಳನ್ನು ಕಲಿತು ಹರಿಗೆಯಾದ ನಂತರ ಬಾಣಂತಿಯ ಆರೈಕೆ ಮಾಡುವುದನ್ನು ಕಲಿತು ಮಾಡಲಾರಂಭಿಸಿದೆ
ಮುಂಜಾನೆ 4ಕ್ಕೆ ಎದ್ದು ಸ್ನಾನ ಮುಗಿಸಿ ಅರುಣರಾಗದ ಜೊತೆಗೆ ಒಂದಿಷ್ಟು ದೇವರ ನಾಮಗಳನ್ನು ಹಾಡಿ ಅಡಿಗೆ ಕೊಠಡಿಯಲ್ಲಿ ನಾದಿನಿಗೆ ಸ್ವಲ್ಪಮಟ್ಟಿಗೆ ಸಹಾಯ ಮಾಡಿ ತೋಟಕ್ಕೆ ಹೊರಟರೆ ದನಗಳಿಗೆ ಹುಲ್ಲು ಹಟ್ಟಿಗೆ ಸೊಪ್ಪು ಹೊರೆ ಮಾಡಿ ಒಂದಿಷ್ಟು ಕಟ್ಟಿಗೆಗಳನ್ನು ಕೂಡಿಟ್ಟು ಮನೆಗೆ ಬಂದು ಒಂದು ಮುಷ್ಟಿ ಊಟ ಮಾಡಿ ಕುಳಿತು ದಣಿವಾರಿಸಿಕೊಂಡು ಸಂಜೆ ಹೊತ್ತಿಗೆ ಭಜನೆ ಮಾಡಲು ಆರಂಭಿಸುತ್ತಿದ್ದೆ. ಬಾಲ್ಯದಲ್ಲಿ ಕಲಿಸಿದ ಹಾಡುಗಳು ಅಲ್ಲಿ ಇಲ್ಲಿ ಹೆರಿಗೆ ಮಾಡಿಸಲೆಂದು ಹೋದಾಗ ಅವರ ಮನೆಯಲ್ಲಿ ಹೇಳುತ್ತಿದ್ದ ದೇವರ ನಾಮಗಳನ್ನು ಕಲಿತು ಹಾಡುತ್ತಿದ್ದ.... ಸಂಜೆ ಆರರಿಂದ ರಾತ್ರಿ 8:30ವರೆಗೂ ಹಾಡುವಷ್ಟು ಹಾಡುಗಳು ನನ್ನ ಬತ್ತಳಿಕೆಯಲ್ಲಿದ್ದವು ದೇವರನ್ನು ಸ್ಮರಿಸುತ್ತಾ ಅನ್ಯ ಯೋಚನೆ ಬಾರದಂತೆ ನನ್ನನ್ನು ನಾನು ತೊಡಗಿಸಿಕೊಳ್ಳುತ್ತಿದ್ದೆ.... ಬದುಕು ಒಂದು ಹಂತದಲ್ಲಿ ನಡೆಯುತ್ತಿದೆ ಎಂದು ಅನಿಸುತ್ತಿದ್ದಂತೆ ಅಪ್ಪಯ್ಯ ಹಾಸಿಗೆ ಹಾಸಿದರು. ಅಪ್ಪನನ್ನು ಕಳೆದುಕೊಂಡು ಬದುಕುವ ಕಲ್ಪನೆಯೇ ಭಯಂಕರವಾಗಿರುತ್ತಿತ್ತು.. ಆದರೆ ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತವಲ್ಲವೇ..?? ಅಪ್ಪ ನಮ್ಮನ್ನು ಬಿಟ್ಟು ಹೊರಡುವ ಗಳಿಗೆ ಬಂದೆ ಬಿಟ್ಟಿತು ಒಂದು ಮುಂಜಾನೆ ಅಪ್ಪ ಏಳಲೇ ಇಲ್ಲ.. ಅಪ್ಪನ ಸಾವು ನನ್ನನು ಕುಗ್ಗಿಸಿತು..ಮಂಕಾದೆ..ಯಾರು ಎಲ್ಲಿಗೆ ಕರೆದರೂ ಹೋಗಲು ಮನಸಿರಲ್ಲಿಲ್ಲ.ಮನೆಯ ಕತ್ತಲೆ ಕೋಣೆಯಲ್ಲಿ ಒಂಟಿಯಾಗಿ ಕಾಲಕಳೆಯಲಾರಂಭಿಸಿದೆ..ತಮ್ಮ ತಮ್ಮ ನ ಹೆಂಡತಿ ನನ್ನ ಮೇಲೆ ಅಪಾರವಾದ ಪ್ರೀತಿ ಗೌರವವನ್ನು ಹೊಂದಿದ್ದರು. ನಿನಗಾಗಿ ನಾವಿದ್ದೇವೆ.. ನೀನು ನನ್ನನ್ನು ಬಿಟ್ಟು ಹೋಗಬೇಡ ಅಕ್ಕ ಎಂದು ಗೋಗರೆಯುತ್ತಿದ್ದ ತಮ್ಮನ ಮಾತು ಕಿವಿಗೆ ಅಪ್ಪಳಿಸುತ್ತಿತ್ತು.. ಬದುಕು ಬಂದಂತೆ ಸ್ವೀಕರಿಸಬೇಕು ಎಂಬ ಅಪ್ಪನ ಮಾತುಗಳು ನೆನಪಾಗುತ್ತಿದ್ದವು..
ಗಂಡನ ಮನೆಯಲ್ಲಿ ಗಂಡನಿಲ್ಲ
ತವರು ಮನೆಯಲ್ಲಿ ತಾಯಿ ಇಲ್ಲ
ತಂದೆಯೇ ನನ್ನ ಪಾಲಿಗೆ ಆಗಿದ್ದರು ಎಲ್ಲ
ಅವರನ್ನು ಕಳೆದುಕೊಂಡ ಬದುಕ ಮುನ್ನಡೆಸಲು
ಮನಸು ಇಚ್ಛಿಸುತ್ತಿರಲ್ಲಿಲ್ಲ ..
ಸಾಯುವ ನಿರ್ಧಾರ ಮಾಡುವ ಹೇಡಿ ನಾನಾಗಿರಲ್ಲಿಲ್ಲ..